ನಾನು ಆನಂದ್ ಸಿಂಗ್ ಅಣ್ಣ-ತಮ್ಮಂದಿರಿದ್ದಂತೆ: ಶಾಸಕ ಗಣೇಶ್
ಬಳ್ಳಾರಿ, ಏಪ್ರಿಲ್ 26: ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ಜೈಲುಪಾಲಾಗಿ ನಿನ್ನೆಯಷ್ಟೆ ಜಾಮೀನಿನ ಮೇಲೆ ಹೊರಬಂದಿರುವ ಕಂಪ್ಲಿ ಶಾಸಕ ಗಣೇಶ್, ಶಾಂತಿ ಮಂತ್ರ ಪಠಿಸುತ್ತಿದ್ದು, ನಾನು ಆನಂದ್ ಸಿಂಗ್ ಅಣ್ಣ-ತಮ್ಮಂದಿರಿದ್ದಂತೆ ಎಂದಿದ್ದಾರೆ.
ಕಂಪ್ಲಿ ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಣೇಶ್ ಅವರು, ಈಗಲ್ಟನ್ ರೆಸಾರ್ಟ್ನಲ್ಲಿ ನನಗೂ ಆನಂದ್ ಸಿಂಗ್ಗೂ ನಡುವೆ ನಡೆದ ಗಲಾಟೆ ಆಕಸ್ಮಿಕ, ಆನಂದ್ ಸಿಂಗ್ ಬಗ್ಗೆ ನನಗೆ ಈಗಲೂ ಅಭಿಮಾನವಿದೆ ಎಂದು ಪ್ರೀತಿಯ ಮಾತುಗಳನ್ನಾಡಿದ್ದಾರೆ ಗಣೇಶ್.
ಗಲಾಟೆ ನಡೆದ ಸನ್ನಿವೇಶದ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಲು ನಿರಾಕರಿಸಿದ ಗಣೇಶ್ ಎಲ್ಲವೂ ಸರಿಹೋಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷವು ತನ್ನನ್ನು ಅಮಾನತು ಆದೇಶವನ್ನು ವಾಪಸ್ ಪಡೆಯುವ ವಿಶ್ವಾಸವನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ.
ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಕೊನೆಗೂ ಬೆಂಗಳೂರಿಗೆ ಬಂದ ಕಂಪ್ಲಿ ಗಣೇಶ್
ರಮೇಶ್ ಜಾರಕಿಹೊಳಿ ಅವರ ಬಗ್ಗೆ ಮಾತನಾಡಿದ ಗಣೇಶ್, ಅವರು ನಮ್ಮ ಸಮುದಾಯದ ಹಿರಿಯರು ಹಾಗಾಗಿ ಅವರು ನಮ್ಮ ಮನೆಗೆ ಭೇಟಿ ನೀಡಿದ್ದರು, ಅವರು ಬಿಜೆಪಿಗೆ ಹೋಗುವುದಿಲ್ಲ, ಅವರು ಕಾಂಗ್ರೆಸ್ನಲ್ಲಿಯೇ ಉಳಿಯುವಂತೆ ಮನವೊಲಿಸುತ್ತೇವೆ ಎಂದು ಹೇಳಿದರು.
'ಕಂಪ್ಲಿಯಲ್ಲೇ ಉಳಿದು ಅಭಿವೃದ್ಧಿಯೆಡೆ ಗಮನ'
ನಾನೂ ಸಹ ಬಿಜೆಪಿಗೆ ಹೋಗುವ ಮಾತೇ ಇಲ್ಲ, ಸಮ್ಮಿಶ್ರ ಸರ್ಕಾರ ಭದ್ರವಾಗಿಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ನೆರವಾಗುವುದು ನಮ್ಮ ಧ್ಯೇಯ ಎಂದು ಜೆ.ಎನ್.ಗಣೇಶ್ ಅವರು ಹೇಳಿದರು. ಜೊತೆಗೆ ತಾವು ಇನ್ನು ಮುಂದೆ ಕಂಪ್ಲಿಯಲ್ಲೇ ಇರಲಿದ್ದು ಕ್ಷೇತ್ರದ ಅಭಿವೃದ್ಧಿಯ ಕಡೆಗಮನ ಹರಿಸುವುದಾಗಿ ಹೇಳಿದ್ದರು.
68 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ ಆದ ಕಂಪ್ಲಿ ಶಾಸಕ ಗಣೇಶ್
ಜನವರಿ 19 ರಂದು ಈಗಲ್ಟನ್ ರೆಸಾರ್ಟ್ನಲ್ಲಿ ಗಲಾಟೆ
ಜನವರಿ 19 ರಂದು ಈಗಲ್ಟನ್ ರೆಸಾರ್ಟ್ನಲ್ಲಿ ನಡೆದ ಗಲಾಟೆಯಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಗಣೇಶ್ ಹೊಡೆತಕ್ಕೆ ಆನಂದ್ ಸಿಂಗ್ ಅವರಿಗೆ ತೀವ್ರ ಪೆಟ್ಟಾಗಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಸೇರಿದ್ದರು.
ಆರೋಪಿ ಶಾಸಕ ಗಣೇಶ್ ಪೊಲೀಸರಿಗೆ ಸಿಕ್ಕಿ ಬಿದ್ದದ್ದು ಹೇಗೆ?
ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಗಣೇಶ್
ಹಲ್ಲೆ ನಂತರ ತಲೆ ಮರೆಸಿಕೊಂಡಿದ್ದ ಶಾಸಕ ಜೆ.ಎನ್.ಗಣೇಶ್ ಅವರು ಗುಜರಾತಿನಲ್ಲಿ ಫೆಬ್ರವರಿ 20 ರಂದು ಪೊಲೀಸರ ಬಲೆಗೆ ಬಿದ್ದರು ಅವರನ್ನು ಫೆಬ್ರವರಿ 21 ರಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಅವರು ನಿನ್ನೆಯಷ್ಟೆ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಪ್ರಕರಣ ಇನ್ನೂ ಚಾಲ್ತಿಯಲ್ಲಿದೆ.
ರಮೇಶ್ ಜಾರಕಿಹೊಳಿ ಬಳಗ ಸೇರುತ್ತಾರಾ ಗಣೇಶ್?
ಜೆ.ಎನ್.ಗಣೇಶ್ ಅವರನ್ನು ಕೆಪಿಸಿಸಿಯು ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ. ಆ ನಂತರ ರಮೇಶ್ ಜಾರಕಿಹೊಳಿ ಅವರು ಗಣೇಶ್ ಅವರ ಮನೆಗೆ ಭೇಟಿ ನೀಡಿದ್ದರು. ಇದು ಅನುಮಾನ ಹುಟ್ಟಿಸಿದ್ದು, ಕಾಂಗ್ರೆಸ್ನಿಂದ ಒಂದು ಕಾಲು ಹೊರಗಿಟ್ಟಿರುವ ರಮೇಶ್ ಜಾರಕಿಹೊಳಿ ಅವರು ಗಣೇಶ್ ಅವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆಯೇ ಎಂಬ ಅನುಮಾನ ಮೂಡಿದೆ.