ಮೈಲಾರ ಕೂಲಹಳ್ಳಿ ಜಾತ್ರೆಯಲ್ಲಿ ಭಕ್ತರು ಭಾಗವಹಿಸಲು ಅನುಮತಿ ನೀಡಿ
ಹಗರಿಬೊಮ್ಮನಹಳ್ಳಿ, ಫೆ.26: ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಮೈಲಾರ ಕುರುವತ್ತಿ ಕೊಟ್ಟೂರು ಕೂಲಹಳ್ಳಿ ಜಾತ್ರೆ ಮತ್ತು ಕಾರಣಿಕಗಳನ್ನು ಕೋವಿಡ್ 19 ನೆಪವೊಡ್ಡಿ ರದ್ದುಪಡಿಸಿ ಜಿಲ್ಲಾಧಿಕಾರಿ ಆದೇಶಿಸಿರುವ ಜೊತೆಗೆ ಭಕ್ತರನ್ನು ಭಾಗವಹಿಸುವುದನ್ನು ತಡೆಯಲು ಚೆಕ್ ಪೋಸ್ಟ್ ನಿರ್ಮಿಸಿರುವುದು ಭಕ್ತರ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಕೋರೋನಾ ಸೋಂಕು ಕಡಿಮೆಯಾಗಿದ್ದು ಜನತೆ ಭಕ್ತಿಭಾವ ಮತ್ತು ಶ್ರದ್ಧೆಯಿಂದ ಆಚರಿಸುವ ಬಹು ವರ್ಷಗಳ ದೇವಿಉತ್ಸವ ಹಾಗೂ ಜಾತ್ರೆಗಳನ್ನು ರದ್ದು ಮಾಡುವ ಮೂಲಕ ಜನರ ಭಾವನೆಗಳಿಗೆ ಘಾಸಿ ಉಂಟು ಮಾಡುವ ಪ್ರಯತ್ನ ಇದಾಗಿದೆ ಎಂದರು
ಒಂದು ಕಡೆ ಲಕ್ಷಾಂತರ ಜನ ಸೇರಿ ಸಮಾವೇಶ ಮತ್ತು ಪಾದಯಾತ್ರೆ ಮಾಡಲು ಅನುಮತಿ ನೀಡುವ ನೀವು ಜಾತ್ರೆಗಳನ್ನು ರದ್ದು ಮಾಡುತ್ತಿರುವುದು ಯಾವ ನ್ಯಾಯ..? ಸಮಾವೇಶ ಪಾದಯಾತ್ರೆಯಲ್ಲಿ ಹರಡದ ಕೋರೋನಾ ಸೋಂಕು ಜಾತ್ರೆ, ರಥೋತ್ಸವಗಳಲ್ಲಿ ಹೇಗೆ ಹರಡುತ್ತದೆ ಎಂದು ಪತ್ರೇಶ್ ಪ್ರಶ್ನಿಸಿದರು
ಜಾತ್ರೆಗಳನ್ನು ನಂಬಿ ಬದುಕುವ ಮಿಠಾಯಿ ಅಂಗಡಿ, ಸರ್ಕಸ್ ಕಂಪನಿ, ಮಕ್ಕಳಾಟಕೆ ಅಂಗಡಿ, ತೆಂಗಿನಕಾಯಿ ಮತ್ತು ಹಣ್ಣು ಹಾಗೂ ಬಳೆ ವ್ಯಾಪಾರಿಗಳು ಹಾಗೂ ನಾಟಕ ಕಂಪನಿ ಕಲಾವಿದರು ಈ ನಿರ್ಧಾರದಿಂದ ಬೀದಿಗೆ ಬೀಳುವಂತಾಗಿದೆ ಇವರೆಲ್ಲರಿಗೂ ವ್ಯಾಪಾರ ಮತ್ತು ಪ್ರದರ್ಶನಕ್ಕೆ ಅವಕಾಶ ನೀಡಲು ಮತ್ತು ಭಕ್ತರು ಭಾಗವಹಿಸಲು ಅವಕಾಶ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಪತ್ರೇಶ್ ತಿಳಿಸಿದರು.