ಬಳ್ಳಾರಿ: ಕೊರೊನಾ ಸೋಂಕು ಗೆದ್ದ 99 ವರ್ಷದ ತಂದೆ, 67ರ ಮಗ
ಬಳ್ಳಾರಿ, ಸೆಪ್ಟೆಂಬರ್ 10: ಒಂದೆಜ್ಜೆ ಮುಂದೆ ಸಾಗಲು ಆಯಾಸ ಪಡುತ್ತಿದ್ದ, ನಿಲ್ಲಲು ಆಗದೇ ಪರಿತಪಿಸುತ್ತಿದ್ದ, 99 ವರ್ಷದ ಕೊರೊನಾ ಸೋಂಕಿತ ವೃದ್ಧರೊಬ್ಬರು ಚೇತರಿಸಿಕೊಂಡು ಅತ್ಯಂತ ನಗು ಮುಖದೊಂದಿಗೆ, ಯಾರ ಸಹಾಯವೂ ಇಲ್ಲದೇ ಸ್ವತಃ ಅವರೇ ನಡೆದು ಮನೆಗೆ ತೆರಳಿದ್ದಾರೆ.
ಬಳ್ಳಾರಿ ನಗರದ ಟ್ರಾಮಾಕೇರ್ ಸೆಂಟರ್ ನ ಕೋವಿಡ್ ಆಸ್ಪತ್ರೆಯಲ್ಲಿ ಸೆ.1 ರಂದು ಕೊರೊನಾ ವೈರಸ್ ಬಾಧಿತರಾಗಿ, ಸಿರಗುಪ್ಪ ತಾಲೂಕಿನ 99 ವರ್ಷ ವಯಸ್ಸಿನ ಅಚ್ಯುತ್ ರಾವ್ ಹಾಗೂ ಅವರ ಮಗ 67 ವರ್ಷ ವಯಸ್ಸಿನ ರಂಗರಾವ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಕೊರೊನಾ ಸೋಂಕು ಗೆದ್ದ ಬಳ್ಳಾರಿಯ ಶತಾಯುಷಿ ಅಜ್ಜಿ
ಕೊರೊನಾ ಸೋಂಕಿತರಾಗಿ ತೀವ್ರ ಆಯಾಸಪಡುತ್ತಿದ್ದ ವೃದ್ಧ ಅಚ್ಯುತ್ ರಾವ್, ಕುಳಿತುಕೊಳ್ಳಲು ಸಹ ಆಗುತ್ತಿರಲಿಲ್ಲ ಮತ್ತು ಯಾವಾಗಲೂ ಮಲಗುತ್ತಿದ್ದರು. ಎದ್ದೇಳಿಸುವುದಕ್ಕೂ ಇನ್ನೊಬ್ಬರ ಸಹಾಯ ಬೇಕಿತ್ತು. ಟ್ರಾಮಾಕೇರ್ ಸೆಂಟರ್ ನ ನೋಡಲ್ ಅಧಿಕಾರಿ ಡಾ.ಹರ್ಷ ಹಾಗೂ ನುರಿತ ತಜ್ಞ ವೈದ್ಯ ತಂಡದ ವಿಶೇಷ ನಿಗಾ ಹಾಗೂ ಮುತುವರ್ಜಿ ವಹಿಸಿ ಅವರು ನೀಡಿದ ಚಿಕಿತ್ಸೆಯ ಪರಿಣಾಮ 99ರ ವೃದ್ಧ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ.
ಇವರೊಂದಿಗೆ ಸೊಂಕು ಬಾಧಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ 67 ವರ್ಷ ವಯಸ್ಸಿನ ಮಗನೂ ಕೂಡ ಗುಣಮುಖರಾಗಿ ತಂದೆಯೊಂದಿಗೆ ನಗುಮೊಗದಿಂದ ಮನೆಯತ್ತ ತೆರಳಿದ್ದಾರೆ.
ನೋಡಲ್ ಅಧಿಕಾರಿ ಡಾ.ಹರ್ಷ ಅವರು ಮಾತನಾಡಿ, ""ವೃದ್ಧ ಅಚ್ಯುತ್ ರಾವ್ ಹಾಗೂ ಅವರ ಮಗ ಏಕಕಾಲಕ್ಕೆ ಸೋಂಕಿತರಾಗಿ ಟ್ರಾಮಾಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲಿ ಅಜ್ಜ ತೀವ್ರ ಆಯಾಸ, ಸುಸ್ತು, ನಿತ್ರಾಣದಲ್ಲಿದ್ದರು. ನಿರಂತರ ಚಿಕಿತ್ಸೆ ನೀಡಿದ ಪರಿಣಾಮ ತನ್ನ ಮಗನೊಂದಿಗೆ ಇವರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ'' ಎಂದರು.
ಕೋವಿಡ್ ಸೇವೆಗೆ ಡೇಟಾ ಎಂಟ್ರಿ ಆಪರೇಟರ್ಸ್ ಬಳಕೆ
ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದ ವೃದ್ಧನ ಮಗ ರಂಗರಾವ್(67) ಅವರು ಮಾತನಾಡಿ, ""ಕೊರೊನಾ ಬಂದ ತಕ್ಷಣ ತುಂಬಾ ಹೆದರಿಕೆ ಉಂಟಾಗಿತ್ತು. ತೀವ್ರ ಆತಂಕದಿಂದಲೇ ಇಲ್ಲಿಗೆ ಬಂದು ದಾಖಲಾದೆವು. ಆಸ್ಪತ್ರೆಯಲ್ಲಿ ವೈದ್ಯರು ಚೆನ್ನಾಗಿ ನೋಡಿಕೊಂಡರು ಮತ್ತು ಆತ್ಮಸ್ಥೈರ್ಯ ತುಂಬಿದರು. ಒಳ್ಳೆಯ ಚಿಕಿತ್ಸೆ ಮತ್ತು ಊಟ ಕೊಟ್ಟರು. ಅವರ ಋಣ ನಾವೆಂದು ಮರೆಯುವುದಿಲ್ಲ'' ಎಂದು ಧನ್ಯವಾದ ಅರ್ಪಿಸಿದರು.