ನಿಮಗೇಗೆ ಆ ಧರ್ಮದ ಮೇಲೆ ದ್ವೇಷ?: ಬಿಎಸ್ವೈ ವಿರುದ್ಧ ಸಿದ್ದು ಕಿಡಿ
ಬಾದಾಮಿ, ಡಿಸೆಂಬರ್ 6: ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ಹೊಸೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, 'ಸಾಮ್ರಾಟ ಅಶೋಕನ ರೀತಿಯೇ ಹೈದರಾಲಿ, ಟಿಪ್ಪು ಸುಲ್ತಾನ್ ಕೂಡ ಅರಸರು. ಟಿಪ್ಪು ಬ್ರಿಟಿಷರ ವಿರುದ್ಧ ನಾಲ್ಕು ಬಾರಿ ಯುದ್ಧ ಮಾಡಿದ್ದರು. ಅಂತಹವರ ಜಯಂತಿಯನ್ನೇ ನಿಲ್ಲಿಸಿಬಿಟ್ಟಿರಲ್ಲ ಯಡಿಯೂರಪ್ಪ. ಯಾಕ್ರೀ ನಿಮಗೆ ಆ ಧರ್ಮದ ಮೇಲೆ ದ್ವೇಷ. ಅವರು ಮನುಷ್ಯರಲ್ಲವಾ?' ಎಂದು ಪ್ರಶ್ನಿಸಿದರು.
'ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮಾಡಿದ್ದು ನಾನು. ಏನು ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮಾಡಿದ್ರಾ? ಕೆಂಪೇಗೌಡ ಜಯಂತಿ ಮಾಡಿದ್ದು ನಾನು. ದೇವೇಗೌಡ, ಕುಮಾರಸ್ವಾಮಿ ಮಾಡಿದ್ರಾ? ಹಾಗೆಯೇ ಟಿಪ್ಪು ಜಯಂತಿ ಮಾಡಿದ್ದೆ. ಆದರೆ ಯಡಿಯೂರಪ್ಪ ಬಂದು ಅದನ್ನು ನಿಲ್ಲಿಸಿಬಿಟ್ರು. ಆ ಸಮುದಾಯದವರು ಏನು ಮಾಡಿದ್ದಾರೆ ಪಾಪ' ಎಂದು ಕಿಡಿಕಾರಿದರು.
ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಟೀಕೆ
ಇದೆಲ್ಲವೂ ಬಿಜೆಪಿಯವರ ರಾಜಕೀಯ ಗಿಮಿಕ್. ಏನ್ಮಾಡೋದು ಆದರೂ ಜನರು ಅವರಿಗೆ ವೋಟ್ ಹಾಕ್ತಾರೆ. ನನಗೆ ಇದು ಅರ್ಥ ಆಗ್ತಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಐದು ತಿಂಗಳಾದರೂ ಮೂರು ಕಾಸಿನ ಕೆಲಸ ಮಾಡಿದ್ದಾರಾ? ಶಾಸಕರನ್ನು ದೊಡ್ಡು ಕೊಟ್ಟು ಖರೀದಿ ಮಾಡೋದು ಬಿಟ್ಟು ಬೇರೇನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇವರು ಪರ್ಮನೆಂಟ್ ಸಿಎಂ ಆಗಿರ್ತಾರಾ?
'ಸಿದ್ದರಾಮಯ್ಯ ಪರ್ಮನೆಂಟ್ ವಿರೋಧಪಕ್ಷದ ನಾಯಕ ಎಂದು ಯಡಿಯೂರಪ್ಪ ಹೇಳ್ತಾರೆ. ಇವರೇನು ಪರ್ಮನೆಂಟ್ ಸಿಎಂ ಆಗಿರ್ತಾರಾ? ಜನರು ಬುದ್ಧಿವಂತರಾಗಬೇಕು. ಇಲ್ಲದಿದ್ದರೆ ಇಂತಹವರ ಕೈಗೆ ಅಧಿಕಾರ ಸಿಕ್ಕಿಬಿಡುತ್ತದೆ' ಎಂದರು.
ರಮೇಶ್ ಜಾರಕಿಹೊಳಿ ಕಾಂಗ್ರೆಸ್ಗೆ ವಾಪಸ್!
ನಾನು ಸಿಎಂ ಆಗುತ್ತೇನೆಂದು ಹೇಳಿಲ್ಲ
ನಾನೇ ಮುಂದಿನ ಸಿಎಂ ಆಗುತ್ತೇನೆ ಅಂತ ಹೇಳಿದ್ದೇನೆಂದು ಬಿಜೆಪಿಯವರು ನನ್ನ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ಉಪಚುನಾವಣೆಯ ನಂತರ ಮುಖ್ಯಮಂತ್ರಿ ಆಗ್ತೇನೆ ಅಂತ ನಾನು ಎಲ್ಲೂ ಕೂಡ ಹೇಳಿಲ್ಲ. ಉಪಚುನಾವಣೆಯ ನಂತರ ಯಡಿಯೂರಪ್ಪ ರಾಜೀನಾಮೆ ಕೊಡಬೇಕಾಗುತ್ತದೆ ಎಂದಷ್ಟೇ ಹೇಳಿದ್ದು ಎಂದು ಹೇಳಿದರು.
ಕುರ್ಚಿಗೆ ಬಂದು ಕುಳಿತುಬಿಟ್ಟ ಗಿರಾಕಿ
ನಾನು ಅಧಿಕಾರದಲ್ಲಿದ್ದಾಗ ಎಲ್ಲಾ ಬಡವರಿಗೂ ಸಹಾಯ ಮಾಡಿದ್ದೆ. ಅನ್ನಭಾಗ್ಯ, ಕೃಷಿ ಭಾಗ್ಯ, ಸಾಲ ಮನ್ನಾ, ಕ್ಷೀರ ಧಾರೆ, ಶೂ ಭಾಗ್ಯ, ಶಾದಿ ಭಾಗ್ಯ ನೀಡಿದ್ದೆ. ಎಲ್ಲವನ್ನೂ ನಾನೇ ಮಾಡಿದ್ದು. ಇವನೇನು ಮಾಡಿದ್ದಾನೆ? ವೋಟ್ ಮಾತ್ರ ಬಿಜೆಪಿಗೆ ಹಾಕುತ್ತೀರಿ. ಇವ್ರೇನು (ಬಿಜೆಪಿ) 113 ಸೀಟು ಗೆದ್ದಿದ್ದರಾ? ಗೆದ್ದಿದ್ದು 104 ಸೀಟು ಮಾತ್ರ. ಆದರೂ ಸಿಎಂ ಕುರ್ಚಿಗೆ ಬಂದು ಕುಳಿತುಬಿಟ್ಟ ಗಿರಾಕಿ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ನನ್ನ ವಿರುದ್ದ ನಿಂತು ಸೋತ್ನಲ್ಲ, ಅವನೇ ಕಣಯ್ಯಾ, ಹೆಲ್ತು...ಮಿನಿಸ್ಟ್ರು
ಸಮೀಕ್ಷೆ ಸತ್ಯವಾಗುವುದಿಲ್ಲ
ಉಪಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗುತ್ತದೆ ಎಂಬ ಎಕ್ಸಿಟ್ ಪೋಲ್ ವರದಿಗಳನ್ನು ಅವರು ನಿರಾಕರಿಸಿದರು. ಹರಿಯಾಣ, ಮಹಾರಾಷ್ಟ್ರದಲ್ಲಿ ಸಮೀಕ್ಷೆಗಳು ಏನಾದವು? ಎಲ್ಲಾ ತಲೆಕೆಳಗಾಯಿತು. ಸಮೀಕ್ಷೆಗಳೆಲ್ಲಾ ಸತ್ಯವಾಗಿಬಿಟ್ಟಿದ್ದಾವಾ? ಅಂದಾಜು ಮಾಡಿ ಹೇಳುತ್ತಾರೆ ಅಷ್ಟೇ. ಆದ್ದರಿಂದ ನಾನು ಸಮೀಕ್ಷೆ ನಂಬುವುದಿಲ್ಲ. ಡಿ. 9ಕ್ಕೆ ಫಲಿತಾಂಶ ಪ್ರಕಟವಾಗುತ್ತದೆ. ಜನರು ಏನು ತೀರ್ಪು ಕೊಡುತ್ತಾರೆ ಗೊತ್ತಾಗುತ್ತದೆ ಎಂದರು.