SSLC ಬೋರ್ಡ್ ಎಡವಟ್ಟಿಟ್ಟು, ಪಿಯುಸಿ ಸೇರಲು ವಿದ್ಯಾರ್ಥಿನಿಗೆ ತೊಂದರೆ
ಬಾಗಲಕೋಟೆ, ಜೂನ್ 2 : ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ಮಾಡಿದ ಎಡವಟ್ಟಿನಿಂದ ವಿದ್ಯಾರ್ಥಿನಿಯೊಬ್ಬರು ಕಾಲೇಜು ಪ್ರವೇಶಾತಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಬಸವಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೃತಾ ಉಳ್ಳಾಗಡ್ಡಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ 80 ಕ್ಕೆ 80 ಅಂಕ ಪಡೆದಿದ್ದಾರೆ. ಆಂತರಿಕ 20 ಅಂಕಗಳನ್ನು ಸೇರಿ ಒಟ್ಟು 100ಕ್ಕೆ 100 ಅಂಕವಾಗಬೇಕಿತ್ತು.
ಒಟ್ಟಿಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಮ್ಮ-ಮಗಳು ಪಾಸು
ಆದರೆ ಪ್ರಸ್ತುತ ಬಂದಿರುವ ಅಂಕಪಟ್ಟಿಯಲ್ಲಿ ಕೇವಲ 49 ಅಂಕ ನಮೂದಾಗಿದೆ. ಇದರಿಂದ ವಿದ್ಯಾರ್ಥಿನಿಯ ಸಮಾಜ ವಿಜ್ಞಾನ ವಿಷಯದಲ್ಲಿ 51 ಅಂಕಗಳ ವ್ಯತ್ಯಾಸ ಕಂಡುಬಂದಿದೆ. ಅಮೃತಗೆ ಎಸ್ಎಸ್ಎಲ್ಸಿಯಲ್ಲಿ506 ಅಂಕಗಳು ಬಂದಿವೆ. ಕನ್ನಡದಲ್ಲಿ 119, ಇಂಗ್ಲೀಷ್ನಲ್ಲಿ 90, ಹಿಂದಿಯಲ್ಲಿ 95, ಗಣಿತದಲ್ಲಿ 74, ವಿಜ್ಞಾನದಲ್ಲಿ 79 ಅಂಕ ಪಡೆದಿದ್ದರೆ, ಸಮಾಜ ವಿಜ್ಞಾನದಲ್ಲಿ ಮಾತ್ರ ಕೇವಲ 49 ಅಂಕ ಬಂದಿದೆ.
ಆಂತರಿಕ 20 ಅಂಕ ಹೊರೆತುಪಡಿಸಿದರೆ 80ಕ್ಕೆ ಕೇವಲ 29 ಅಂತಾ ನಮೂದಾಗಿದ್ದರಿಂದ ಆಘಾತಕ್ಕೆ ಒಳಗಾದ ಅಮೃತಾ ನಕಲು ಪ್ರತಿಯನ್ನು ತರಿಸಿದ್ದಾರೆ. ನಕಲು ಪ್ರತಿಯಲ್ಲಿ 80ಕ್ಕೆ 80 ಅಂಕ ನಮೂದಾಗಿರುವುದು ಕಂಡುಬಂದಿದೆ. ಒಟ್ಟಾರೆ 506 ಇದ್ದ ಅಂಕಗಳು 557 ಅಂಕಗಳಾಗಿವೆ.
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಜೂನ್ 2022 ವೇಳಾಪಟ್ಟಿ
ಬಡ ಕೂಲಿ ಕಾರ್ಮಿಕನ ಮಗಳಾಗಿರುವ ಅಮೃತಾ ಎಸ್ಎಸ್ಎಲ್ಸಿ ಮಂಡಳಿ ಮಾಡಿರುವ ಎಡವಟ್ಟಿನಿಂದ ಹಲಗಲಿ ಹಾಗೂ ಬಾಗಲಕೋಟೆ ವಸತಿ ಕಾಲೇಜುಗಳಲ್ಲಿ ಪಿಯು ಪ್ರವೇಶಕ್ಕೆ ಕಡಿಮೆ ಅಂಕ ಎಂದು ಪ್ರವೇಶಾತಿಯನ್ನು ನಿರಾಕರಿಸಿವೆ. ಶೇ. 89.12 ರಷ್ಟು ಅಂಕ ಬಂದಿದ್ದರೂ ಪ್ರವೇಶ ಸಿಗದೇ ಅನ್ಯಾಯ ಪ್ರತಿಭಾವಂತಾ ವಿದ್ಯಾರ್ಥಿನಿಗೆ ಅನ್ಯಾಯವಾಗಿದೆ.
ತಾವೂ ವಿದ್ಯಾವಂತರಲ್ಲ, ತಮ್ಮ ಮಗಳಿಗಾದರೂ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು ಎಂಬ ಆಸೆಯಲ್ಲಿರುವ ಅಮೃತ ಪೋಷಕರು ತಮ್ಮ ಮಗಳಿಗೆ ಬಾಗಲಕೋಟೆಯ ವಸತಿ ಸಹಿತ ಕಾಲೇಜಿನಲ್ಲಿ ಪ್ರವೇಶ ಕೊಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ತಿದ್ದುಪಡಿಯಾಗದ ಅಂಕಪಟ್ಟಿ; ಈಗಾಗಲೇ ಉತ್ತರ ಪ್ರತಿಯ ನಕಲು ಪ್ರತಿಯನ್ನು ಶಾಲೆಯ ಮೂಲಕ ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿಗೆ ಕಳೆದ ವಾರವೇ ಆನ್ಲೈನ್ ಮೂಲಕ ಪಿಡಿಎಫ್ ಫೈಲ್ ಕಳುಹಿಸಿಕೊಡಲಾಗಿದೆ. ಆದರೂ ಇಲ್ಲಿಯವರೆಗೆ ಅಂಕಪಟ್ಟಿ ತಿದ್ದುಪಡಿಯಾಗಿಲ್ಲ ಎಂದು ಅಮೃತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.