ಜಮಖಂಡಿಯಲ್ಲಿ ವಾರದ ಸಂತೆಗೆ ಬಂದು ತರಕಾರಿ ಖರೀದಿಸಿದ ಸುಧಾಮೂರ್ತಿ
Recommended Video
ಜಮಖಂಡಿ, ಫೆಬ್ರುವರಿ 3: ಸರಳತೆಗೆ ಹೆಸರಾಗಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ನಿನ್ನೆ ನಗರದ ಎಪಿಎಂಸಿ ಆವರಣದಲ್ಲಿ ವಾರದ ಸಂತೆಗೆ ಜನ ಸಾಮಾನ್ಯರಂತೆ ಬೆಳಿಗ್ಗೆ ಬಂದು ಸಂತೆ ತುಂಬೆಲ್ಲ ಅಡ್ಡಾಡಿ ರೈತರು, ರೈತ ಮಹಿಳೆಯರ ಯೋಗಕ್ಷೇಮದ ಮಾತುಗಳಾಡಿದರು. ಜೊತೆಗೆ ತರಕಾರಿ, ಹೂವು ಸೇರಿದಂತೆ ದಿನಬಳಕೆ ವಸ್ತುಗಳನ್ನು ಸಂತೆಯಲ್ಲಿ ಖರೀದಿಸಿದರು.
ಜಮಖಂಡಿ ತಾಲ್ಲೂಕಿನ ಶೂರ್ಪಾಲಿಯ ಮನೆದೇವರು ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಸುಧಾಮೂರ್ತಿ ಅವರು ಶನಿವಾರ ಸಂಜೆ ಕುಂಚನೂರು ರಸ್ತೆಯ ಕೆಎಚ್ ಬಿ ಕಾಲೊನಿ ದಾನಮ್ಮನ ಗುಡಿ ಬಳಿಯ ಸೋದರಳಿಯ (ತಮ್ಮನ ಮಗ) ನಾರಾಯಣ ಕುಲಕರ್ಣಿ ಅವರ ಮನೆಗೆ ಆಗಮಿಸಿ ಉಳಿದುಕೊಂಡಿದ್ದರು. ನಂತರ ಮಾರನೇ ದಿನ ಜಮಖಂಡಿಯಲ್ಲಿ ನಡೆಯುವ ಭಾನುವಾರ ಸಂತೆಗೆ ಬಂದು ಖರೀದಿ ಮಾಡಿದರು.
ರೈತರ ಯೋಗ ಕ್ಷೇಮ ವಿಚಾರಿಸಿದ ಸುಧಾಮೂರ್ತಿ
ಸಂತೆಯಲ್ಲಿ ಸೌತೆ, ಗಜ್ಜರಿ, ಕೊತ್ತಂಬರಿ, ಬದನೆ, ಹೂವು, ಕಡ್ಲಿ ಪಲ್ಲೆ, ಬಾಳೆ ಹಣ್ಣು, ದಾಳಿಂಬೆ ಸೇರಿದಂತೆ ಈ ಭಾಗದಲ್ಲಿ ಸಿಗುವ ತರಕಾರಿಗಳನ್ನು ತೆಗೆದುಕೊಂಡ ಸುಧಾಮೂರ್ತಿ ಅವರು ಪರಿಚಯಸ್ಥರಂತೆ ಮಳೆ ಬೆಳೆ ಹೇಗಿದೆ, ಹೊಲದಲ್ಲಿ ಏನೆಲ್ಲ ಬೆಳೆಯುತ್ತೀರಿ ಎಂದು ರೈತರ ಜೊತೆ ಕುಶಲೋಪರಿ ವಿಚಾರಿಸಿಕೊಂಡರು. ಮಹಿಳೆಯರ ಜೊತೆ ಆತ್ಮೀಯತೆಯಿಂದ ಮಾತನಾಡುತ್ತಾ ಜನಸಾಮಾನ್ಯರಂತೆ ಸಂತೆ ತುಂಬಾ ಅಡ್ಡಾಡಿದರು.
ನಮ್ಮ ಮೆಟ್ರೋ 2ನೇ ಹಂತಕ್ಕೆ 30 ಕೋಟಿ ರು ಕೊಟ್ಟ ಸುಧಾ ಮೂರ್ತಿ
ತಾಜಾ ತರಕಾರಿ ಕಂಡು ಖುಷಿಪಟ್ಟರು
ಈ ಭಾಗದಲ್ಲಿ ತರಕಾರಿಯನ್ನು ಕಿತ್ತು ಅದೇ ದಿನ ಮಾರುತ್ತಾರೆ. ಇಲ್ಲಿ ಬಹಳ ಕಡಿಮೆ ದರದಲ್ಲಿ ಉತ್ತಮ ತರಕಾರಿ ಸಿಗುತ್ತದೆ, ಇಂತಹ ಶುದ್ಧ ತರಕಾರಿ ದೊಡ್ಡದೊಡ್ಡ ನಗರಗಳಲ್ಲಿ ಸಿಗುವುದಿಲ್ಲ. ಹಲವಾರು ದಿನಗಳ ಕಾಲ ಸಂಸ್ಕರಿಸಿ ಇಟ್ಟಿರುತ್ತಾರೆ. ಇಲ್ಲಿ ತಾಜಾ ತರಕಾರಿ ಸಿಗುತ್ತದೆ ಎಂದು ಖುಷಿ ಪಟ್ಟರು ಸುಧಾಮೂರ್ತಿಯವರು. ಹಾಗೆ ಖುಷಿಯಿಂದಲೇ ಮನೆಗೆ ತರಕಾರಿಗಳನ್ನೂ ಕೊಂಡುಕೊಂಡರು.
ನಮ್ಮೂರ ಸಂತೆಗೆ ಬಂದಿದ್ದರು ಎಂದು ಖುಷಿಪಟ್ಟ ಜನ
ಸಂತೆಯಿಂದ ಅವರು ಹೊರಹೋದ ಮೇಲೆ ಸಂತೆಗೆ ಸುಧಾಮೂರ್ತಿಯವರು ಬಂದಿದ್ದರು ಎಂಬ ವಿಷಯ ಹರಡುತ್ತಿದ್ದಂತೆ, ಸುಧಾಮೂರ್ತಿಯವರು ನಮ್ಮೂರ ಸಂತೆಗೆ ಬಂದಿದ್ದರು ಎಂದು ನಗರದಲ್ಲಿ ಎಲ್ಲರಲ್ಲಿ ಹರ್ಷ ಮೂಡಿಸಿತು. ಜನರು ವಿಷಯ ತಿಳಿದು ಖುಷಿಪಟ್ಟರು. ಸುಧಾಮೂರ್ತಿ ಅವರಂಥ ದೊಡ್ಡವರು ನಮ್ಮೂರ ಸಂತಿಗೆ ಬಂದು ಸಾಮಾನ್ಯರಂತೆ ಸಂತೆ ಮಾಡುತ್ತಾರೆ ಎಂದರೆ ಅದು ಖುಷಿ ವಿಷಯ. ಅವರು ನಮಗೆ ಗುರುತು ಸಿಕ್ಕಿದ್ದರೆ ಅವರ ಜೊತೆ ಒಂದು ಫೋಟೊ ತೆಗೆದುಕೊಳ್ಳುತಿದ್ದೆವು ಎಂದು ಖುಷಿ ಪಟ್ಟರು ಸಂತೆ ವ್ಯಾಪಾರಸ್ಥರು.
ಸುಧಾಮೂರ್ತಿ ಚಿತ್ರವನ್ನು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡ ಅಭಿಮಾನಿ
"ಮನೆಯಲ್ಲೇ ತರಕಾರಿ ಬೆಳೆಯುವರು"
"ಸುಧಾಮೂರ್ತಿ ಅವರು ತಮ್ಮ ಮನೆಯ ತೋಟದಲ್ಲಿ ತರಕಾರಿ, ಹಣ್ಣುಗಳನ್ನು ಬೆಳೆಸುತ್ತಾರೆ, ಅವರು ಸಂತೆಗೆ ಹೋಗುವದಿಲ್ಲ. ಆದರೆ ಅವರಿಗೆ ತವರೂರಿನ ಭಾಗದಲ್ಲಿ ಬೆಳೆಯುವ ತರಕಾರಿ ಎಂದರೆ ಅಚ್ಚುಮೆಚ್ಚು, ಕಡ್ಲಿ ಪಲ್ಲೆ ಒಳ್ಳೆ ಟೆಸ್ಟ್ ಇರುತ್ತೆ ಎಂದು ಅವರೇ ನನಗೆ ಹೇಳುತ್ತಾರೆ, ಈ ಭಾಗದಲ್ಲಿ ಬಂದಾಗ ತರಕಾರಿಯನ್ನು ಬೆಂಗಳೂರಿನ ಮನೆಗೆ ಒಯ್ಯುತ್ತಾರೆ" ಎಂದರು ಅವರ ಸೋದರಳಿಯ ನಾರಾಯಣ ಕುಲಕರ್ಣಿ. ನಂತರ ಅವರು ಶೂರ್ಪಾಲಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿ ರಸ್ತೆ ಮಾರ್ಗವಾಗಿ ಬಾಗಲಕೋಟಕ್ಕೆ ತೆರಳಿದರು.