ತಿಂಗಳ ನಂತರ ಹಂಪಿಯಿಂದ ಬೆಂಗಳೂರು ತಲುಪಿದ ನಟಿ ಜಯಂತಿ
ಬಳ್ಳಾರಿ, ಏಪ್ರಿಲ್ 21: ಲಾಕ್ ಡೌನ್ ಹಿನ್ನೆಲೆಯಲ್ಲಿ ಹಂಪಿಯ ಹೋಟೆಲೊಂದರಲ್ಲಿ ಕಳೆದ ಒಂದು ತಿಂಗಳಿನಿಂದ ಉಳಿದುಕೊಂಡಿದ್ದ ಹಿರಿಯ ನಟಿ ಜಯಂತಿ ಕೊನೆಗೂ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಮಾರ್ಚ್ 22ರಂದು ಹಂಪಿಗೆ ಬಂದಿದ್ದ ನಟಿ ಜಯಂತಿ, ಲಾಕ್ ಡೌನ್ ನಿಂದಾಗಿ ಅಲ್ಲಿಯೇ ಸಿಲುಕಿಕೊಂಡಿದ್ದರು. ಜಿಲ್ಲಾಡಳಿತದ ಅನುಮತಿ ಮೇರೆಗೆ ನಿನ್ನೆ ಸಂಜೆ ಬೆಂಗಳೂರಿಗೆ ಮಗ ಕೃಷ್ಣಕುಮಾರ್ ಜೊತೆ ಹೊರಟಿರುವುದಾಗಿ ತಿಳಿದುಬಂದಿದೆ.
ಹಂಪಿ ನೋಡಲು ಬಂದಿದ್ದ ನಟಿ ಜಯಂತಿ
"ಹಂಪಿ ಬೈ ನೈಟ್" ಯೋಜನೆ ಕಾಮಗಾರಿ ವೀಕ್ಷಣೆಗಾಗಿ ವಿಶ್ವವಿಖ್ಯಾತ ಹಂಪಿಗೆ ಮಾರ್ಚ್ 22ಕ್ಕೆ ನಟಿ ಜಯಂತಿ ಹಾಗೂ ಅವರ ಮಗ ಕೃಷ್ಣಕುಮಾರ್ ಬಂದಿದ್ದರು. ಆದರೆ ಅವರು ಹಂಪಿಗೆ ಬರುತ್ತಿದ್ದಂತೆ ಲಾಕ್ ಡೌನ್ ವಿಧಿಸಲಾಗಿತ್ತು. ಹೀಗಾಗಿ ಕಳೆದ ಒಂದು ತಿಂಗಳ ಕಾಲ ಹೋಟೆಲ್ ನಲ್ಲೇ ಜಯಂತಿ ಅವರು ಉಳಿದುಕೊಂಡಿದ್ದರು.
22 ದಿನಗಳಿಂದ ಹಂಪಿಯಲ್ಲಿ ಲಾಕ್ ಆದ ನಟಿ ಜಯಂತಿ
ಲಾಕ್ ಡೌನ್ ಗೆ ಸಹಕಾರ ನೀಡಿದ ಜಯಂತಿ
ಕೊರೊನಾ ವೈರಸ್ ಹರಡುವಿಕೆಯ ಭೀತಿ ಹಿನ್ನೆಲೆಯಲ್ಲಿ ಭಾರತವನ್ನು ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಲಾಗಿತ್ತು. ಹೀಗಾಗಿ ನಟಿ ಜಯಂತಿ ಹಾಗೂ ಅವರ ಮಗ ಬಳ್ಳಾರಿ ಜಿಲ್ಲೆಯ ಹಂಪಿಯ ಖಾಸಗಿ ಹೋಟೆಲ್ ನಲ್ಲೇ ಉಳಿದುಕೊಂಡರು. ಈ ಮೂಲಕ ಲಾಕ್ ಡೌನ್ ಗೆ ಸಹಕರಿಸಿದ್ದರು.
ಜಿಲ್ಲಾಡಳಿತದ ಅನುಮತಿ ಪಡೆದು ಬೆಂಗಳೂರಿಗೆ ವಾಪಸ್
ಏಪ್ರಿಲ್ 14ರ ನಂತರ ಮತ್ತೆ ಲಾಕ್ ಡೌನ್ ಅನ್ನು ಮೇ 13ರವರೆಗೂ ವಿಸ್ತರಿಸಲಾಯಿತು. ಹೀಗಾಗಿ ಸೋಮವಾರ ಜಿಲ್ಲಾಡಳಿತದ ಅನುಮತಿಯನ್ನು ಪಡೆದು ಜಯಂತಿ ಹಾಗೂ ಅವರ ಮಗ ಸೋಮವಾರ ಹಂಪಿಯಿಂದ ಹೊರಟಿದ್ದಾರೆ.
ಜಯಂತಿ ಅವರ ಕಾರಿನೊಂದಿಗೆ ಆಂಬುಲೆನ್ಸ್
ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್ ನಿಂದ ಹೊರಟ ಜಯಂತಿ ಅವರ ಕಾರಿನ ಹಿಂದೆ ಆಂಬುಲೆನ್ಸ್ ಅನ್ನೂ ಕಳಿಸಲಾಗಿದೆ. ಜಯಂತಿ ಅವರ ಆರೋಗ್ಯ ದೃಷ್ಟಿಯಿಂದ ಆಂಬುಲೆನ್ಸ್ ಕರೆದುಕೊಂಡು ಹೋಗಿರುವುದಾಗಿ ಮಗ ಕೃಷ್ಣಕುಮಾರ್ ತಿಳಿಸಿದ್ದಾರೆ.