ಎಲ್ಲರ ಚಿತ್ತ ಕೊರೊನಾದತ್ತ; ಬಳ್ಳಾರಿಯಲ್ಲೀಗ 110 ಡೆಂಗ್ಯೂ ಪ್ರಕರಣ
ಬಳ್ಳಾರಿ, ಏಪ್ರಿಲ್ 22: ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ತಗ್ಗಿತು ಎಂದು ನಿಟ್ಟುಸಿರುಬಿಡುವಷ್ಟರಲ್ಲಿ ಇದೀಗ ಡೆಂಗ್ಯೂ ತಾಂಡವವಾಡುತ್ತಿದೆ. ಕೊರೊನಾದತ್ತಲೇ ಎಲ್ಲರ ಗಮನ ಇರುವಾಗ, ಗೊತ್ತೇ ಆಗದೆ ಡೆಂಗ್ಯೂ ಕಾಲಿಟ್ಟಿದೆ. ಕೊರೊನಾ ಭೀತಿ ಜೊತೆಜೊತೆಗೆ ಡೆಂಗ್ಯೂ ಶುರುವಾಗಿದ್ದು, ಜನರು ಆತಂಕಗೊಂಡಿದ್ದಾರೆ.
ಬಳ್ಳಾರಿ ಜಿಲ್ಲೆಯಾದ್ಯಂತ 110ಕ್ಕೂ ಹೆಚ್ಚು ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ದಾಖಲಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಒಂದು ವರ್ಷದ ಅವಧಿಗೆ ಬರುತ್ತಿದ್ದ ಪ್ರಕರಣಗಳು ಮೂರು ತಿಂಗಳಲ್ಲೇ ಪತ್ತೆಯಾಗಿವೆ. ಕೊರೊನಾದೊಂದಿಗೆ ಡೆಂಗ್ಯೂ ಕೂಡ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗುತ್ತಿದೆ.
ಡೆಂಗ್ಯೂ ಜ್ವರ ಬಾರದಂತೆ ಎಚ್ಚರ ವಹಿಸಲು ಕ್ರಮಗಳು
ಬಳ್ಳಾರಿ, ಸಂಡೂರು, ಹರಪನಹಳ್ಳಿ, ಕೂಡ್ಲಿಗಿ ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ದಾಖಲಾಗುತ್ತಿವೆ. ಜಿಲ್ಲಾಡಳಿತಕ್ಕೆ ಸದ್ಯದ ಸ್ಥಿತಿಗತಿ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಕಳೆದ ಹದಿನೈದು ದಿನಗಳಲ್ಲಿ ಎರಡು ಸಾವು ಸಂಭವಿಸಿದ್ದು, ಡೆಂಗ್ಯೂದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತಗೊಂಡಿದೆ. ಈ ಕುರಿತು ಅಧಿಕೃತ ವರದಿಗಾಗಿ ಕಾಯಲಾಗುತ್ತಿದೆ.
ಎಲ್ಲರ ಚಿತ್ತವೂ ಕೊರೊನಾ ನಿರ್ಮೂಲನೆ ಕಡೆ ಇದ್ದು, ಇದೇ ಸಮಯದಲ್ಲಿ ಡೆಂಗ್ಯೂ ಗೊತ್ತೇ ಆಗದಂತೆ ಆಕ್ರಮಿಸಿರುವುದು ಆತಂಕವನ್ನು ಹೆಚ್ಚಿಸಿದೆ.