ಲಾರಿ ಆರ್ಭಟಕ್ಕೆ ಬಳ್ಳಾರಿಯಲ್ಲಿ ಜನವರಿಯಿಂದ ಇಲ್ಲಿವರೆಗೆ 27 ಅಪಘಾತ ,30 ಸಾವು
ಬಳ್ಳಾರಿ, ಆಗಸ್ಟ್ 26 : ಹಗಲು ಸಮಯದಲ್ಲಿ ನಗರ ಪ್ರದೇಶದಲ್ಲಿ ಲಾರಿ ಸೇರಿದಂತೆ ಭಾರಿ ಗಾತ್ರದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಆದರೂ ಎಗ್ಗಿಲ್ಲದೇ ಓಡಾಡುತ್ತಿರುವ ಲಾರಿಗಳ ಸಂಚಾರದಿಂದ ಕಳೆದ ಜನವರಿಯಿಂದ ಆಗಸ್ಟ್ 25ರವರೆಗೆ ಒಟ್ಟು 27 ಅಪಘಾತ ಪ್ರಕರಣ ದಾಖಲಾಗಿದ್ದು, ಇದರಲ್ಲಿ 30 ಜನರು ಮೃತಪಟ್ಟಿದ್ದಾರೆ.
ನಗರ ಪ್ರದೇಶದ ಮೂಲಕ ನಾನಾ ಕಡೆ ಸಂಚರಿಸುವ ಲಾರಿ ಹಾಗೂ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಕಡಿವಾಣ ಇಲ್ಲದಂತಾಗಿದೆ. ಇದರಿಂದ ಅಪಘಾತಗಳ ಸಂಖ್ಯೆ ಗಣನೀಯ ಏರುತ್ತಿದ್ದು, ಸಾರ್ವಜನಿಕರು ಅಂಗೈಯಲ್ಲಿ ಜೀವಹಿಡಿದು ಸಂಚರಿಸುವಂತಾಗಿದೆ. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಸದಾ ಜನಜಂಗುಳಿ ಉಂಟಾಗುತ್ತಿದೆ.
ತುಮಕೂರು ರಸ್ತೆ ಅಪಘಾತ ಘಟನೆ: ರಾಜ್ಯ ಸರ್ಕಾರದಿಂದ 5 ಲಕ್ಷ ಪರಿಹಾರ, ಉಚಿತ ಚಿಕಿತ್ಸೆ
ನೂರಾರು ವಾಹನಗಳ ಸಂಚಾರದಿಂದ ಟ್ರಾಫಿಕ್ ಜಾಮ್ ಸೇರಿದಂತೆ ವಿವಿಧ ತೊಂದರೆಗಳನ್ನು ಜನ ಸಾಮಾನ್ಯರು ಎದುರಿಸುತ್ತಿದ್ದಾರೆ. ಆದರೆ ಸಂಚಾರ ಹಾಗೂ ವಾಹನ ದಟ್ಟಣೆ ನಿಯಂತ್ರಣ ಮಾಡಬೇಕಾದ ಪೊಲೀಸರು ಮಾತ್ರ ಕೇವಲ ಫೈನ್ ಕಲೆಕ್ಟ್ ಮಾಡುವುದರಲ್ಲಿ ಬಿಜಿಯಾಗಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ. ಇನ್ಬೂ ಹೆಸರಿಗೆ ಮಾತ್ರ ಸಂಚಾರ ಪೊಲೀಸರು ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಟ್ರಾಫಿಕ್ ಜಾಮ್ ನಿಯಂತ್ರಣ ಮಾಡುವಲ್ಲಿ, ಭಾರಿ ವಾಹನಗಳು ನಗರ ಪ್ರವೇಶ ಮಾಡುವುದನ್ನು ನಿಯಂತ್ರಣ ಮಾಡುವಲ್ಲಿ ಅಥವಾ ಅಪಘಾತ ತಡೆಯುವಲ್ಲಿ ವಿಫಲರಾಗಿದ್ದಾರೆ. ಇತ್ತೀಚೆಗೆ ಲಾರಿ ಸೇರಿ ಭಾರಿ ವಾಹನಗಳು ಸಹ ನಗರ ಮೂಲಕ ಸಂಚರಿಸುವ ಮೂಲಕ ಅಪಘಾತ ಆಹ್ವಾನಿಸುತ್ತಿವೆ.
ಜನವರಿಯಿಂದ 30 ಸಾವು
ಬಳ್ಳಾರಿ ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಜನವರಿಯಿಂದ ಆಗಸ್ಟ್ 25ರವರೆಗೆ ಒಟ್ಟು 27 ಅಪಘಾತ ಪ್ರಕರಣ ದಾಖಲಾಗಿದ್ದು, 30ಜನ ಮೃತಪಟ್ಟಿದ್ದಾರೆ. ಮಾರ್ಚ್ನಿಂದ ಈವರೆಗೆ 19 ಅಪಘಾತ ಪ್ರಕರಣ ದಾಖಲಾಗಿರುವುದು ಗಮನರ್ಹ ಸಂಗತಿಯಾಗಿದೆ.
ಬೆಂಗಳೂರಿನಿಂದ ಮತ್ತು ಆಂಧ್ರ ಕಡೆಯಿಂದ ಬಂದು ಹೊಸಪೇಟೆಗೆ ಹೋಗೋರಿಗೆ ಹೊಸಪೇಟೆ ಬೈಪಾಸ್ ಇದೆ. ಆದ್ರೆ ಆ ರಸ್ತೆ ದುರಸ್ತಿಯಲ್ಲಿ ಇರುವುದರಿಂದ ಹಾಗೂ ಸಿರುಗುಪ್ಪ ರಸ್ತೆಯ ಬೈಪಾಸ್ ಆಗದಿರುವ ಹಿನ್ನೆಲೆ ಬಳ್ಳಾರಿ ನಗರಕ್ಕೆ ಲಾರಿಗಳು ಪ್ರವೇಶಿಸುತ್ತಿವೆ.
ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಅಪಘಾತ; 5 ವರ್ಷದ ಮಗು ಸೇರಿ ಮೂವರ ಸಾವು
ಅಪಘಾತಗಳ ಸಂಖ್ಯೆಯಲ್ಲಿ ಏರಿಕೆ
ಆಗಸ್ಟ್ 24ರಂದು ನಗರದ ಏಳುಮಕ್ಕಳ ತಾಯಮ್ಮ ದೇವಸ್ಥಾನದ ಬಳಿಯ ಮೇಲ್ಸೇತುವೆ ಬಳಿ ಪತ್ನಿ, ಇಬ್ಬರು ಮಕ್ಕಳೊಂದಿಗೆ ವ್ಯಕ್ತಿಯೊಬ್ಬರು ತೆರಳುತ್ತಿದ್ದ ಬೈಕ್ಗೆ ಲಾರಿ ಡಿಕ್ಕಿಹೊಡೆದು ಸ್ಥಳದಲ್ಲಿಯೇ ಒಬ್ಬ ಬಾಲಕ ಸೇರಿ ಮೂವರು ಮೃತಪಟ್ಟಿದ್ದಾರೆ. ಬಂಡಿಮೋಟ್, ತಾಳೂರು ರಸ್ತೆಯಲ್ಲಿಸಹ ಇತ್ತೀಚೆಗೆ ಲಾರಿ ಹರಿದು ತಲಾ ಒಬ್ಬರು ಬಲಿಯಾಗಿದ್ದಾರೆ. ಹೀಗೆ, ನಗರದಲ್ಲಿ ಬೈಕ್, ಕಾರ್, ಲಾರಿ ಸೇರಿ ನಾನಾ ವಾಹನಗಳಿಂದ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳು ಇಂದಿಗೂ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಲಾರಿಗಳ ಓಡಾಟಕ್ಕೆ ಕಡಿವಾಣ ಹಾಕಲು ಕ್ರಮ
ಹೊಸಪೇಟೆ ಬೈಪಾಸ್ ರಸ್ತೆ ದುರಸ್ತಿಯಲ್ಲಿ ಇರುವುದರಿಂದ ಹಾಗೂ ಸಿರುಗುಪ್ಪ ರಸ್ತೆಯ ಬೈಪಾಸ್ ಆಗದಿರುವ ಹಿನ್ನೆಲೆ ಬಳ್ಳಾರಿ ನಗರಕ್ಕೆ ಲಾರಿಗಳು ಪ್ರವೇಶಿಸುತ್ತಿವೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ನಗರದಲ್ಲಿ ಹಗಲು ಹೊತ್ತಿನಲ್ಲಿ ಲಾರಿಗಳ ಓಡಾಟಕ್ಕೆ ಕಡಿವಾಣ ಹಾಕಲು ಲಾರಿ ಮಾಲೀಕರರೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗುವುದು. ಅಪಘಾತ ತಡೆಗೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅಡಾವತ್ ತಿಳಿಸಿದ್ದಾರೆ.
ಆತಂಕ ಸೃಷ್ಟಿಸುತ್ತಿರುವ ಭಾರಿ ವಾಹನಗಳು
ಜಿಲ್ಲೆಯ ವಿವಿಧ ಭಾಗಗಳಿಂದ ಬಳ್ಳಾರಿಗೆ ಶಾಲಾ, ಕಾಲೇಜಿಗೆಂದು ನಿತ್ಯ ಸಾವಿರಾರು ವಿದ್ಯಾರ್ಥಿಗಳು, ವ್ಯಾಪಾರ ವಹಿವಾಟು ಸೇರಿ ನಾನಾ ಕಾರಣಗಳಿಗಾಗಿ ಗ್ರಾಮೀಣ ಪ್ರದೇಶದಿಂದ ಜನರು ಆಗಮಿಸುತ್ತಾರೆ. ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರದಿಂದ ಪಾದಚಾರಿಗಳು, ಬೈಕ್ ಸೇರಿ ಸಣ್ಣ ಪುಟ್ಟ ವಾಹನಗಳ ಸವಾರರ ಆತಂಕಕ್ಕೂ ಕಾರಣವಾಗಿದೆ. ಮತ್ತೊಂದೆಡೆ ಭಾರಿ ವಾಹನಗಳ ಸಂಚಾರದಿಂದ ನಗರದಲ್ಲಿ ಧೂಳು ಹೆಚ್ಚಿದ್ದು, ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.
ನಗರ ಪ್ರದೇಶದಲ್ಲಿ ಲಾರಿಗಳ ಸಂಚಾರಕ್ಕೆ ಹಗಲು ಹೊತ್ತಿನಲ್ಲಿ ನಿಷೇಧವಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ಲಾರಿಗಳ ಓಡಾಟಕ್ಕೆ ಅವಕಾಶ ನೀಡಿರುವುದು ವಿಪರ್ಯಾಸ. ಹೀಗಾಗಿ ನಗರದಲ್ಲಿ ಅತಿವೇಗದಿಂದ ಚಲಿಸುವ ಭಾರಿ ಗಾತ್ರದ ವಾಹನಗಳು ಹಾಗೂ ಲಾರಿಗಳಿಗೆ ಕಡಿವಾಣ ಹಾಕಬೇಕಾಗಿದೆ.