ಸಿದ್ದರಾಮಯ್ಯ ಬಾದಾಮಿಯನ್ನೇ ಆಯ್ದುಕೊಂಡದ್ದೇಕೆ? ಜಾತಿಲೆಕ್ಕಾಚಾರ ಏನು?
ಬಾದಾಮಿ, ಏಪ್ರಿಲ್ 14: ಪ್ರವಾಸಿ ಕ್ಷೇತ್ರವಾಗಿ ಪ್ರಸಿದ್ಧವಾಗಿದ್ದ ಬಾದಾಮಿ ಈಗ ರಾಜಕೀಯ ವಿಷಯವಾಗಿ ರಾಜ್ಯದ ಗಮನ ಸೆಳೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸ್ಪರ್ಧಿಸುತ್ತಿರುವುದೇ ಇದಕ್ಕೆ ಕಾರಣ.
ಬಾದಾಮಿ ಕ್ಷೇತ್ರ ಪರಿಚಯ : ಸಿದ್ದರಾಮಯ್ಯ ಕ್ಷೇತ್ರದಿಂದ ಸ್ಪರ್ಧಿಸುವರೇ?
ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿದ್ದರಾಮಯ್ಯ ಅವರು ಅಲ್ಲಿ ಜಯಗಳಿಸುವ ಬಗ್ಗೆ ಅನುಮಾನ ಉಂಟಾದ ಕಾರಣ ವಿಧಾನಸಭೆ ಪ್ರವೇಶದ ಅವಕಾಶ ತಪ್ಪಿಸಿಕೊಳ್ಳಬಾರದೆಂದು ಬಾದಾಮಿಯಿಂದಲೂ ಕಣಕ್ಕಿಳಿಯಲಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಬಾದಾಮಿಯನ್ನೇ ಆಯ್ಕೆ ಮಾಡಿಕೊಂಡದ್ದು ಏಕೆ ಎಂಬುದು ಹಲವರ ಕುತೂಹಲ.
ಅಗ್ನಿಪರೀಕ್ಷೆ ಗೆದ್ದು, ವಿರೋಧಿಗಳಿಗೆ ಸೆಡ್ಡು ಹೊಡೆಯುತ್ತಾರಾ ಸಿದ್ದು?
ಹಾಗೆ ನೋಡಿದರೆ ಬಾದಾಮಿ ಕಾಂಗ್ರೆಸ್ನ ಭದ್ರ ಕೋಟೆಯೇನೂ ಅಲ್ಲ, 2008 ಮತ್ತು 2004 ರ ಚುನಾವಣೆಗಳಲ್ಲಿ ಅಲ್ಲಿ ಬಜೆಪಿ ಅಭ್ಯರ್ಥಿ ಜಯ ಕಂಡಿದ್ದಾರೆ. ಬಿಜೆಪಿಯ ಕಲ್ಲಪ್ಪ ಪಟ್ಟಣಶೆಟ್ಟಿ ಸಹ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರನ್ನು ಹೊಂದಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ಬಾದಾಮಿಯಿಂದಲೇ ಸ್ಪರ್ಧೆ ಮಾಡಲು ಆಯ್ದುಕೊಂಡಿರುವುದು ಅಲ್ಲಿನ ಜಾತಿ ಲೆಕ್ಕಾಚಾರದಿಂದಾಗಿ.
ಜಾತಿವಾರು ಸಮೀಕ್ಷೆ: ಕಾಂಗ್ರೆಸ್ಸಿಗೆ ಮತ್ತೊಮ್ಮೆ ಅವಕಾಶ
ಒಟ್ಟು ಮತದಾರರೆಷ್ಟೆ
ಬಾದಾಮಿ ಕ್ಷೇತ್ರದಲ್ಲಿ ಒಟ್ಟು 2,14,834 ಮತದಾರರು ಇದ್ದಾರೆ, ಇದರಲ್ಲಿ 1,08,524 ಪುರುಷ ಮತದಾರರು, 1,06,294 ಮಹಿಳಾ ಮತದಾರರು ಇದ್ದಾರೆ. ಪುರುಷ ಮತ್ತು ಮಹಿಳೆಯರು ಬಹುತೇಕ ಸಮ ಸಂಖ್ಯೆಯಲ್ಲಿರುವುದು ಕ್ಷೇತ್ರದ ವಿಶೇಷ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ವೀರಶೈವ ಲಿಂಗಾಯತರೇ ಹೆಚ್ಚು
ಕ್ಷೇತ್ರದ ಜಾತೀವಾರು ಲೆಕ್ಕಾಚಾರ ಮಾಡುವುದಾದರೆ ಕ್ಷೇತ್ರದಲ್ಲಿ ವೀರಶೈವ ಮತ್ತು ಲಿಂಗಾಯತರ ಸಂಖ್ಯೆ ಹೆಚ್ಚಿದೆ. 65000 ಜನ ಇವೆರಡೂ ಸಮುದಾಯಕ್ಕೆ ಸೇರಿದವರಿದ್ದಾರೆ. ಲಿಂಗಾಯತ ಮತ್ತು ವೀರಶೈವ ಸಮುದಾಯ ವಿಂಗಡನೆ ನಂತರ 65000 ಮತಗಳಲ್ಲಿ ವಿಭಜನೆ ಉಂಟಾಗಿ ಅರ್ಧ ಅಥವಾ 40% ಮತಗಳಾದರೂ ಸಿದ್ದರಾಮಯ್ಯರ ಪಾಲಾಗುವ ಸಾಧ್ಯತೆ ಇದೆ.
ಕುರುಬರು ಎರಡನೇ ದೊಡ್ಡ ಸಮುದಾಯ
ಸಿದ್ದರಾಮಯ್ಯ ಅವರು ಸೇರಿರುವ ಕುರುಬ ಸಮುದಾಯ ಬಾದಾಮಿಯ ಎರಡನೇಅತಿ ದೊಡ್ಡ ಸಮುದಾಯ. 48000 ಸಾವಿರ ಕುರುಬ ಮತದಾರರು ಬಾದಾಮಿಯಲ್ಲಿದ್ದಾರೆ. ಈ ಅಂಕಿ ಸಂಖ್ಯೆ ಸಿದ್ದರಾಮಯ್ಯ ಅವರಿಗೆ ಗೆಲುವಿನ ಭರವಸೆ ಮೂಡಿಸಿರಲು ಸಾಕು.
ದಲಿತ ಮತಗಳೇ ನಿರ್ಣಾಯಕ
ಬಾದಾಮಿ ಕ್ಷೇತ್ರದಲ್ಲಿ ದಲಿತ ಮತಗಳು ನಿರ್ಣಾಯಕ ಸ್ಥಾನದಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮತಗಳ ಸಂಖ್ಯೆ 47000 ಕ್ಕೂ ಹೆಚ್ಚಿದೆ. ಹಾಗಾಗಿ ದಲಿತರು ಯಾರಿಗೆ ಆಶೀರ್ವಾದ ಮಾಡುತ್ತಾರೊ ಅವರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ. ಸಿದ್ದರಾಮಯ್ಯ ಅವರು ತಮ್ಮ ಆಡಳಿತದುದ್ದಕ್ಕೂ ದಲಿತ ಪರ ಎಂದು ರುಜುವಾತು ಮಾಡಿಕೊಂಡೇ ಬಂದಿದ್ದಾರೆ ಹಾಗಾಗಿ ಅವರಿಗೆ ದಲಿತರ ಮತಗಳು ಒಲಿಯುವ ಸಾಧ್ಯತೆ ಇದೆ.
ಮುಸ್ಲಿಂ ಮತಗಳೂ ಇವೆ
ಕಾಂಗ್ರೆಸ್ ಪಕ್ಷದ ಓಟ್ ಬ್ಯಾಂಕ್ ಎಂದೆನಿಸಿಕೊಳ್ಳುವ ಮುಸ್ಲಿಂ ಮತಗಳು ಬಾದಾಮಿ ಕ್ಷೇತ್ರದಲ್ಲಿ ಇವೆಯಾದರೂ ನಿರ್ಣಾಯಕ ಎನಿಸುವಷ್ಟಿಲ್ಲ. ಬಾದಾಮಿಯಲ್ಲಿರುವ ಮುಸ್ಲಿಂ ಮತಗಳ ಸಂಖ್ಯೆ 11000 ಸಾವಿರ. ಈ ಸಂಖ್ಯೆ ದೊಡ್ಡದಲ್ಲದಿದ್ದರು ಸಣ್ಣದಂತೂ ಅಲ್ಲ.
ನೇಕಾರ ಸಮುದಾಯವನ್ನು ನಿರ್ಲಕ್ಷಿಸುವಂತಿಲ್ಲ
ಬಾದಾಮಿಯಲ್ಲಿ ನೇಕಾರ ಸಮುದಾಯದ ಮತಗಳು 13000ದಷ್ಟಿವೆ. ಈ ಮತಗಳು ಯಾವ ಪಕ್ಷಕ್ಕೆ ಹೋಗುತ್ತವೆಯೆಂದು ನಿರ್ದಿಷ್ಟವಾಗಿ ಅಂದಾಜು ಮಾಡಲು ಸಾಧ್ಯವಿಲ್ಲ. ಆದರೆ ನೇಕಾರರ ಸಮುದಾಯದ ವಿಶ್ವಾಸ ಶಾಸಕ ಬಿಬಿ ಚಿಮ್ಮನಕಟ್ಟಿ ಅವರ ಮೇಲಿದೆ ಎನ್ನಲಾಗಿದ್ದು, ಅದು ಸಿದ್ದರಾಮಯ್ಯ ಅವರಿಗೆ ವರವಾಗುವ ಸಾಧ್ಯತೆ ಇದೆ.
ಬಾದಾಮಿಯನ್ನು ಸಿದ್ದರಾಮಯ್ಯಗೆ ಚಿಮ್ಮನಕಟ್ಟಿ ಬಿಟ್ಟು ಕೊಟ್ಟಿದ್ದೇಕೆ?
ಇತರೆ ಸಮುದಾಯದ ಮತಗಳಿಗೆ ಮೂರನೇ ಸ್ಥಾನ
ಬ್ರಾಹ್ಮಣ ಸೇರಿದಂತೆ ಇತರೆ ಸಮುದಾಯದ ಮತಗಳು ಬಾದಾಮಿಯಲ್ಲಿ 30000 ಇವೆ. ಈ ಮತಗಳು ವಿವಿಧ ಸಮುದಾಯಗಳಲ್ಲಿ ಹಂಚಿ ಹೋಗಿರುವ ಕಾರಣ ಇವು ನಿರ್ಣಾಯಕ ಅಲ್ಲ ಎನ್ನಬಹುದಾಗಿದೆ.
ಸಿದ್ದರಾಮಯ್ಯನ ಲೆಕ್ಕಾಚಾರ ಏನು?
ಬಹುತೇಕ ಹಿಂದುಳಿದ, ಅಲ್ಪಸಂಖ್ಯಾತ ದಲಿತ ಮತಗಳೇ ಹೆಚ್ಚಿರುವ ಬಾದಾಮಿಯಲ್ಲಿ ಅಹಿಂದ ನಾಯಕನಾಗಿ ಹೆಸರು ಗಳಿಸಿರುವ ತಮಗೆ ಗೆಲವು ಸುಲಭ ಎಂಬ ಲೆಕ್ಕಾಚಾರದೊಂದಿಗೆ ಸಿದ್ದರಾಮಯ್ಯ ಅವರು ಬಾದಾಮಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ನೆನಪಿರಲಿ ಸಿದ್ದರಾಮಯ್ಯ ಅವರ ಬಳಿ ಜಾತಿ ಗಣತಿಯ ನಿರ್ದಿಷ್ಟ ಅಂಕಿ ಸಂಖ್ಯೆಯೂ ಇದೆ.
ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆಲ್ಲುತ್ತಾರಾ?
ಅಹಿಂದ ಮತಗಳು ಹೆಚ್ಚಿಗೆವೆ ಎಂದ ಕೂಡಲೇ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದು ನಿರ್ಧರಿಸುವಂತೆ ಇಲ್ಲ. ಇಲ್ಲಿ ಬಿಜೆಪಿ ಕೂಡಾ ಪ್ರಬಲವಾಗಿದ್ದು, ಜೆಡಿಎಸ್ ಅಭ್ಯರ್ಥಿ ಕೂಡ ಈ ಬಾರಿ ಉತ್ತಮ ಪೈಪೋಟಿ ನೀಡಲಿದ್ದಾರೆ. ಉಳಿದ ಪಕ್ಷಗಳ ಅಭ್ಯರ್ಥಿಗಳೂ ಸಹ ಹಿಂದುಳಿದ ಸಮುದಾಯಗಳ ಅಭ್ಯರ್ಥಿಗಳೇ ಆಗಿದ್ದು ಅಹಿಂದ ಮತಗಳು ಅಭ್ಯರ್ಥಿಗಳಿಗೆ ವಿಭಜನೆ ಆದಲ್ಲಿ ಗೆಲುವವಿನ ಲೆಕ್ಕಾಚಾರ ಬೇರೆಯೇ ಆಗುತ್ತದೆ. ಆಗ ವೀರಶೈವ ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕ ಸ್ಥಾನಕ್ಕೆ ಬಂದು ಕೂರುತ್ತವೆ. ಹೀಗಾಗಿ ಸಿದ್ದರಾಮಯ್ಯ ಅವರು ಗೆಲ್ಲುವ ಸಾಧ್ಯತೆ ಇದೆಯಾದರೂ ಗೆಲವು ಅಷ್ಟೇನು ಸುಲಭವಲ್ಲ.