ಅಪಾಯಕಾರಿಯಾಗುತ್ತಿರುವ ತ್ರಿವಳಿ ನದಿಗಳು... ಪ್ರವಾಹ ಭೀತಿಯಲ್ಲಿ ಬಾಗಲಕೋಟೆ ಜಿಲ್ಲೆ
ಬಾಗಲಕೋಟೆ, ಅಗಸ್ಟ್ 16: ತ್ರಿವಳಿ ನದಿಗಳ ಸಂಗಮ ಬಾಗಲಕೋಟೆಯಲ್ಲಿ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದ ಜನರಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಘಟಪ್ರಭಾ ನದಿಯಿಂದ ದೇವಸ್ಥಾನ, ಸೇತುವೆ ಜಲಾವೃತ ಆದ್ದರೆ, ಕೃಷ್ಣಾ ನದಿಯ ಪ್ರವಾಹದಿಂದ ಗ್ರಾಮಗಳು ನಡುಗಡ್ಡೆಯಾಗಿವೆ. ಇನ್ನು ಮಲಪ್ರಭಾ ನದಿ ತೀರದಲ್ಲಿ ಪ್ರವಾಹದಿಂದ ಬೆಳೆಗಳು ನಾಶವಾಗಿವೆ.
ಕೃಷ್ಣಾ,ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ಸಂಗಮವಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಜಿಲ್ಲೆಯಲ್ಲಿ ಅಷ್ಟಾಗಿ ಮಳೆ ಇಲ್ಲದೇ ಇದ್ದರೂ, ಬೆಳಗಾವಿ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬಾಗಲಕೋಟೆ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಮನೆಮಾಡಿದೆ.
ಚಿಕ್ಕಮಗಳೂರು: ಮಳೆ ಕಡಿಮೆಯಾದರೂ, ಮನೆ-ಗುಡ್ಡ ಕುಸಿತ ನಿಂತಿಲ್ಲ
ಒಂದೆಡೆ ಕೃಷ್ಣಾ ನದಿಗೆ 1.70 ಲಕ್ಷ ಕ್ಯೂಸೆಕ್ನಷ್ಟು ನೀರನ್ನ ಬಿಡಲಾಗಿದೆ. ಇದರಿಂದ ಜಮಖಂಡಿ ಭಾಗದ, ತುಬಚಿ ಹಾಗೂ ಮುತ್ತೂರು ಗ್ರಾಮಗಳ ನಡುಗಡ್ಡೆಯಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಹೀಗಾಗಿ ತುಬಚಿ ಗ್ರಾಮದ ಮಹಿಳೆಯರು ಕೃಷ್ಣಾ ನದಿಗೆ ಉಕ್ಕಿ ಹರಿಯದಂತೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಮಖಂಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಸ್ಥಿತಿ ತಲೆದೋರಿದ್ದು ನದಿ ಪಾತ್ರದ ಮನೆ, ಜಮೀನು ಜಲಾವೃತಗೊಂಡಿವೆ. ಮುತ್ತೂರು ಗ್ರಾಮದಲ್ಲಿ 12ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಕುಟುಂಬಗಳನ್ನು ದೋಣಿಯ ಮೂಲಕ ಸ್ಥಳಾಂತರಿಸಲಾಗಿದೆ.
ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಭೀತಿ
ಘಟಪ್ರಭಾ ನದಿಗೆ 38 ಸಾವಿರ ಕ್ಯೂಸೆಕ್ ನೀರು ಬರುತ್ತಿದ್ದು ಮುಧೋಳ ತಾಲ್ಲೂಕಿನಲ್ಲಿ11 ಚಿಕ್ಕ ಸೇತುಗಳು ಮುಳುಗಡೆ ಕಂಡಿವೆ. ಅಲ್ಲದೇ ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತ ಆಗಿದ್ದು, ಏಳು ಅಡಿಯಷ್ಡು ನೀರು ಬಂದಿದೆ. ಮಲಪ್ರಭಾ ನದಿಯೂ ಸಹ ಉಕ್ಕಿ ಹರಿಯುತ್ತಿದೆ. ನವಿಲುತೀರ್ಥ ಡ್ಯಾಂ ನಿಂದ ಮಲಪ್ರಭಾ ನದಿಗೆ 8 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನ ಹರಿ ಬಿಡಲಾಗಿದೆ. ಹೀಗಾಗಿ ಬಾದಾಮಿ, ಗುಳೇದಗುಡ್ಡ ಹಾಗೂ ಹುನಗುಂದ ತಾಲ್ಲೂಕಿನ ನದಿ ತೀರದ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಜಮೀನಿಗೆ ನೀರು ನುಗ್ಗಿ ಕಬ್ಬು, ಪೇರಲ ಬೆಳೆ ನಾಶ
ಮಲಪ್ರಭಾ ಉಕ್ಕಿ ಹರಿಯುತ್ತಿರೋದ್ರಿಂದ ಬಾದಾಮಿ ತಾಲ್ಲೂಕಿನ ಗೋವಿನಕೊಪ್ಪ ಹಾಗೂ ಕೊಣ್ಣೂರ ಸಂಪರ್ಕ ಕಲ್ಪಿಸುವ ಹಳೆ ರಸ್ತೆ ಸಂಪೂರ್ಣ ಜಲಾವೃತ ಆಗಿದೆ. ರಸ್ತೆ ಮೇಲೆ ಸುಮಾರು ನಾಲ್ಕೈದು ಅಡಿಯಷ್ಟು ನೀರು ಹರಿಯುತ್ತಿದೆ. ಅಲ್ಲದೇ ನದಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಕಬ್ಬು, ಪೇರಲ ಬೆಳೆ ನಾಶ ವಾಗಿದೆ. ಶಾಶ್ವತ ಪರಿಹಾರ ಕೊಡುವಂತೆ ಘಟಪ್ರಭಾ, ಮಲಪ್ರಭಾ ಭಾಗದ ರೈತರು ಆಗ್ರಹಿಸಿದ್ದಾರೆ...
ಕುಸಿದು ಬೀಳುತ್ತಿರುವ ಮನೆಗಳು
2009 ರಿಂದ ಇವರೆಗೂ ನಾಲ್ಕು ಬಾರಿ ಪ್ರವಾಹ ಬಂದಿದೆ. 2019ರಲ್ಲಿ ಬಂದಿದ್ದ ದೊಡ್ಡ ಪ್ರವಾಹಕ್ಕೆ ಗೋವಿನಕೊಪ್ಪ ಗ್ರಾಮದ ಎಲ್ಲ ಜನತೆ ಊರು ಬಿಟ್ಟು, ಹೊಲಗಳಲ್ಲಿ, ಶಾಲೆಗಳಲ್ಲಿ ಆಶ್ರಯ ಪಡೆದಿದ್ದರು. ಇದೀಗ ಮತ್ತೆ ನದಿಗೆ ನೀರು ಬರುತ್ತಿದೆ. ಬೆಳೆದ ಬೆಳೆಗಳು ನೀರಲ್ಲಿ ನಿಂತು ನಾಶವಾಗುತ್ತಿವೆ. ಈ ಹಿಂದೆ 2019ರಲ್ಲಿ ಮಹಾ ಪ್ರವಾಹದಿಂದ ಮನೆಗಳ ಗುಣಮಟ್ಟ ಕಡಿಮೆಯಾಗುತ್ತಿದ್ದು, ಅಲ್ಲಲ್ಲಿ ಮನೆಗಳು ಕುಸಿದು ಬಿಳ್ಳುತ್ತಿವೆ.
ಗ್ರಾಮ ಸ್ಥಳಾಂತರಿಸಲು ಒತ್ತಾಯ
ಪ್ರತಿ ಬಾರಿ ನದಿ ಪ್ರವಾಹ ಬಂದಾಗ ನಾವು ಸಾಕಷ್ಟು ತೊಂದರೆ ಅನುಭವಿಸುತ್ತೇವೆ. ಇದೀಗ ಬಂದಿರೋ ನೀರಿನಿಂದಾಗಿ ನಷ್ಟವಾಗಿರುವ ಹಾನಿಯನ್ನ ಬರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇನ್ನೊಂದೆಡೆ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ರೌದ್ರನರ್ತನ ಬೇಡ, ಶಾಂತಳಾಗು ತಾಯಿ ಎಂದು ಜಮಖಂಡಿ ತಾಲ್ಲೂಕಿನ ತುಬಚಿ ಗ್ರಾಮದ ಮಹಿಳೆಯರು ಕೃಷ್ಣಾ ನದಿಗೆ ಪೂಜೆ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ಮಳೆಗಾಲ ಆರಂಭವಾದರೆ ಸಾಕು ಬಾಗಲಕೋಟೆ ಜಿಲ್ಲೆಗೆ ಪ್ರವಾಹ ತಪ್ಪಿದ್ದಲ್ಲ. ಜಿಲ್ಲೆಯಲ್ಲಿ ಮಳೆ ಆಗದೇ ಇದ್ದರೂ ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಸುರಿಯುವ ನಿರಂತರ ಮಳೆಯಿಂದಾಗಿ ಬಾಗಲಕೋಟೆ ಪ್ರತಿ ಬಾರಿ ಪ್ರವಾಹದಂತಹ ಪರಿಸ್ಥಿತಿ ಎದುರಿಸಬೇಕಾಗಿದೆ.
Recommended Video