ಹಂಪಿಯ ವಾಸ್ತುಶಿಲ್ಪ ಶೈಲಿಯಲ್ಲಿ ಅರಳಲಿದೆ ವಿಜಯನಗರ ಜಿಲ್ಲಾಡಳಿತ ಭವನ
ವಿಜಯನಗರ, ಮಾರ್ಚ್ 27: ಹೊಸಪೇಟೆ ನಗರದ ಟಿಎಸ್ಪಿ ಕಾರ್ಖಾನೆ ಆವರಣದ 83 ಎಕರೆ ಜಾಗದಲ್ಲಿ ವಿಜಯನಗರ ಜಿಲ್ಲಾಡಳಿತ ಭವನದ ಹೊಸ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆಗೆ 40 ಎಕರೆ ಜಾಗವನ್ನು ಹಸ್ತಾಂತರ ಮಾಡಲಾಗಿದೆ.
ಹಂಪಿಯ ವಾಸ್ತುಶಿಲ್ಪದ ಮಾದರಿಯಲ್ಲಿ ಅದ್ಧೂರಿಯಾಗಿ ಜಿಲ್ಲಾಡಳಿತ ಭವನ ಅರಳಲಿದ್ದು, ತುಂಗಭದ್ರಾ ಜಲಾಶಯ ಬಳಿಯ TSP ಕಾರ್ಖಾನೆಯ ಆವರಣದಲ್ಲಿ ನೂತನ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕ ಗೃಹ ಮಂಡಳಿಯ 83 ಎಕರೆಯಲ್ಲಿ ಕಂದಾಯ ಇಲಾಖೆಗೆ ಈಗಾಗಲೇ 40 ಎಕರೆ ಭೂಮಿಯನ್ನು ಹಸ್ತಾಂತರ ಮಾಡಲಾಗಿದೆ.
ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ನಿಯೋಗ: ಅಖಂಡ ಬಳ್ಳಾರಿಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮನವಿ
ಹಂಪಿ ವಾಸ್ತುಶಿಲ್ಪದ ಮಾದರಿ
ವಿಜಯನಗರ ರಾಜ್ಯದ 31ನೇ ಜಿಲ್ಲೆಯಾಗಿರುವುದರಿಂದ ಪಶ್ಚಿಮ ತಾಲೂಕುಗಳ ಜನರ ಅನುಕೂಲಕ್ಕಾಗಿ ಒಂದೇ ಸೂರಿನಡಿ ಜಿಲ್ಲಾ ಕಚೇರಿ ತಲೆ ಎತ್ತಲಿದೆ. ಜಿಲ್ಲಾಡಳಿತ ಭವನ ನಿರ್ಮಾಣ ಮಾಡಲು ಸದ್ದಿಲ್ಲದೆ ತಯಾರಿ ನಡೆಯುತ್ತಿದ್ದು, ಎರಡು ದಶಕಗಳ ಕನಸು ಈಡೇರಿದ ಹಿನ್ನೆಲೆಯಲ್ಲಿ ಶರವೇಗದಲ್ಲಿ ಒಂದೇ ಸೂರಿನಲ್ಲಿ ಜಿಲ್ಲಾಡಳಿತ ಭವನವನ್ನು ವಿಜಯನಗರ ವಾಸ್ತುಶಿಲ್ಪದ ಮಾದರಿಯಲ್ಲಿ ನಿರ್ಮಾಣಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಜಯನಗರ ಜಿಲ್ಲೆಯ ಜಿಲ್ಲಾಡಳಿತ ಭವನ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವುದಕ್ಕಾಗಿ ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಹಂಪಿಯ ಶಿಲ್ಪಾ ವೈಭವವನ್ನು ಜಿಲ್ಲಾಡಳಿತ ಭವನದಲ್ಲಿ ಅರಳಿಸಲಾಗುವ ಯೋಜನೆ ಹೊಂದಲಾಗಿದೆ.
ನಾನಾ ಇಲಾಖೆಗಳ ಕಚೇರಿಗಳು ಒಂದೇ ಸೂರಿನಡಿ
ಕರ್ನಾಟಕ ಗೃಹ ಮಂಡಳಿ ಬಳಿ ಟಿಎಸ್ಪಿಯ 83 ಎಕರೆ ಜಾಗ ಇದೆ. ಈ ಪೈಕಿ ಈಗ 40 ಎಕರೆ ಹಸ್ತಾಂತರಿಸಿದೆ. ಉಳಿದ ಜಾಗವನ್ನು ಪಡೆಯಲು ಜಿಲ್ಲಾಡಳಿತ ಮುಂದಾಗಿದೆ. ಉಳಿದ ಜಾಗ ದೊರೆತರೆ, ಮೆಡಿಕಲ್ ಕಾಲೇಜ್, ಜಿ.ಪಂ ಕಚೇರಿ, ಎಸ್ಪಿ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿ ಸೇರಿದಂತೆ ನಾನಾ ಇಲಾಖೆಗಳ ಕಚೇರಿಗಳು ಒಂದೇ ಸೂರಿನಡಿ ದೊರೆಯಲಿವೆ.
ಟಿಎಸ್ಪಿ ಕಾರ್ಖಾನೆಯ ಜಾಗ ಜಿಲ್ಲಾಡಳಿತ ಭವನಕ್ಕೆ ಸೂಕ್ತ
ನೂತನವಾಗಿ ವಿಜಯನಗರ ಜಿಲ್ಲೆಗೆ ಒಟ್ಟು 6 ತಾಲ್ಲೂಕುಗಳಿದ್ದು, ವಿಜಯನಗರದ ಜಿಲ್ಲಾ ಕೇಂದ್ರ ಸ್ಥಾನ ಹೊಸಪೇಟೆ ಸೇರಿ ಜಿಲ್ಲೆಯಲ್ಲಿ ಕೂಡ್ಲಿಗಿ, ಹರಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ, ತಾಲೂಕುಗಳಿವೆ. ಈ ಜಿಲ್ಲಾ ಕೇಂದ್ರದ ಜಿಲ್ಲಾಡಳಿತ ಭವನದಲ್ಲಿ ಎಲ್ಲಾ ಇಲಾಖೆಗಳು ಒಂದೇ ಕಡೆ ದೊರೆಯುವುದರಿಂದ ಜನರಿಗೂ ಅನುಕೂಲ ಆಗಲಿದೆ. ನೂತನ ಜಿಲ್ಲೆಯಲ್ಲಿ ಆರು ತಾಲೂಕು, 18 ಹೋಬಳಿಗಳು ಬರಲಿದ್ದು, 13,92,750 ಎಕರೆ ವಿಸ್ತೀರ್ಣ ಹೊಂದಿದೆ. ತುಂಗಭದ್ರಾ ಡ್ಯಾಂ ಪ್ರದೇಶದಲ್ಲಿರುವ ಟಿಎಸ್ಪಿ ಕಾರ್ಖಾನೆಯ ಜಾಗ ಜಿಲ್ಲಾಡಳಿತ ಭವನಕ್ಕೆ ಸೂಕ್ತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಾಸ್ತುಶಿಲ್ಪ ಪರಂಪರೆಗೂ ಕೊಡುಗೆ
ಹಂಪಿ ಕನ್ನಡ ವಿವಿಯ ಕಟ್ಟಡಗಳನ್ನು ಆಗಿನ ಕುಲಪತಿ ಡಾ.ಚಂದ್ರಶೇಖರ ಕಂಬಾರ ಅವರು ವಿಜಯನಗರ ವಾಸ್ತುಶಿಲ್ಪ ಶೈಲಿಯಲ್ಲಿ ಹಂಪಿ ನೆನಪಿಸುವಂತೇ ಕಟ್ಟಿಸಿದ್ದಾರೆ. ಈಗ ಅದೇ ರೀತಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಜಿಲ್ಲಾಡಳಿತ ಭವನವನ್ನು ಜನಸ್ನೇಹಿಯನ್ನಾಗಿ ಕಟ್ಟಿಸಲಾಗುತ್ತಿದ್ದು, ವಿಜಯನಗರದ ಉತ್ತರದ ತಾಲ್ಲೂಕುಗಳಿಂದ ಆಗಮಿಸುವ ಜನರು, ತಮ್ಮ ಕೆಲಸ ಕಾರ್ಯಗಳಿಗಾಗಿ ಪರದಾಡದಂತೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಖಾಸಗಿ ಸಂಸ್ಥೆಯೊಂದು ಸರ್ವೆ ನಡೆಸಿ ವರದಿ ಕೂಡ ಸಲ್ಲಿಸಿದೆ. ಹೀಗಾಗಿ ಇದೊಂದು ವಾಸ್ತುಶಿಲ್ಪ ಪರಂಪರೆಗೂ ಕೊಡುಗೆ ನೀಡುವ ಮಾದರಿಯಲ್ಲಿ ಭವನ ನಿರ್ಮಾಣಗೊಳ್ಳಲಿದೆ. ವಿಶೇಷಾಧಿಕಾರಿ ನೇಮಕಗೊಂಡ ಬಳಿಕ ಅವರ ಬಳಿ ಚರ್ಚಿಸಿ ಕಟ್ಟಡ ನಿರ್ಮಾಣದ ನೀಲನಕ್ಷೆಗೆ ಅಂತಿಮ ರೂಪ ನೀಡಲಾಗುತ್ತದೆ.