ಬಾಗಲಕೋಟೆ: 550 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟಿಸಿದ ಸಿಎಂ
ಬಾಗಲಕೋಟೆ, ಡಿಸೆಂಬರ್ 19: ನವಕರ್ನಾಟಕ ನಿರ್ಮಾಣ ಯಾತ್ರೆ ಕೈಗೊಂಡಿರುವ ಸಿದ್ದರಾಮಯ್ಯ ಅವರು ಇಂದು ಬಾಗಲಕೋಟೆಯಲ್ಲಿ 550 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಗಳು ಬಿಜೆಪಿ ಅವರ ಪರಿವರ್ತನಾ ಯಾತ್ರೆಯನ್ನು ಆತ್ಮ ಪರಿವರ್ತನಾ ರ್ಯಾಲಿ ಎಂದು ವ್ಯಂಗ್ಯ ಮಾಡಿದರು.
ಕೇಂದ್ರದ ಮೋದಿ ಸರ್ಕಾರವನ್ನು ಟೀಕಿಸಿದ ಅವರು 'ಸಬ್ ಕಾ ಸಾತ್ ಸಬ್ ಕಾ ವಿಕಾಸ್' ಎನ್ನುವ ಮೋದಿ ಮತ್ತು ಅಮಿತ್ ಷಾ ಅವರು ಮುಸ್ಲೀಮರನ್ನು ದೂರವಿಟ್ಟಿದ್ದಾರೆ. ಅವರ ಪಕ್ಷದವರು ರಾಜ್ಯದಲ್ಲಿ ಟಿಪ್ಪು ಜಯಂತಿಗೆ ವಿರೋಧ ಮಾಡುತ್ತಿದ್ದಾರೆ ಎಂದರು.
ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ ಎಂದು ಹೇಳಿದ ಸಿದ್ದರಾಮಯ್ಯ ಅವರು ಅವುಗಳ ಪಟ್ಟಿಯನ್ನು ನೀಡಿದರು.
17238 ರೈತರು ಫಲಾನುಭವಿಗಳು
ಬಾಗಲಕೋಟೆ ಜಿಲ್ಲೆಯಲ್ಲಿ 11221 ಕೃಷಿ ಹೊಂಡಗಳ ನಿರ್ಮಾಣ, 21278 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ದೊರೆತಿದೆ. 9 ಹೋಬಳಿಗಳಲ್ಲಿ ಬಾಡಿಗೆ ಆಧಾರದ ಮೇಲೆ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲಾಗಿದ್ದು,17238 ರೈತರು ಫಲಾನುಭವಿಗಳಾಗಿದ್ದಾರೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು. ಜಿಲ್ಲೆಯ ಕೃಷಿ ಬೆಳೆಗಳ ಆನ್ಲೈನ್ ಹರಾಜು ಪದ್ಧತಿಗೆ ಕೇಂದ್ರ ಸರ್ಕಾರದಿಂದ ಶ್ಲಾಘನೆ. ಮಹಿಳಾ ಸಬಲೀಕರಣಕ್ಕಾಗಿ 175 ಮಹಿಳೆಯರಿಗೆ ಹೈನುಗಾರಿಕೆ ಮಾಡಲು ರೂ.54.31 ಲಕ್ಷ ಪ್ರೋತ್ಸಾಹಧನ ವಿತರಿಸಲಾಗಿದೆ ಎಂದರು.
16 ಪ್ರಥಮ ದರ್ಜೆ ಕಾಲೇಜು ನಿರ್ಮಾಣ
ಬಾಗಲಕೋಟೆ ಜಿಲ್ಲೆಯ 1,71,625 ರೈತರ 80900.00 ಲಕ್ಷ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ. ಕ್ಷೀರಭಾಗ್ಯ ಅಡಿಯಲ್ಲಿ 13.07 ಲಕ್ಷ ಶಾಲಾ ಮಕ್ಕಳಿಗೆ ಪ್ರಯೋಜನವಾಗಿದೆ. ಉತ್ತಮ ಆರೋಗ್ಯ ಸೇವೆಯಿಂದ ಶಿಶು ಮರಣ ಪ್ರಮಾಣ 11.85% ರಿಂದ 6.5%ಕ್ಕೆ ಇಳಿಕೆಯಾಗಿದೆ. ಜಿಲ್ಲೆಯಾದ್ಯಂತ ಒಟ್ಟು 16 ಪ್ರಥಮ ದರ್ಜೆ ಕಾಲೇಜುಗಳು ನಿರ್ಮಾಣವಾಗಿವೆ ಎಂದರು.
ಅಂಗವಿಕರಿಗೆ ಸಹಾಯಹಸ್ತ
ಮುಖ್ಯಮಂತ್ರಿ ಅವರು ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಚೆಕ್ ವಿತರಣೆ ನೆರವೇರಿಸಿದರು. ಸಚಿವೆ ಉಮಾಶ್ರೀ ಅವರು ಜೊತೆಗಿದ್ದರು.
60,000 ಎಕರೆ ಪ್ರದೇಶಕ್ಕೆ ಹನಿ ನೀರಾವರಿ
296691 ವಿದ್ಯಾರ್ಥಿಗಳಿಗೆ 7370 ಲಕ್ಷ ರೂಪಾಯಿ ವಿದ್ಯಾರ್ಥಿವೇತನ, "ವಿದ್ಯಾಸಿರಿ"ಯಡಿ 23799 ವಿದ್ಯಾರ್ಥಿಗಳಿಗೆ 2014 ಲಕ್ಷ ರೂಪಾಯಿ ಧನ ಸಹಾಯ ದೊರೆತಿದೆ. 767.08 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ,475.99 ಕಿಮೀ ರಾಜ್ಯ ಹೆದ್ದಾರಿ ಕೆಲಸ ಪೂರ್ಣಗೊಂಡಿದೆ. ರಾಮಥಾಳ (ಮರೋಳ) ಯೋಜನೆಯಡಿ 60,000 ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಎಂದು ಮಾಹಿತಿ ನೀಡಿದರು.
ಜಿಲ್ಲೆಯ 9796 ಜನರಿಗೆ ಉದ್ಯೋಗ
ಹೊಸ ಕೈಗಾರಿಕಾ ನೀತಿಯಡಿ ಬಾಗಲಕೋಟೆ ಜಿಲ್ಲೆಯ 9796 ಜನರಿಗೆ ಉದ್ಯೋಗ ದೊರೆತಿದೆ. ಕಂದಾಯ ಗ್ರಾಮಗಳಾದ 23 ಲಂಬಾಣಿ ತಾಂಡಗಳು. ಪೋಡಿ ವಿಲೇವಾರಿಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದ ಬಾಗಲಕೋಟೆ. ನಿರಂತರ ಜ್ಯೋತಿ 619 ಗ್ರಾಮಗಳ ವಿದ್ಯುತ್ ಪೂರೈಕೆಗೆ 82 ಪೆಡರ್ ನಿರ್ಮಾಣ ಮಾಡಿದ್ದೇವೆ ಎಂದರು.