ಜನರ ಕಷ್ಟಕ್ಕೆ ಸ್ಪಂದಿಸುವುದು ಜನಸ್ಪಂದನ, ಕಾರ್ಯಕ್ರಮ ಮಾಡುವುದಲ್ಲ: ಸಿದ್ದರಾಮಯ್ಯ ಟೀಕೆ
ಬಾಗಲಕೋಟೆ, ಸೆಪ್ಟೆಂಬರ್ 10: ಜನಸ್ಪಂದನ ಅಂದರೆ ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು, ರಾಜ್ಯ ಸರಕಾರ ಜನರ ಕಷ್ಟ ಸುಖಗಳಿಗೆ ನೆರವಾಗುತ್ತಿದ್ದಾರಾ? ಮಳೆ ಬಂದು ಹಲವು ಕಡೆ ಪ್ರವಾಹ ಉಂಟಾಗಿದೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳು ಹಾಳಾಗಿವೆ, ಮನೆಗಳು ಕುಸಿದಿವೆ, ರೈತರ ಜಮೀನು ಹಾಳಾಗಿವೆ ಅವರಿಗೆ ಪರಿಹಾರ ಕೊಡದೇ ಯಾವ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲಿ ಪ್ರವಾಹದ ಸಮೀಕ್ಷೆಗೆ ಆಗಮಿಸಿದ್ದ ಮಾಜಿ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. "ಜನಸ್ಪಂದನ ಅಂದರೆ ಏನು? ಜನರ ಕಷ್ಟ ಸುಖಗಳಿಗೆ ಆಗೋದು ಈ ಸರಕಾರದಿಂದ ಆಗಿದೆಯಾ? ಮಳೆ ಪ್ರವಾಹ ಬಂದು ಬೆಂಗಳೂರು ಸೇರಿ ಎಲ್ಲಾ ಕಡೆ ಹಾಳಾಗಿದೆ. ಇದಕ್ಕೆಲ್ಲಾ ಇಷ್ಟು ದಿನವಾದರೂ ಪರಿಹಾರ ಕೊಟ್ಟಿದ್ದಾರಾ? ಬೆಳೆ ಕಳೆದುಕೊಂಡ ರೈತರಿಗೆ ಬೆಳೆ ಪರಿಹಾರ ಕೊಟ್ಟಿದಾರಾ?, ಮನೆ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿದ್ದಾರೆಯೇ?. ಹಲವಾರು ರಸ್ತೆ ಹಾಳಾಗಿವೆ, ಅವುಗಳನ್ನು ಸರಿ ಮಾಡಿದ್ದಾರಾ? ಇಷ್ಟೆಲ್ಲಾ ಇರುವಾಗ ಇದು ಜನಸ್ಪಂದನ ಹೇಗಾಗುತ್ತದೆ? ಜನಸ್ಪಂದನ ಅಂದರೆ ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಎಂದು ಕಿಡಿ ಕಾರಿದರು.
ಬಿಜೆಪಿಯದ್ದು 'ಜನಸ್ಪಂದನ' ಅಲ್ಲ 'ಜನ ಮರ್ದನ' ಎಂದ ಸಿದ್ದರಾಮಯ್ಯ
ಕಾಂಗ್ರೆಸ್ ಸರಕಾರ ಹಗರಣ ಬಯಲು ಮಾಡ್ತಿವಿ ಎಂಬ ಸಿಟಿ ರವಿ ಸೇರಿದಂತೆ ಬಿಜೆಪಿಗರ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾಕೆ ಹೀಗೆ ಹೇಳುತ್ತಿದ್ದಾರೆಂದರೆ ನಾವು 40% ಸರಕಾರ ಎಂದೂ ಹೇಳೋಕೆ ಶುರು ಮಾಡಿದ್ವಲ್ಲಾ ಅದಕ್ಕೆ ಇದೆಲ್ಲಾ ಶುರುಮಾಡಿದ್ದಾರೆ. ಇವರು ಎಷ್ಟು ದಿನ ಆಯ್ತು ಅಧಿಕಾರಕ್ಕೆ ಬಂದು? ನಾವೇನು ತನಿಖೆ ಮಾಡಬೇಡಿ ಎಂದು ಇವರ ಕೈ ಹಿಡಿಕೊಂಡಿದ್ವಾ? ಯಾರಿಗೆ ಬ್ಲ್ಯಾಕ್ ಮೇಲ್ ಮಾಡುತ್ತೀರಾ? ಎಂದು ತಿರುಗೇಟು ನೀಡಿದರು.
ಅನ್ನಭಾಗ್ಯ ಅಕ್ಕಿ ಮೋದಿಯದ್ದು ಚೀಲ ಮಾತ್ರ ಕಾಂಗ್ರೆಸ್ ನವರದ್ದು ಎಂಬ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಆಹಾರ ಭದ್ರತಾ ಕಾಯ್ದೆ ಮಾಡಿದ್ದು ಮನಮೋಹನ್ ಸಿಂಗ್ ಸರಕಾರ ಇದ್ದಾಗ. ಮೋದಿ ಬಂದಿದ್ದಿರಾ ಫುಡ್ ಸೆಕ್ಯುರಿಟಿ ಆ್ಯಕ್ಟ್ ಮಾಡಿದಾಗ ಎಂದು ಪ್ರಶ್ನಿಸಿದ ಅವರು, 3 ರೂ.ಗೆ ಅಕ್ಕಿ ಕೊಡುವುದಕ್ಕೆ ತೀರ್ಮಾನ ಮಾಡಿದ್ದು ಕಾಂಗ್ರೆಸ್ ನವರು. ಗುಜರಾತ್ನಲ್ಲಿ ಇದೆಯಾ ಮಿಸ್ಟರ್ ಬೊಮ್ಮಾಯಿ, ನಮ್ಮದು ಚೀಲ ಆದರೆ ಗುಜರಾತಿನಲ್ಲಿ ಏಕೆ ಕೊಡುತ್ತಿಲ್ಲ. ಮಧ್ಯಪ್ರದೇಶದಲ್ಲಿ ಏಕೆ ಕೊಡುತ್ತಿಲ್ಲ, ಬಿಜೆಪಿ ಇರುವ ಬೇರೆ ರಾಜ್ಯದಲ್ಲಿ ಏಕೆ ಕೊಡುತ್ತಿಲ್ಲ? ಮೊದಲು ಅದನ್ನು ಹೇಳಲಿ ನೋಡೋಣ," ಎಂದು ಸಿಎಂ ಬೊಮ್ಮಾಯಿಯನ್ನು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಮಾತ್ರ ಏಳು ಕೆಜಿ ಕೊಡುವ ಯೋಜನೆ ನಾನು ಮಾಡಿದ್ದು, ಇದನ್ನು ಹೇಳಿ ಟೀಕೆ ಮಾಡಿದರೆ, ನಾವು ಹಿಂದೆ ಜಾರಿಗೆ ತಂದಂತಹ ಕಾರ್ಯಕ್ರಮವನ್ನು ಒಂದೊಂದಾಗಿ ಬಂದ್ ಮಾಡುತ್ತಿದ್ದಾರೆ. ಇಂದಿರಾ ಕ್ಯಾಂಟಿನ್ ಇದೆಯಾ?, ವಿದ್ಯಾಸಿರಿ ಯೊಜನೆ ಜಾರಿಯಲ್ಲಿದೆಯೇ? ಸಾಲ ಮನ್ನಾ ಹಾಗಿದೆಯಾ? ಕೃಷಿ ಭಾಗ್ಯ ಇದೆಯಾ? ಎಲ್ಲವನ್ನೂ ಒಂದೊಂದಾಗಿ ತೆಗೆದು ಹಾಕಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಪ್ರತಿ ತಿಂಗಳು ಮೋದಿ ಕರೆಸುವ ಯೋಜನೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿ, ಮೋದಿ ಕರೆಸಲಿ ಪಾಪ. ಮೋದಿ ಬಂದಷ್ಟು ನಮಗೆ ಒಳ್ಳೆಯದು, ಅನುಕೂಲ ಆಗುತ್ತದೆ, ಮೋದಿ ಬಂದರೆ ಜನರೆಲ್ಲಾ ಅವರ ವಿರೋಧಿಗಳಾಗುತ್ತಾರೆ ಎಂದರು.