ಕೊರೊನಾ ಸೋಂಕು ಗೆದ್ದ ಬಳ್ಳಾರಿಯ ಶತಾಯುಷಿ ಅಜ್ಜಿ
ಬಳ್ಳಾರಿ, ಜುಲೈ 24: ಕೊರೊನಾ ವೈರಸ್ ಆತಂಕದಿಂದ, ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಉದಾಹರಣೆಗಳು ರಾಜ್ಯದಲ್ಲಿ ಈಚೆಗೆ ದೊರಕುತ್ತಿವೆ. ಆದರೆ ಆ ವೈರಸ್ ನ ವಿರುದ್ಧವೇ ಹೋರಾಡಿ ಗೆದ್ದಿದ್ದಾರೆ ಈ ಶತಾಯುಷಿ ಅಜ್ಜಿ. ಈ ಮೂಲಕ ಕೊರೊನಾ ಸೋಂಕು ಗೆದ್ದ ರಾಜ್ಯದ ಮೊದಲ ಶತಾಯುಷಿ ಅಜ್ಜಿಯೂ ಆಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ, ನೂರು ವರ್ಷದ ಅಜ್ಜಿ ಈಗ ಕೊರೊನಾ ಸೋಂಕಿನಿಂದ ಗುಣಮುಖವಾಗಿದ್ದಾರೆ. ಮನೆಯ ಹಿರಿಯ ಮಗನಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಹಿರಿಯ ಮಗನ ಪ್ರಾಥಮಿಕ ಹಂತದ ಸಂಪರ್ಕ ಹೊಂದಿದ್ದ ಕಾರಣ ಇವರನ್ನೂ ಹೋಂ ಕ್ವಾರೆಂಟೈನ್ ಮಾಡಲಾಗಿತ್ತು.
ಬಳ್ಳಾರಿ; ಕೊರೊನಾದಿಂದ ಗುಣಮುಖನಾಗಿದ್ದರೂ ಬಿಡಲಿಲ್ಲ ಸಾವು
ಬಳಿಕ ಮನೆಯ ಉಳಿದ ನಾಲ್ವರ ಸ್ವಾಬ್ ತೆಗೆದಾಗ ಎಲ್ಲರಿಗೂ ಸೋಂಕು ಇರುವುದು ದೃಢಪಟ್ಟಿತ್ತು. ಹಿರಿಯ ಮಗನನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಮನೆ ಮಂದಿಯ ಜೊತೆಯಲ್ಲಿ ಅಜ್ಜಿ ಸಹ ಗುಣಮುಖ ಆಗಿದ್ದಾರೆ.
ಇಷ್ಟು ದಿನ 50 ವರ್ಷ ಮೇಲ್ಪಟ್ಟ ಜನರಲ್ಲಿ ಸೋಂಕು ಕಾಣಿಸಿಕೊಂಡರೆಯೇ ಬದುಕುವುದು ಕಷ್ಟ ಎಂದು ಜನರಲ್ಲಿ ಭಯವಿತ್ತು. ಆದರೆ ಈ ಅಜ್ಜಿ ಸಂಪೂರ್ಣ ಗುಣಮುಖವಾಗುವ ಮೂಲಕ ಸೋಂಕಿತರ ಭಯವನ್ನು ದೂರ ಮಾಡಿದ್ದಾರೆ. ವೈದ್ಯರು ನೀಡಿದ ಔಷಧಿ ಹಾಗೂ ಬಿಸಿ ನೀರು ಸೇವನೆ... ಇವೆಲ್ಲವನ್ನೂ ಅಜ್ಜಿ ಚಾಚೂ ತಪ್ಪದೆ ಪಾಲಿಸಿದ್ದಾರೆ. ಹೀಗಾಗಿ ಅಜ್ಜಿ ಬೇಗ ಗುಣಮುಖ ಆಗಿದ್ದಾರೆ ಎನ್ನುತ್ತಾರೆ ಮನೆಯವರು.