ನಟಿ, ಮಾಜಿ ಸಚಿವೆ ಉಮಾಶ್ರೀ ಮನೆ ಕಳ್ಳತನ: ಕಳ್ಳರಿಗೆ ಬಲೆ ಬೀಸಿದ ಪೊಲೀಸರು
ಬಾಗಲಕೋಟೆ, ನವೆಂಬರ್ 2: ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲ್ಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಮಾಜಿ ಸಚಿವೆ, ನಟಿ ಉಮಾಶ್ರೀ ಅವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ.
ರಬಕವಿಯ ಮನೆಯ ಬಾಗಿಲನ್ನು ಮುರಿದು ಒಳ ನಸುಳಿರುವ ಕಳ್ಳರು, ಅಪಾರ ಪ್ರಮಾಣದ ವಸ್ತು ಮತ್ತು ಹಣ ದರೋಡೆ ಮಾಡಿ ಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಕಳ್ಳತನವಾದ ಸ್ಥಳಕ್ಕೆ ದೌಡಾಯಿಸಿದ ಸಿಪಿಐ ಕರುಣೇಸಿಗೌಡ ಮತ್ತು ಪಿಎಸ್ಐ ವಿಜಯಕುಮಾರ ಕಾಂಬಳೆ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಕಾಂಗ್ರೆಸ್ ಮುಖಂಡೆ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರು ಸದ್ಯ ಬೆಂಗಳೂರು ನಗರದಲ್ಲಿ ವಾಸ ಮಾಡುತ್ತಿದ್ದು, ಅವರ ಬಾಗಲಕೋಟೆ ಜಿಲ್ಲೆಯ ರಬಕವಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿರುವ ಕಳ್ಳರು ಮನೆ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ.
ಬೆಂಗಳೂರಿನಿಂದ ನಟಿ ಉಮಾಶ್ರೀ ಅವರು ವಾಪಸು ಬಂದು ಪರಿಶೀಲನೆ ನಡೆಸಿದ ನಂತರ, ಎಷ್ಟು ಹಣ, ಚಿನ್ನಾಭರಣ ದರೋಡೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಲಿದೆ.
Recommended Video
ಉಮಾಶ್ರೀ ಅವರ ಮನೆಯ ಬಾಗಿಲನ್ನು ಮೊದಲು ಮುರಿದು, ನಂತರ ಕೊಠಡಿಯಲ್ಲಿರುವ ತಿಜೋರಿಯನ್ನು ಮುರಿದು ಕಳ್ಳತನ ಮಾಡಿದ್ದಾರೆ.