ವಿಜಯನಗರ ಜಿಲ್ಲೆ; ಅಜಯ್ ರಾವ್ಗೆ ಕನ್ನಡ ಪಾಠ ಮಾಡಿದ ನೆಟ್ಟಿಗರು!
ಬಳ್ಳಾರಿ, ಡಿಸೆಂಬರ್ 23: ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ಜಿಲ್ಲೆ ರಚನೆ ಮಾಡಲು ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ನಟ, ನಿರ್ಮಾಪಕ ಅಜಯ್ ರಾವ್ ನೂತನ ಜಿಲ್ಲೆ ರಚನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಅಜಯ್ ರಾವ್ ಹೊಸಪೇಟೆಯ ನಿವಾಸಿ. ಹೊಸಪೇಟೆ ಕೇಂದ್ರಿತವಾಗಿ ಹೊಸ ಜಿಲ್ಲೆ ರಚನೆ ಆಗಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅರಣ್ಯ ಸಚಿವ ಹಾಗೂ ಸ್ಥಳೀಯ ಶಾಸಕ ಆನಂದ್ ಸಿಂಗ್ ಅವರನ್ನು ಭೇಟಿಯಾಗಿ ನೂತನ ಜಿಲ್ಲೆ ರಚನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯದ 31ನೇ ಜಿಲ್ಲೆ ವಿಜಯನಗರ ಭೂಪಟ
ಹೊಸಪೇಟೆಯ ಆನಂದ್ ಸಿಂಗ್ ಕಚೇರಿಗೆ ಭೇಟಿ ನೀಡಿದ್ದ ಅಜಯ್ ರಾವ್ ಅಭಿನಂದನೆ ಪತ್ರವನ್ನು ಸಲ್ಲಿಸಿದ್ದರು. ಈ ಕುರಿತು ಫೇಸ್ ಬುಕ್ ಪೋಸ್ಟ್ ಸಹ ಹಾಕಿದ್ದರು. ಆದರೆ, ಪತ್ರ ಇಂಗ್ಲೀಶ್ನಲ್ಲಿರುವ ಕಾರಣ ಅನೇಕರು ನಟನ ವಿರುದ್ಧ ಆಕ್ರೋಶ ವ್ಯಕ್ತಡಿಸಿದ್ದಾರೆ.
ವಿಜಯನಗರ ಜಿಲ್ಲೆ ರಚನೆ: ರೆಡ್ಡಿ-ರಾಮುಲು ಬಳಗದಲ್ಲಿ ಬಿರುಕು?
"ಹೊಸಪೇಟೆ ಕೇಂದ್ರಿತ ವಿಜಯನಗರ ಜಿಲ್ಲೆ ರಚನೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಜಿಲ್ಲೆ ಘೋಷಣೆಯಾಗುವ ಮೂಲಕ ವಿಜಯನಗರದ ಗತವೈಭವ ಮರಳಿ ಬಂದಂತಾಗಿದೆ. ನಾನು ಕೂಡ ಹೊಸಪೇಟೆ ನಗರದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆಯಾಗುತ್ತಿದೆ. ನನ್ನ ಹೂಟ್ಟೂರು ಹೊಸಪೇಟೆ ಈಗ ವಿಜಯನಗರ ಜಿಲ್ಲೆಯಾಗುತ್ತಿರುವುದು ಹೆಮ್ಮೆಯ ವಿಷಯ. ಅಂತಿಮ ಅಧಿಸೂಚನೆಗಾಗಿ ಕಾಯುತ್ತಿರುವೆ" ಎಂದು ಅಜಯ್ ರಾವ್ ಪತ್ರದಲ್ಲಿ ಹೇಳಿದ್ದಾರೆ.
ಬಳ್ಳಾರಿ ವಿಭಜನೆ; ವಿಜಯನಗರ ಜಿಲ್ಲಾ ರಚನೆ ಹೋರಾಟದ ಚಿತ್ರಣ
ಆದರೆ, ಈಗ ಅಜಯ್ ರಾವ್ ಫೇಸ್ ಬುಕ್ ಪೇಜ್ನಲ್ಲಿ ಜನರು ಕಮೆಂಟ್ ಹಾಕುತ್ತಿದ್ದಾರೆ. ಇಂಗ್ಲೀಶ್ನಲ್ಲಿ ಅಭಿನಂದನಾ ಪತ್ರವನ್ನು ಸಲ್ಲಿಸಿದ್ದು ಏಕೆ, ಕನ್ನಡವನ್ನು ಏಕೆ ಬಳಕೆ ಮಾಡಿಲ್ಲ? ಎಂದು ನಟನನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಕನ್ನಡ ಬಳಸಿ ಸರ್. ಯಾಕ್ ನೀವೆಲ್ಲ ಹಿಂಗೆ ಸಿನಿಮಾದಲ್ಲಿ ನಟನೆಗೆ ಮಾತ್ರ (ದುಡ್ಡು ಮಾಡೋಕ್ಕೆ) ಕನ್ನಡ ಬೇಕ ನಿಮ್ಗೆ, ಸೂಪರ್ ಅಜಯ್ ಬಟ್ ರೈಟ್ ಕನ್ನಡ, ಕನ್ನಡ ನಿಮ್ಗೆ ಬರಲ್ವಾ ಅಥವ ಅವ್ರುಗೆ ಬರಲ್ವಾ, ನಾವು ಇಂಗ್ಲಿಶ್ ಸಿನಿಮಾ ನೋಡ್ತಿವಿ ನಿಮ್ಮ ಸಿನಿಮಾ ನೋಡಲ್ಲ ಓಕೆನಾ? ಹೀಗೆ ಹಲವು ಕಂಮೆಂಟ್ಗಳನ್ನು ಹಾಕಲಾಗಿದೆ.