ಬಿಎಸ್ಎನ್ಎಲ್ ಉಳಿವಿಗೆ 177 ನೌಕರರು ಸ್ವಯಂ ಘೋಷಿತ ನಿವೃತ್ತಿ!
ಬಳ್ಳಾರಿ, ಫೆಬ್ರುವರಿ 02: ಕೇಂದ್ರ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ಮುಚ್ಚಲು ನಡೆಸಿದ ಯೋಚನೆ ವಿಫಲವಾದ ಹಿನ್ನೆಲೆಯಲ್ಲಿ ಆಗುವ ನಷ್ಟ ಭರಿಸಲು ಬಿಎಸ್ಎನ್ಎಲ್ ಸಂಸ್ಥೆಯ ಉಳಿವಿಗಾಗಿ ನೌಕರರು ತ್ಯಾಗಕ್ಕೆ ಸಿದ್ಧರಾಗಿದ್ದು, ಗಣಿನಾಡು ಬಳ್ಳಾರಿಯಲ್ಲಿ ಬರೋಬ್ಬರಿ 177 ನೌಕರರು ಸ್ವಯಂ ನಿವೃತ್ತಿ ಹೊಂದಿದ್ದಾರೆ.
ಕೇಂದ್ರ ಸರಕಾರ ಬಿಎಸ್ಎನ್ಎಲ್ ಸಂಸ್ಥೆಯು ನಷ್ಟದಲ್ಲಿ ಇದೆ, ನಷ್ಟ ತಡೆಯಲು ಸ್ವಯಂ ನಿವೃತ್ತಿಯಾದರೆ, ಪಿಂಚಣಿ ಸೇರಿದಂತೆ ಉತ್ತಮ ಪ್ಯಾಕೇಜ್ ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಘೋಷಣೆ ಮಾಡಿದ್ದರು.
ಬಿಎಸ್ಎನ್ಎಲ್ ಸ್ವಯಂನಿವೃತ್ತಿ, 1 ಲಕ್ಷ ಉದ್ಯೋಗಿಗಳಿಗೆ ಜಾರಿ
ಇದರ ಬೆನ್ನೆಲ್ಲೆ 50 ವರ್ಷ ಮೀರಿದ 177 ಜನ ನೌಕರರು ಜನವರಿ 31 ರಂದು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕೇಂದ್ರ ಸರ್ಕಾರದ ಸ್ವಯಂಘೋಷಿತ ನಿವೃತ್ತಿ ಯೋಜನೆಯಡಿ ಜಿಲ್ಲೆಯಾದ್ಯಂತ ಸುಮಾರು 300 ಬಿಎಸ್ಎನ್ಎಲ್ ನೌಕರರ ಪೈಕಿ 177 ನೌಕರರು ಸ್ವಯಂ ಘೋಷಿತ ನಿವೃತ್ತಿಗೆ ಅರ್ಜಿ ಸಲ್ಲಿಸಿ ನಿವೃತ್ತಿ ಪಡೆದಿದ್ದಾರೆ.
ಭಾರತ ಸಂಚಾರ ನಿಗಮ ನಿಯಮಿತ(ಬಿಎಸ್ಎನ್ಎಲ್) ಬಳ್ಳಾರಿ ಉಪ ವಿಭಾಗದ ಕಚೇರಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಎಜಿಎಂ, ಡಿಜಿಎಂ, ಎಸ್ ಡಿಎ ಹಾಗೂ ಜೆಟಿಒ ಸೇರಿದಂತೆ ಉನ್ನತ ವಲಯದ ಹುದ್ದೆಗಳಿದ್ದ ನೌಕರರೆಲ್ಲರೂ ಕೂಡ ಜನವರಿ 31ಕ್ಕೆ ತಮ್ಮ ಸೇವಾವಧಿ ಕೊನೆಗಾಣಿಸಲು ಸ್ವಯಂ ಪ್ರೇರಣೆಯಿಂದ ಮುಂದಾಗಿದ್ದಾರೆ.
ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ ಮುಚ್ಚಲು ಮುಂದಾದ ಕೇಂದ್ರ ಸರ್ಕಾರ
ಬಳ್ಳಾರಿ ಜಿಲ್ಲೆಯ ಆಯಾ ತಾಲೂಕಿನ ಬಿಎಸ್ಎನ್ಎಲ್ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 12 ಪ್ರಮುಖ ಹುದ್ದೆಗಳಲ್ಲಿರುವವರೂ ಕೂಡ ಇದರಲ್ಲಿದ್ದಾರೆ. 123 ನೌಕರರು ಮಾತ್ರ ಜಿಲ್ಲೆಯ ಬಿಎಸ್ಎನ್ಎಲ್ ಕಚೇರಿಗಳಲ್ಲಿ ಉಳಿದಿದ್ದಾರೆ.
ಸ್ವಯಂ ಘೋಷಿತ ನಿವೃತ್ತಿ ಪಡೆದ ಬಿಎಸ್ಎನ್ಎಲ್ ನೌಕರರು, 2019 ರ ವಿಆರ್ಎಸ್ ವಿಶೇಷ ಪ್ಯಾಕೇಜ್ ಯೋಜನೆಯಡಿ ಕೇಂದ್ರ ಸರ್ಕಾರ ಸ್ವಯಂಘೋಷಿತ ನಿವೃತ್ತಿಯ ಅವಕಾಶ ನೀಡಿದ್ದು, ಅಂದಾಜು ಶೇಕಡಾ 125 ರಷ್ಟು ಪಿಂಚಣಿ ಹೆಚ್ಚಳಕ್ಕೆ ಅವಕಾಶ ಕಲ್ಪಿಸಿದೆ.
ಆ ಸೌಲಭ್ಯದ ಅಡಿ ನಾವೆಲ್ಲರೂ ಸ್ವಯಂ ಘೋಷಿತ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ನೌಕರರು ತಿಳಿಸಿದ್ದಾರೆ. ಇನ್ನೂ ಬಳ್ಳಾರಿ ಜಿಲ್ಲೆಯ ತಾಲೂಕುವಾರು ನೌಕರರ ಸ್ವಯಂ ನಿವೃತ್ತಿಯ ವಿವರಗಳನ್ನು ನೋಡುವುದಾದರೆ,
ಬಳ್ಳಾರಿ- 82, ಕುರುಗೋಡು- 6, ತೋರಣಗಲ್ಲು - 4, ಸಿರುಗುಪ್ಪ- 7, ಸಂಡೂರು - 5, ಹೊಸಪೇಟೆ- 40, ಹಗರಿಬೊಮ್ಮನಹಳ್ಳಿ- 5, ಹರಪನಹಳ್ಳಿ- 11, ಹೂವಿನಹಡಗಲಿ- 9, ಕೂಡ್ಲಿಗಿ - 6 ಹಾಗೂ ಮೊಬೈಲ್ ಸರ್ವೀಸ್ನ ಇಬ್ಬರು ನೌಕರರು ಈ ಸ್ವಯಂ ಘೋಷಿತ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ.
ಲೆಫ್ಟ್ ಓವರ್, ಸರ್ವೀಸ್ ಓವರ್ ಪ್ಯಾಕೇಜ್ ಅಡಿ ಸ್ವಯಂ ಘೋಷಿತ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದು, ಎರಡು ವರ್ಷದ ಅವಧಿಯವರೆಗೆ ಯಾವುದೇ ವಲಯದಲ್ಲಿ ಕರ್ತವ್ಯ ನಿರ್ವಹಿಸದಿರುವ ಕುರಿತಾದ ಒಪ್ಪಂದಕ್ಕೆ ನೌಕರರು ಸಹಿ ಹಾಕಿದ್ದಾರೆ.