ಅಪ್ಪನಿಗೆ ಅನಾರೋಗ್ಯ ಬಾದಾಮಿ ನೆರವಿಗೆ ಯತೀಂದ್ರ ಸಿದ್ದರಾಮಯ್ಯ ಹಾಜರ್
ಬೆಂಗಳೂರು, ಆಗಸ್ಟ್ 09: ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯ ಅವರು, ಪ್ರವಾಹದಿಂದ ನಲುಗಿರುವ ತಮ್ಮ ಕ್ಷೇತ್ರವಾದ ಬಾದಾಮಿಗೆ ತೆರಳಲು ಆಗಿಲ್ಲ, ಹಾಗಾಗಿ ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಬಾದಾಮಿಗೆ ಕಳುಹಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಸಿದ್ದರಾಮಯ್ಯ ಅವರು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ವೈದ್ಯರು ಅವರಿಗೆ ಕಡ್ಡಾಯ ವಿಶ್ರಾಂತಿ ಸೂಚಿಸಿದ್ದಾರೆ. ಹಾಗಾಗಿ ಅವರು ಬಾದಾಮಿಗೆ ಹೋಗಲಾಗುತ್ತಿಲ್ಲ. ಅದಕ್ಕೆಂದೇ ಬಾದಾಮಿಯಲ್ಲಿ ಜನರ ಕಷ್ಟ ಕೇಳಲು, ನೆರೆ ಸಂತ್ರಸ್ತರಿಗೆ ಸಹಾಯ ಮಾಡಲೆಂದು ತಮ್ಮ ಮಗ, ವರುಣಾ ಕ್ಷೇತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕಳುಹಿಸಿದ್ದಾರೆ.
ಮಳೆ, ಪ್ರವಾಹದಲ್ಲಿ ಜನ ತತ್ತರ, ಇತ್ತ ಜನಪ್ರತಿನಿಧಿಗಳಿಗೆ ಜ್ವರ!
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, ಉತ್ತರ ಕರ್ನಾಟಕ ಭಾಗ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ, ಅಲ್ಲಿ ಹೋಗಿ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಬೇಕೆಂದು ಮನಸ್ಸು ತುಡಿಯುತ್ತಿದ್ದರೂ, ಶಸ್ತ್ರ ಚಿಕಿತ್ಸೆ ಆಗಿರುವುದರಿಂದ ನನ್ನ ದುರಾದೃಷ್ಟಕ್ಕೆ ಅದು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
'ನಾನು ಆಡಳಿತ ಪಕ್ಷದಲ್ಲಿಯೇ ಇರಲಿ, ವಿರೋಧ ಪಕ್ಷದಲ್ಲಿಯೇ ಇರಲಿ ಜನರ ಸಂಕಷ್ಟಕ್ಕೆ ನೆರವಾಗುವುದು ಆದ್ಯ ಕರ್ತವ್ಯವೆಂದು ನಂಬಿ ರಾಜಕಾರಣ ಮಾಡುತ್ತ ಬಂದವನು. ಈ ಕಾರಣಕ್ಕಾಗಿಯೇ ನನ್ನ ಬದಲು ನನ್ನ ಮಗ, ವರುಣಾ ಕ್ಷೇತ್ರದ ಶಾಸಕರಾದ ಯತೀಂದ್ರ ಅವರನ್ನು ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಕಳುಹಿಸಿದ್ದೇನೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಜನರೊಂದಿಗೆ ನೆರೆ ವೀಕ್ಷಣೆ ಮಾಡಿದ್ದಾರೆ. ಗಂಜಿ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ಅಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದಾರೆ. ಈ ಎಲ್ಲ ಚಿತ್ರಗಳನ್ನೂ ಸಿದ್ದರಾಮಯ್ಯ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.