ಕೈಸನ್ನೆಯಲ್ಲಿ ಕಾಂಗ್ರೆಸ್ ಅನ್ನು 'ತಿನ್ನೋ ಕಾಂಗ್ರೆಸ್' ಅಂದ ರಮೇಶ್ ಕುಮಾರ್
ಬಾಗಲಕೋಟೆ, ಫೆ 24: "ಆಗಿನ ಕಾಂಗ್ರೆಸ್ಸೇ ಬೇರೆ, ಈಗಿನ ಕಾಂಗ್ರೆಸ್ಸೇ ಬೇರೆ. ಆಗಿನ ಕಾಂಗ್ರೆಸ್ಸಿಗೂ, ಈಗಿನ ಕಾಂಗ್ರೆಸ್ಸಿಗೂ ನಾನು ಹೋಲಿಕೆ ಮಾಡುವುದಿಲ್ಲ. ಈಗಿನ ಕಾಂಗ್ರೆಸ್ ತಿನ್ನೋ ಕಾಂಗ್ರೆಸ್" ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಚುನಾವಣಾ ರಾಜಕಾರಣ, ಪ್ರಜಾಪ್ರಭುತ್ವ, ಮಾನವೀಯತೆ ವಿಚಾರದಲ್ಲಿ, ವಿಶ್ವ ಚೇತನ ಬಾದಾಮಿ, ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಮೇಶ್ ಕುಮಾರ್, "ನೆಹರೂ, ಗಾಂಧಿಯವರು ದೇಶಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ಸೇ ಬೇರೆ. ಈಗ ಕಾಣುತ್ತಿರುವ ಕಾಂಗ್ರೆಸ್ ಬೇರೆ. ಈ ಕಾಂಗ್ರೆಸ್ಸಿಗೆ, ಆಗಿನ ಕಾಂಗ್ರೆಸ್ಸಿಗೆ ಹೋಲಿಕೆ ಬೇಡ" ಎಂದು ರಮೇಶ್ ಕುಮಾರ್, ಸ್ವಪಕ್ಷವನ್ನೇ ಲೇವಡಿ ಮಾಡಿದ್ದಾರೆ.
ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ಅವ್ಯವಹಾರ: ವೆಂಕಟ ಶಿವಾರೆಡ್ಡಿ
"ನಾನು ಆಗಿನ ಕಾಲದ, ಆ ಸಿದ್ದಾಂತದ ಕಾಂಗ್ರೆಸ್ಸಿಗ ಎಂದು ಹೇಳುವುದಿಲ್ಲ. ಆ ಪ್ರಯತ್ನವನ್ನೂ ಮಾಡುವುದಿಲ್ಲ. ಈಗ ಇರುವ ಕಾಂಗ್ರೆಸ್ ತಿನ್ನೋ ಪಕ್ಷ" ಎಂದು ಕೈಸನ್ನೆಯಲ್ಲಿ ರಮೇಶ್ ಕುಮಾರ್ ಹೇಳಿದ್ದಾರೆ.
"ಅಂದು ಅವರೆಲ್ಲಾ ತ್ಯಾಗ ಮಾಡದಿದ್ದರೆ, ನೀವೆಲ್ಲಾ (ಕಾಂಗ್ರೆಸ್) ಇರುತ್ತಿರಲಿಲ್ಲ. ನಾನು ಯಾರ ಹೆಸರನ್ನೂ ಹೇಳೋಕೆ ಬಯಸುವುದಿಲ್ಲ. ಸತ್ಯವನ್ನು ನಿಮಗೆ ಪರಿಚಯ ಮಾಡಿಸಿಕೊಡುತ್ತಿದ್ದೇನೆ" ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
"ನಾವೆಲ್ಲಾ ಅವರ ತ್ಯಾಗವನ್ನು ನೆನಪಿಸಿಕೊಳ್ಳಬೇಕಿದೆ. ಅನ್ನ ತಿನ್ನೋ ಬಾಯಿಯಲ್ಲಿ ನೆಹರೂ, ಗಾಂಧಿ, ಅಂಬೇಡ್ಕರ್ ಬಗ್ಗೆ ಕೆಟ್ಟದನ್ನು ಮಾತನಾಡಬೇಡಿ" ಎಂದು ರಮೇಶ್ ಕುಮಾರ್ ಮನವಿ ಮಾಡಿದರು.
"ನೀವೆಲ್ಲಾ ಬುದ್ದಿವಂತರಿದ್ದೀರಿ, ನನ್ನ ವಿಚಾರಧಾರೆಯಲ್ಲಿ ತಪ್ಪಿದ್ದರೆ, ನನಗೆ ಹೇಳಿ. ಇದರಿಂದ ತಿದ್ದಿಕೊಳ್ಳಲು ನನಗೆ ಸಹಾಯವಾಗುತ್ತದೆ" ಎಂದು ರಮೇಶ್ ಕುಮಾರ್ ಹೇಳಲು ಮರೆಯಲಿಲ್ಲ.