"ಕೆಕೆಆರ್ ಡಿಬಿಯಿಂದ ಬಳ್ಳಾರಿ ಜಿಲ್ಲೆಗೆ 862 ಕೋಟಿ ರೂ ಅನುದಾನ"
ಬಳ್ಳಾರಿ, ಸೆಪ್ಟೆಂಬರ್ 17: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ 2013-14ನೇ ಸಾಲಿನಿಂದ ಇಲ್ಲಿಯವರೆಗೆ ಬಳ್ಳಾರಿ ಜಿಲ್ಲೆಗೆ ಒಟ್ಟು ರೂ.862.54 ಕೋಟಿ ಅನುದಾನ ಹಂಚಿಕೆಯಾಗಿದ್ದು, 3341 ಕಾಮಗಾರಿಗಳನ್ನು ಕೈಗೆತ್ತಿಕೊಂಡು 2904 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕೆ ರೂ.598.60 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ ಎಂದು ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದಸಿಂಗ್ ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ನಗರದ ಮುನ್ಸಿಪಲ್ ಕಾಲೇಜಿನಲ್ಲಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಗೆ ಒಳಪಡುವ 6 ಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿಗಾಗಿ ಶೇ.80 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶ ಹೊರತುಪಡಿಸಿದ ಇತರೆ ಭಾಗದ ನೌಕರಿ ಮತ್ತು ವೃತ್ತಿ ಶಿಕ್ಷಣದಲ್ಲಿ ಈ ಭಾಗದ ಜನರಿಗಾಗಿ ಶೇ. 8ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ ಎಂದರು.
1,41,877 ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ಈ ಮೀಸಲಾತಿಯ ಲಾಭವನ್ನು ಪಡೆಯಲು ಇಲ್ಲಿಯವರೆಗೆ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ, ಹೊಸಪೇಟೆ ಹಾಗೂ ಬಳ್ಳಾರಿ ಉಪ ವಿಭಾಗಗಳು ಒಟ್ಟು 1,41,877 ಅಭ್ಯರ್ಥಿಗಳಿಗೆ 371 (ಜೆ) ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ. ಇದರಿಂದಾಗಿ ಶಿಕ್ಷಣ ಹಾಗೂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಮೀಸಲಾತಿ ಪಡೆಯಲು ಅನುಕೂಲವಾಗಿದೆ ಎಂದರು. ಈ ಭಾಗದ ಜನರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ವಿನೂತನ ಯೋಜನೆಗಳನ್ನು ಹಮ್ಮಿಕೊಂಡು ಅಭಿವೃದ್ಧಿ ಸಾಧಿಸಲು ಕಂಕಣಬದ್ಧವಾಗಿದೆ. ಆದರೆ ಕೊರೊನಾದಿಂದಾಗಿ ಪ್ರಗತಿಗೆ ತೊಡಕಾಗಿದೆ. ಆದರೂ ಸಹಿತ ನಮ್ಮ ಸರ್ಕಾರ ಕೋವಿಡ್ ಅನ್ನು ಸಮರ್ಥವಾಗಿ ನಿಯಂತ್ರಿಸುವಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದರು.
ವಿಜಯನಗರ ಪ್ರತ್ಯೇಕ ಜಿಲ್ಲೆ ವಿಚಾರ: ಹೊಸ ಸುಳಿವು ನೀಡಿದ ಆನಂದ್ ಸಿಂಗ್
ಕೋವಿಡ್ ನಿಯಂತ್ರಣಕ್ಕೆ ಈವರೆಗೆ ಏನೇನು ಕ್ರಮಗಳಾಗಿವೆ?
ಜಿಲ್ಲೆಯಲ್ಲಿ ಕೊರೊನಾ ಪ್ರಾರಂಭದಿಂದಲೂ ಹೆಚ್ಚಾಗಿ ಹರಡುತ್ತಿದೆ. ಜಿಲ್ಲಾಡಳಿತವು ಇತರ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಸಮರ್ಥವಾಗಿ ನಿಯಂತ್ರಿಸುವಲ್ಲಿ 4 ಕೋವಿಡ್ ಆಸ್ಪತ್ರೆಗಳನ್ನು ಸ್ಥಾಪಿಸಿದೆ. ಅಲ್ಲದೇ ವಿಮ್ಸ್ ಡೆಂಟಲ್ ಕಾಲೇಜು, ಓ.ಪಿ.ಜಿ. ಕೇಂದ್ರ, ವಿಮ್ಸ್ ಓಲ್ದ್ ಡೈರೆಕ್ಟರ್ ಕಚೇರಿ, ಟಿ.ವಿ. ಸ್ಯಾನಿಟೋರಿಯಂ ಹಾಗೂ ತಾಲ್ಲೂಕು ಮಟ್ಟದ 7 ಸಾರ್ವಜನಿಕ ಆಸ್ಪತ್ರೆಗಳು, 13 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 7 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 33 ಕೋವಿಡ್ ಹೆಲ್ತ್ ಸೆಂಟರ್ ಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟು 1128 ಆಕ್ಸಿನೇಟಡ್ ಬೆಡ್ ಗಳು, 116 ವೆಂಟಿಲೇಟರ್ ಬೆಡ್ ಹಾಗೂ 210 ಐ.ಸಿ.ಯು ಬೆಡ್ ಗಳನ್ನು ಸ್ಥಾಪಿಸಲಾಗಿದೆ. ಕೋವಿಡ್ ಡಯಾಲಿಸಿಸ್ ರೋಗಿಗಳಿಗೆ 3 ಡೈಯಾಲಿಸ್ ಮಿಷಿನ್ ಹಾಗೂ 1 ಆರ್ಒ ಪ್ಲಾಂಟ್ ಅಳವಡಿಸಲಾಗಿದೆ ಎಂದು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಕೈಗೊಂಡ ಕ್ರಮಗಳನ್ನು ಪ್ರಸ್ತುತಪಡಿಸಿದರು. ಕೋವಿಡ್ ಅತ್ಯವಶ್ಯಕ ಪರಿಕರಗಳ ಖರೀದಿಗಾಗಿ 18.98 ಕೋಟಿ ರೂ. ಖರ್ಚಾಗಿರುವುದಾಗಿ ಮಾಹಿತಿ ನೀಡಿದರು.
ಕಟ್ಟಡ ಕಾರ್ಮಿಕರಿಗೆ 22.24 ಕೋಟಿ ರೂ ವಿತರಣೆ
ಕೊರೊನಾ ಹಿನ್ನೆಲೆ ಲಾಕ್ ಡೌನ್ ಜಾರಿ ಮಾಡಿದ್ದರಿಂದ ಕಟ್ಟಡ ಮತ್ತು ಇತರೆ ಕಾರ್ಮಿಕರ ಜೀವನ ಪರಿಸ್ಥಿತಿ ತೀವ್ರ ಕಷ್ಟಕರವಾಗಿದ್ದನ್ನು ಮನಗಂಡ ಸರ್ಕಾರ ಮುಖ್ಯಮಂತ್ರಿಗಳ ಆದೇಶದಂತೆ ಬಳ್ಳಾರಿ ಜಿಲ್ಲೆಯ ಒಟ್ಟು 44,486 ಜನ ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ತಲಾ 5 ಸಾವಿರ ರೂಪಾಯಿಯಂತೆ 22.24 ಕೋಟಿ ರೂ.ವಿಶೇಷ ಸಹಾಯಧನ ವಿತರಿಸಿದೆ.
ಕಲಬುರಗಿ-ಬೀದರ್ ನಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ 3000 ಕೋಟಿ ರೂ ಬಿಡುಗಡೆ
ದೋಬಿ ಹಾಗೂ ಕ್ಷೌರಿಕ ವರ್ಗದವರಿಗೆ ತಲಾ 5 ಸಾವಿರ ರೂನಂತೆ 4465 ಅರ್ಹ ಫಲಾನುಭವಿಗಳಿಗೆ 2.23 ಕೋಟಿ ರೂಪಾಯಿ ಸಹಾಯಧನ ನೀಡಲಾಗಿದೆ. ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ 4055 ಫಲಾನುಭವಿಗಳಿಗೆ ಮೊತ್ತ 72.61 ಕೋಟಿ ರೂ ಸಹಾಯಧನ ನೀಡಲಾಗಿದೆ. ಕೊರೊನಾದಿಂದ ಕಲಾವಿದರ ಜೀವನ ಕಷ್ಟಕರವಾಗಿರುವ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲೆಯ ಒಟ್ಟು 577 ಜನ ಕಲಾವಿದರಿಗೆ ನಮ್ಮ ಸರ್ಕಾರ ತಲಾ 2 ಸಾವಿರ ರೂಗಳಂತೆ 11.54 ಲಕ್ಷ ರೂಗಳ ಸಹಾಯಧನ ವಿತರಿಸಲಾಗಿದೆ ಎಂದು ಹೇಳಿದರು.
"ಬಳ್ಳಾರಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮ"
ನಮ್ಮ ಸರ್ಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದರೊಂದಿಗೆ ಬಳ್ಳಾರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು. ಸಿರಿಗೆರೆ ಪನ್ನರಾಜ್ ಅವರು ವಿಶೇಷ ಉಪನ್ಯಾಸ ನೀಡಿದರು. ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂವೀರಭದ್ರಪ್ಪ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಡಿಸಿ ಎಸ್.ಎಸ್.ನಕುಲ್, ಎಸ್ಪಿ ಸೈದುಲ್ ಅದಾವತ್, ಜಿಪಂ ಸಿಇಒ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸಂಘಟನೆಗಳ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.