ಪ್ರಧಾನಿ ಮೋದಿ ಗಡ್ಡ, ಕೇಶ ಬಿಟ್ಟ ಹಿಂದಿನ ಕಾರಣ ಬಹಿರಂಗ ಪಡಿಸಿದ ಪೇಜಾವರ ಶ್ರೀ
ಬಾಗಲಕೋಟೆ, ಡಿ 27: ಗಡ್ಡ, ಕೂದಲನ್ನು ಯಾವಾಗಲೂ ಟ್ರಿಮ್ ಮಾಡಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಪ್ರಧಾನಿ ಮೋದಿ, ಇತ್ತೀಚಿನ ದಿನಗಳಲ್ಲಿ ಅದನ್ನು ಕಟ್ ಮಾಡಿಕೊಳ್ಳುವ ಗೋಜಿಗೂ ಹೋಗಿಲ್ಲ. ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರ ಮೋದಿಯವರಲ್ಲಿ ಈ ಬದಲಾವಣೆ ಕಾಣಿಸಿಕೊಂಡಿದೆ.
ಮೋದಿ ಯಾವ ಕಾರಣಕ್ಕಾಗಿ ಗಡ್ಡ ಬಿಟ್ಟಿರಬಹುದು ಎನ್ನುವುದು ಸಾರ್ವಜನಿಕರಲ್ಲಿ ಇರುವ ಕುತೂಹಲದ ವಿಚಾರ. ಈ ವಿಚಾರದ ಬಗ್ಗೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, ಮೋದಿಯವರು ಗಡ್ಡ ಬೆಳೆಯಲು ಈ ಕಾರಣವೂ ಇರಬಹುದು ಎಂದು ಅಯೋಧ್ಯೆ ವಿಚಾರವನ್ನು ತೆಗೆದಿದ್ದಾರೆ.
ಮೋದಿ ಮನ್ಕಿ ಬಾತ್ ಪ್ರಸಾರ ವೇಳೆ ರೈತರಿಂದ 'ತಾಲಿ ಬಜಾವೊ' ಪ್ರತಿಭಟನೆ
"ಸಾಮಾನ್ಯವಾಗಿ ದೀಕ್ಷಾಬದ್ದರಾಗುವುದು ಎಂದಿದೆ. ಮೋದಿಯವರು ಅಯೋಧ್ಯೆ ರಾಮಮಂದಿರಕ್ಕೆ ಖುದ್ದಾಗಿ ಶಿಲಾನ್ಯಾಸ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣವಾಗುವವರೆಗೆ ಮೋದಿಯವರು ಕೇಶ ತೆಗೆಯುವುದಿಲ್ಲ ಎಂದು ಸಂಕಲ್ಪ ಮಾಡಿರಬಹುದು"ಎಂದು ಪೇಜಾವರ ಶ್ರೀಗಳು ಹೇಳಿದರು.
"ನನಗೆ ಅನಿಸಿದ ವಿಚಾರವನ್ನು ನಾನು ಹೇಳಿದ್ದೇನೆ, ಅವರು ನನಗೆ ಹೇಳಿದ್ದಲ್ಲ. ರಾಮಮಂದಿರ ನಿರ್ಮಾಣದ ನೈತಿಕವಾಗಿ ಜವಾಬ್ದಾರಿಯನ್ನು ಅವರು ಹೊತ್ತಿರಬಹುದು. ಹಾಗಾಗಿ, ಭವ್ಯ ಮಂದಿರ ನಿರ್ಮಾಣವಾಗುವವರೆಗೂ ಕೇಶ ಗಡ್ಡ ತೆಗೆಯುವುದಿಲ್ಲ ಎಂದು ದೀಕ್ಷಾಬದ್ದರಾಗಿರಬಹುದು"ಎಂದು ವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯ ಪಟ್ಟರು.
"ರಾಮಮಂದಿರ ನಿರ್ಮಾಣಕ್ಕೆ ಮೂರು ವರ್ಷ ತಗಲಬಹುದು. ಇದಕ್ಕೆ ಸುಮಾರು ಒಂದೂವರೆ ಸಾವಿರ ಕೋಟಿ ಅಂದಾಜು ಬಜೆಟ್ ಇದೆ. ವಿಶ್ವಹಿಂದೂ ಪರಿಷತ್ ಮುಂದಿನ ದಿನಗಳಲ್ಲಿ ದೇಣಿಗೆ ಸಂಗ್ರಹಣೆ ಆರಂಭಿಸಲಿದೆ"ಎಂದು ಅಯೋಧ್ಯ ಟ್ರಸ್ಟಿನ ಸದಸ್ಯರೂ ಆಗಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದರು.
"ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ರೈತರು ಎಂದು ನನಗನಿಸುವುದಿಲ್ಲ. ರೈತರ ಹೆಸರಿನಲ್ಲಿ ಮುಖವಾಡ ಹೊತ್ತವರು ಈ ರೀತಿ ಮಾಡುತ್ತಿದ್ದಾರೆ ಎನ್ನುವುದು ನಮ್ಮ ಅಭಿಪ್ರಾಯ" ಎಂದು ಪೇಜಾವರ ಶ್ರೀಗಳು ಹೇಳಿದರು.
Recommended Video