ಏನ್ ಕೆಲ್ಸ ಮಾಡಿದ್ದಾರೆ ಅಂತ ಬಿಜೆಪಿಗೆ ವೋಟ್ ಹಾಕ್ತೀರಾ? ಸಿದ್ದರಾಮಯ್ಯ
ಬಾಗಲಕೋಟೆ, ಜೂನ್ 27: ಕೆಲಸ ನಾವು ಮಾಡುತ್ತೀವಿ, ಆದರೆ ನೀವು ಬಿಜೆಪಿಗೆ ವೋಟ್ ಹಾಕ್ತೀರಿ. ಏಕೆ ಎಂದು ಗೊತ್ತಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಯಲ್ಲಿ ಕಿಡಿಕಾರಿದರು.
ಬಾದಾಮಿ ತಾಲ್ಲೂಕಿನ ಆಲೂರ ಎಸ್ಕೆ ಗ್ರಾಮದಲ್ಲಿನ ಗ್ರಾಮ ಪಂಚಾಯಿತಿ ಕಟ್ಟಡದ ಗುದ್ದಲಿಪೂಜೆ ಸಮಾರಂಭದ ವೇಳೆ ಗುರುವಾರ ಅವರು ಮಾತನಾಡಿದರು.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರ ರಾಯಚೂರಿನಲ್ಲಿ ಪ್ರತಿಭಟನಾಕಾರರ ವಿರುದ್ಧ ಮೋದಿಗೆ ವೋಟ್ ಹಾಕಿ ಸಮಸ್ಯೆಗೆ ನನ್ನ ಬಳಿ ಪರಿಹಾರ ಕೇಳ್ತೀತಿ ಎಂದು ಕಿಡಿಕಾರಿದ್ದರು. ಈಗ ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ಹಾಕಿದ್ದಕ್ಕೆ ಬಾದಾಮಿ ಕ್ಷೇತ್ರದ ಜನರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ವೋಟು ಮೋದಿಗೆ ಹಾಕ್ತೀರಿ, ಸಮಸ್ಯೆ ನಾನು ಬಗೆಹರಿಸಬೇಕಾ?: ಪ್ರತಿಭಟನಾಕಾರರ ವಿರುದ್ಧ ಸಿಎಂ ಕಿಡಿ
ಇದಕ್ಕೂ ಮೊದಲು ಬಾದಾಮಿಗೆ ತೆರಳುತ್ತಿದ್ದ ಸಿದ್ದರಾಮಯ್ಯ ಅವರ ಕಾರ್ಗೆ ಬೀರನೂರು ಕ್ರಾಸ್ ಬಳಿ ಗ್ರಾಮಸ್ಥರು ಮುತ್ತಿಗೆ ಹಾಕಿದರು. ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿಗೆ ಮುಗಿಬಿದ್ದರು. ಕಾರಿನಿಂದ ಕೆಳಗಿಳಿದ ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು.
ಅಭಿವೃದ್ಧಿ ಮಾಡಿದವರಿಗೆ ವೋಟ್ ಹಾಕೊಲ್ಲ
ನಾವು ಇಷ್ಟೆಲ್ಲಾ ಅಭಿವೃದ್ಧಿಗಳನ್ನು ಮಾಡಿದ್ದೇವೆ. ಅನೇಕ ಯೋಜನೆ, ಅನುದಾನಗಳನ್ನು ನೀಡಿದ್ದೇವೆ. ಆದರೆ, ಅಭಿವೃದ್ಧಿ ಮಾಡಿದವರಿಗೆ ನೀವು ವೋಟ್ ಹಾಕೊಲ್ಲ. ಏನೂ ಮಾಡದ ಬಿಜೆಪಿಯವರಿಗೆ ವೋಟ್ ಹಾಕ್ತೀರಿ. ನೀವೇಕೆ ಹೀಗೆ ಮಾಡ್ತೀರಿ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಯಡಿಯೂರಪ್ಪ ಹೇಳಿದ್ದು ಯಾವುದೂ ನಿಜವಾಗಿಲ್ಲ: ಸಿದ್ದರಾಮಯ್ಯ
ಯಾರು ನೀನು? ಬಿಜೆಪಿಯವ್ನಾ?
ಸಿದ್ದರಾಮಯ್ಯ ಅವರ ಭಾಷಣ ವೇಳೆ ವ್ಯಕ್ತಿಯೊಬ್ಬರು ಮಾತನಾಡಲು ಮುಂದಾದರು. ಆಗ 'ಏಯ್ ಯಾರಪ್ಪ ನೀನು? ಬಿಜೆಪಿಯವ್ನಾ? ಸುಮ್ನೆ ಇರಪ್ಪ' ಎಂದು ರೇಗಿದರು.
ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 9 ಸಾವಿರ ಲೀಡ್ ದೊರಕಿತ್ತು. ಇದು ಅವರಿಗೆ ಆಘಾತ ಉಂಟುಮಾಡಿದೆ. ಅವರೇನು ಕೆಲಸ ಮಾಡಿದ್ದಾರೆಂದು ಅವರಿಗೆ ವೋಟ್ ಹಾಕ್ತೀರಿ? ಎಂದು ಜನರನ್ನು ಪ್ರಶ್ನಿಸಿದರು.
ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಲು ನಕಾರ
ಇದಕ್ಕೂ ಮೊದಲು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೋದಿ ಅವರಿಗೆ ಮತ ಹಾಕುತ್ತೀರ ಎಂಬ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂದು ತಿಳಿದಿಲ್ಲ. ಗೊತ್ತಿಲ್ಲದೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ತಮ್ಮ ಹೇಳಿಕೆಗೆ ಅವರೇ ಕ್ಷಮೆಯಾಚಿಸಿದ್ದಾರೆ ಎಂದರು.
ನಮಗೆ ದಿವ್ಯಜ್ಞಾನವಿಲ್ಲ
ಮಧ್ಯಂತರ ಚುನಾವಣೆ ನಡೆಸುವುದು ಸೂಕ್ತ ಎಂಬ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಅವರ ಹೇಳಿಕೆಗೆ ಟಾಂಗ್ ನೀಡಿದ ಅವರು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಪ್ರಶ್ನೆಯೇ ಇಲ್ಲ. ಚುನಾವಣೆ ನಡೆಯಲಿದೆ ಎಂದು ಹೇಳುವವರಿಗೆ ದಿವ್ಯಜ್ಞಾನ ಇರಬಹುದು. ಆದರೆ, ನಮಗೆ ಆ ಜ್ಞಾನವಿಲ್ಲ ಎಂದು ಹೇಳಿದರು.
ಮೈತ್ರಿ ಮಾಡಿಕೊಂಡಿದ್ದೇ ಕಾರಣವಲ್ಲ
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣವಲ್ಲ. ಸೋಲಿಗೆ ಮೈತ್ರಿಯೂ ಒಂದು ಕಾರಣ ಎಂದು ಕಾಂಗ್ರೆಸ್ನ ಕೆಲವು ನಾಯಕರು ಹೇಳಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ ಸೋಲಿನ ಪರಾಮರ್ಶೆಯಾಗಿದೆ. ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಬೇಕಾಗಿದೆ. ಹೀಗಾಗಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇವೆ ಎಂದು ತಿಳಿಸಿದರು.