ಬಾಗಲಕೋಟೆಯಲ್ಲಿ ರಾತ್ರಿ ಮತ್ತೆ ಮಳೆ; ನೀರು ಪಾಲಾದ ಬೆಳೆ
ಬಾಗಲಕೋಟೆ, ನವೆಂಬರ್ 7: ಮಳೆ ತಣ್ಣಗಾಯಿತು ಎಂದು ನಿಟ್ಟುಸಿರುಬಿಡುವಷ್ಟರಲ್ಲಿ ಮತ್ತೆ ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದ ಬೀದಿಗಳು ಜಲಾವೃತವಾಗಿವೆ. ರಸ್ತೆಗಳ ಮೇಲೆ ನೀರು ತುಂಬಿ ಹರಿಯುತ್ತಿವೆ.
ಚಾಲುಕ್ಯರ ಕಾಲದ ಅಗಸ್ತ್ಯ ತೀರ್ಥ ಹೊಂಡ ಸಂಪೂರ್ಣ ಭರ್ತಿಯಾಗಿ ಮೇಣಬಸದಿ ರಸ್ತೆ, ಉಳ್ಳಾಗಡ್ಡಿ ಗಲ್ಲಿ, ಕಳ್ಳಿಪೇಟೆ ರಸ್ತೆ ಬೀದಿಯಲ್ಲಿ ನೀರು ನದಿಯಂತೆ ಹರಿಯುತ್ತಿದ್ದು, ಸಂಚರಿಸಲು ಹರಸಾಹಸ ಪಡಬೇಕಾಗಿದೆ.
ಬುಲ್ಬುಲ್ ಪ್ರಭಾವ, ಕರ್ನಾಟಕದಲ್ಲಿ ಮತ್ತೆ ಮಳೆ ಆರಂಭ
ಮಳೆಯಿಂದಾಗಿ ಜಿಲ್ಲೆಯ ಉಗಲವಾಟ ಗ್ರಾಮದ ಶಿವಾನಂದ ಬಸರಿ ಎಂಬುವರ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಿನಜೋಳ ಆಹುತಿಯಾಗಿದೆ. ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಗೋವಿನ ಜೋಳ ಸಂಪೂರ್ಣ ನಾಶವಾಗಿದೆ. ಮಳೆ ನೀರಿನಿಂದ ಜಮೀನು ಕೆರೆಯಂತಾಗಿದ್ದು, ಗೋವಿನಜೋಳದ ತೆನೆಗಳು ನೀರಿನಲ್ಲಿ ತೇಲಾಡುತ್ತಿವೆ.
ದಾವಣಗೆರೆಯಲ್ಲೂ ಮಳೆ: ಕಳೆದ ರಾತ್ರಿ ದಾವಣಗೆರೆಯಲ್ಲೂ ಮಳೆ ಬಿರುಸಿನಿಂದ ಸುರಿದಿದೆ. ದಾವಣಗೆರೆ ತಾಲೂಕಿನ ಸುತ್ತಮುತ್ತಲಿರುವ ಕಡ್ಲೇಬಾಳು, ಅವರಗೊಳ್ಳ, ಬೇತೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಳೆದ ರಾತ್ರಿ ಸುಮಾರು ಒಂದು ಗಂಟೆಗಿಂತ ಹೆಚ್ಚುಕಾಲ ಬಿರುಗಾಳಿ ಬೀಸಿದ್ದರಿಂದ ನೂರಾರು ಎಕರೆ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.
ಬಂಗಾಳಕೊಲ್ಲಿಯಲ್ಲಿ ಬುಲ್ ಬುಲ್ ಸೈಕ್ಲೋನ್, ಎಲ್ಲೆಲ್ಲಿ ಮಳೆಯಾಗುತ್ತೆ?
ಇನ್ನೇನು 15 ದಿನಗಳಲ್ಲಿ ಭತ್ತ ಕಟಾವಿಗೆ ಬರುತ್ತಿದ್ದು, ಫಸಲು ಕೂಡ ಉತ್ತಮವಾಗಿದ್ದರಿಂದ ಈ ಬಾರಿ ಹೆಚ್ಚು ಲಾಭ ಗಳಿಸಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ನಿರಾಸೆಯುಂಟು ಮಾಡಿದೆ.