ಬಾದಾಮಿ : 3 ದಿನ ವಾಸ್ತವ್ಯ ಹೂಡಲಿದ್ದಾರೆ ಸಿದ್ದರಾಮಯ್ಯ
Recommended Video
ಬಾಗಲಕೋಟೆ, ಆಗಸ್ಟ್ 16 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕ್ಷೇತ್ರ ಬಾದಾಮಿಗೆ ಭೇಟಿ ನೀಡುವುದು ಯಾವಾಗ?. ಈ ವಿಚಾರದ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಇದೀಗ ಸಿದ್ದರಾಮಯ್ಯ ಪ್ರವಾಸದ ದಿನಾಂಕ ಅಂತಿಮವಾಗಿದೆ.
ಆಗಸ್ಟ್ 19ರಂದು ಸಿದ್ದರಾಮಯ್ಯ ಬಾದಾಮಿಗೆ ಭೇಟಿ ನೀಡಲಿದ್ದಾರೆ. ಮೂರು ದಿನಗಳ ಕಾಲ ಅವರು ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಲಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಸಿದ್ದರಾಮಯ್ಯ
ಭೀಕರ ಪ್ರವಾಹದಿಂದಾಗಿ ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ ಸಾಕಷ್ಟು ಹಾನಿಯಾಗಿತ್ತು. ಆದರೆ, ಸಿದ್ದರಾಮಯ್ಯಗೆ ಬಲಗಣ್ಣಿನ ಶಸ್ತ್ರ ಚಿಕಿತ್ಸೆ ಆದ ಕಾರಣ ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದರು. ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯರನ್ನು ಕ್ಷೇತ್ರಕ್ಕೆ ಕಳಿಸಿದ್ದರು.
ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ: ದೇವರಲ್ಲಿ ದೇವೇಗೌಡ ಪ್ರಾರ್ಥನೆ
ಈಗ ವೈದ್ಯರ ಸಲಹೆ ಪಡೆದು ಬಾದಾಮಿಗೆ ಹೊರಡಲಿದ್ದಾರೆ. ಆಗಸ್ಟ್ 19, 20 ಮತ್ತು 21ರಂದು ಮೂರು ದಿನಗಳ ಕಾಲ ಸಿದ್ದರಾಮಯ್ಯ ಬಾದಾಮಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಮೂಲಕ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಧೈರ್ಯ ತುಂಬಲಿದ್ದಾರೆ.
ಏಕಚಕ್ರಾಧಿಪತಿ ಯಡಿಯೂರಪ್ಪಗೆ ಸಿದ್ದರಾಮಯ್ಯ ಪ್ರಶ್ನೆ!
194 ಗ್ರಾಮಗಳಲ್ಲಿ ಪ್ರವಾಹ
ಬಾಗಲಕೋಟೆ ಜಿಲ್ಲೆಯ ಒಟ್ಟು 194 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. 31,122 ಕುಟುಂಬಗಳ 1,45,412 ಜನರು ಹಾಗೂ 70,445 ಜಾನುವಾರುಗಳು ಸಂಕಷ್ಟಕ್ಕೆ ಈಡಾಗಿದ್ದವು. ಸಂತ್ರಸ್ಥರಿಗಾಗಿ ಒಟ್ಟು 228 ಪರಿಹಾರ ಕೇಂದ್ರಗಳಲ್ಲಿ ಊಟೋಪಚಾರ, ವೈದ್ಯಕೀಯ ಸೇವೆ ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಪ್ರವಾಹದಿಂದ 3 ಜನ ಮೃತಪಟ್ಟಿದ್ದು, 97 ಜಾನುವಾರುಗಳು ಸಹ ಮೃತಪಟ್ಟಿವೆ.
ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು
ಬಾದಾಮಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. "ಬಾದಾಮಿಯ ಶಾಸಕನಾಗಿರುವುದರಿಂದ ಕ್ಷೇತ್ರದ ಜನರು ನನ್ನ ಉಪಸ್ಥಿತಿ ಬಯಸುವುದು ಸಾಮಾನ್ಯ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನವೇ ಇಂತಹ ದುರ್ಘಟನೆ ಸಂಭವಿಸಿದ್ದರೆ ಖಂಡಿತಾ ಶಸ್ತ್ರಚಿಕಿತ್ಸೆಯನ್ನು ಸ್ವಲ್ಪ ದಿನಗಳ ಕಾಲ ಮುಂದೂಡುತ್ತಿದ್ದೆ" ಎಂದು ಹೇಳಿದ್ದರು.
ಪ್ರತಿಪಕ್ಷ ನಾಯಕನ ಬಗ್ಗೆ ಟೀಕೆ
ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಶಾಸಕರು ಮಾತ್ರವಲ್ಲ ಪ್ರತಿಪಕ್ಷದ ನಾಯಕರು ಹೌದು. ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿರುವಾಗ ಅವರು ಎಲ್ಲಿಗೂ ಹೋಗದೆ ಕುಳಿತಿರುವುದು ವಿವಾದಕ್ಕೆ ಕಾರಣವಾಗಿತ್ತು. ಪ್ರತಿಪಕ್ಷ ನಾಯಕನ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಈಗ ಸಿದ್ದರಾಮಯ್ಯ ಬಾದಾಮಿಗೆ ಹೋಗುವ ದಿನಾಂಕ ಪ್ರಕಟಿಸಿದ್ದಾರೆ.
ಜನರ ನಡುವೆ ಇರುವ ನಾಯಕ
"ನಾನು ಆಡಳಿತ ಪಕ್ಷದಲ್ಲಿಯೇ ಇರಲಿ, ವಿರೋಧ ಪಕ್ಷದಲ್ಲಿಯೇ ಇರಲಿ ಜನರ ಸಂಕಷ್ಟಕ್ಕೆ ನೆರವಾಗುವುದು ಆದ್ಯ ಕರ್ತವ್ಯವೆಂದು ನಂಬಿ ರಾಜಕಾರಣ ಮಾಡುತ್ತ ಬಂದವನು. ಈ ಕಾರಣಕ್ಕಾಗಿಯೇ ನನ್ನ ಬದಲು ನನ್ನ ಮಗ, ವರುಣಾ ಕ್ಷೇತ್ರದ ಶಾಸಕರಾದ ಯತೀಂದ್ರ ಅವರನ್ನು ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಕಳುಹಿಸಿದ್ದೇನೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.