ವಿಜಯನಗರ ಪ್ರತ್ಯೇಕ ಜಿಲ್ಲೆ ವಿಚಾರ: ಹೊಸ ಸುಳಿವು ನೀಡಿದ ಆನಂದ್ ಸಿಂಗ್
ಬಳ್ಳಾರಿ, ಸೆಪ್ಟೆಂಬರ್ 17: ವಿಜಯನಗರ ಪ್ರತ್ಯೇಕ ಜಿಲ್ಲೆ ಘೋಷಣೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೊಸ ಸುಳಿವು ನೀಡಿದ್ದಾರೆ.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಇಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈ ದಿನ ನಾವೆಲ್ಲರೂ ಅಣ್ಣ- ತಮ್ಮಂದಿರಂತೆ ಒಟ್ಟಿಗೆ ಇದ್ದೇವೆ. ನಮ್ಮಣ್ಣ ಇಲ್ಲೇ ಇದ್ದಾನೆ. ಅಣ್ಣ ಹೇಳಿದಂತೆ ನಾನು ಕೇಳುತ್ತೇನೆ. ಅವರ ಆಶೀರ್ವಾದ ಸದಾ ನಮ್ಮ ಮೇಲಿದೆ. ಅವರು ಈಗಾಗಲೇ ಪ್ರತ್ಯೇಕ ಜಿಲ್ಲೆ ಕುರಿತು ಭರವಸೆ ನೀಡಿದ್ದಾರೆ" ಎಂದು ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರಿಗೆ ಈ ವಿಚಾರವಾಗಿ ಕೈಮುಗಿದರು.
ಐತಿಹಾಸಿಕ ಧ್ವಜಾರೋಹಣ ನೆರವೇರಿಸಿದ ಸಚಿವ ಆನಂದ್ ಸಿಂಗ್
ಪರೋಕ್ಷವಾಗಿ ಸೋಮಶೇಖರ ರೆಡ್ಡಿ ಅವರು ಸಹ ಜಿಲ್ಲೆ ಪ್ರತ್ಯೇಕ ಮಾಡುವ ಕುರಿತು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಗೆ ಹೋದ್ರೆ ತಪ್ಪೇನಿಲ್ಲ: ಸಚಿವ ಸಂಪುಟದ ವಿಸ್ತರಣೆ ಸಲುವಾಗಿಯೇ ಸಿಎಂ ಬಿಎಸ್ ಯಡಿಯೂರಪ್ಪ ಅವರು ದೆಹಲಿಗೆ ಹೋದರೆ ತಪ್ಪೇನಿಲ್ಲ. ಅವರು ನೆರೆಹಾವಳಿ ಪರಿಹಾರಕ್ಕಾಗಿ ಮನವಿ ಮಾಡಿಕೊಳ್ಳಲು ದೆಹಲಿಗೆ ಹೋಗುತ್ತಿದ್ದಾರೆ ಅಂತ ಮಾಹಿತಿಯಿದೆ. ರಾಜ್ಯ ಸಚಿವ ಸಂಪುಟದ ವಿಸ್ತರಣೆ ವಿಚಾರವಾಗಿ ಸಿಎಂ ಬಿಎಸ್ ವೈ ದೆಹಲಿಗೆ ಹೋಗಲಿ ಬಿಡಿ ಎಂದರು.
ಆಂಜನೇಯ ಸ್ವಾಮಿ ಅನುಗ್ರಹಿಸಿದಾಗ ಮಂತ್ರಿಯಾಗುವೆ: ದೇಶಾದ್ಯಂತ ಪ್ರಧಾನಿ ಮೋದಿ ಅವರ 70ನೇ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಬಿಜೆಪಿ ಯುವ ಮೋರ್ಚ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ರಕ್ತದಾನ ಮಾಡಿದರು. ಇದೇ ವೇಳೆ ಮಾತನಾಡಿದ ಸೋಮಶೇಖರ ರೆಡ್ಡಿ, "ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ಆಂಜನೇಯ ಸ್ವಾಮಿ ಅನುಗ್ರಹ ನೀಡಿದಾಗ ಆಗ್ತೇನೆ. ನಾನು ಮಂತ್ರಿ ಸ್ಥಾನ ಕೊಡಿ ಎಂದು ಕೇಳಲ್ಲ. ದೇವರ ಅನುಗ್ರಹ ಇದ್ದರೆ ನಾನು ಮಂತ್ರಿ ಆಗುವೆ, ಪಕ್ಷವೇ ನನಗೆ ಮಂತ್ರಿ ಸ್ಥಾನ ಕೊಟ್ಟರೆ ಮುಂದೆ ನೋಡೋಣ" ಎಂದಿದ್ದಾರೆ.