ರಾಜಕೀಯ ಅಸಹ್ಯ ಮೂಡಿಸಿದೆ : ಕ್ಷಮೆ ಕೇಳಿದ ಯುವ ಕಾಂಗ್ರೆಸ್ ಶಾಸಕ
ಬಾಗಲಕೋಟೆ, ಜುಲೈ 11 : 'ಕುದುರೆ ವ್ಯಾಪಾರದ ರಾಜಕೀಯ ನನ್ನಂತಹ ಹಲವಾರು ಯುವಕರಿಗೆ ಅಸಹ್ಯ ಮೂಡಿಸಿದೆ' ಎಂದು ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ ಹೇಳಿದ್ದಾರೆ. ಮತದಾರ ಬಾಂಧವರಲ್ಲಿ ಅವರು ಕ್ಷಮೆ ಯಾಚಿಸಿದ್ದಾರೆ.
2018ರ ನವೆಂಬರ್ನಲ್ಲಿ ನಡೆದ ಜಮಖಂಡಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆನಂದ್ ನ್ಯಾಮಗೌಡ ಅವರು ಆಯ್ಕೆಯಾಗಿದ್ದಾರೆ. ಸಿದ್ದು ನ್ಯಾಮಗೌಡ ಅವರ ಅಕಾಲಿಕ ಮರಣದಿಂದಾಗಿ ಎದುರಾದ ಉಪ ಚುನಾವಣೆಯಲ್ಲಿ ಅವರ ಪುತ್ರ ಆನಂದ್ ನ್ಯಾಮಗೌಡ ವಿಧಾನಸಭೆಗೆ ಆರಿಸಿ ಬಂದರು.
ಜಮಖಂಡಿ ಕ್ಷೇತ್ರದ ಶಾಸಕ ಆನಂದ್ ನ್ಯಾಮಗೌಡ ಪರಿಚಯ
ಪ್ರಸ್ತುತ ಕರ್ನಾಟಕದಲ್ಲಿ ರಾಜಕೀಯ ಹೈಡ್ರಾಮ ನಡೆಯುತ್ತಿದೆ. 16 ಶಾಸಕರು ರಾಜೀನಾಮೆ ನೀಡಿದ್ದಾರೆ. ಸರ್ಕಾರ ಉಳಿಯುವುದೇ, ಬಹುಮತ ಕಳೆದುಕೊಳ್ಳುವುದೇ? ಎಂಬ ಆತಂಕ ಎದುರಾಗಿದೆ. ಶಾಸಕರು ರೆಸಾರ್ಟ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ.
ಜಮಖಂಡಿಯಲ್ಲಿ ಕಾಂಗ್ರೆಸ್ಗೆ ಜಯಭೇರಿ: ಅಪ್ಪನನ್ನು ಮೀರಿಸಿದ ಮಗ
ಹಲವು ನಿರೀಕ್ಷೆಗಳೊಂದಿಗೆ ಮೊದಲ ಬಾರಿಗೆ ಆಯ್ಕೆಯಾಗಿ ಬಂದ ಆನಂದ್ ನ್ಯಾಮಗೌಡ ಅವರು ಫೇಸ್ಬುಕ್ನಲ್ಲಿ ಒಂದು ಪೋಸ್ಟ್ ಹಾಕಿದ್ದು, ಮತದಾರ ಬಾಂಧವರಲ್ಲಿ ಕ್ಷಮೆ ಕೇಳಿದ್ದಾರೆ....... ಶಾಸಕರು ಹೇಳಿದ್ದೇನು?.....
ಜಮಖಂಡಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಬಹಿರಂಗ!
ಮತದಾರ ಬಾಂಧವರಲ್ಲಿ ಕ್ಷಮೆಯಾಚಿಸುತ್ತಾ,
ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದರೂ ಸಹ ಬಹಳಷ್ಟು ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಂಡು ಹೊಸದೊಂದು ಅಭಿವೃದ್ಧಿಯ ಪರ್ವದ ಕೊಡುಗೆಯನ್ನು ನೀಡುವ ಭರವಸೆಯನ್ನು ಹೊಂದಿದ್ದೆ. ಆದರೆ ಕುದುರೆ ವ್ಯಾಪಾರದ ರಾಜಕೀಯ ನನ್ನಂತಹ ಹಲವಾರು ಯುವಕರಿಗೆ ಅಸಹ್ಯ ಮೂಡಿಸಿದೆ.
ಹಗಲೆನ್ನದೇ, ಇರುಳೆನ್ನದೇ, ದುಡಿಯುವ ಕಾರ್ಯಕರ್ತರಿಗೆ, ಜನತೆಗೆ ಈ ರೀತಿಯ ಪರಿಸ್ಥಿತಿ ತುಂಬಾ ನೋವು ತಂದಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದು ಪಕ್ಷ ಆಡಳಿತ ನಡೆಸಿದರೆ ಇನ್ನೊಂದು ವಿರೋಧ ಪಕ್ಷವಾಗಿ ಜನತೆಯ ಆಶೋತ್ತರಗಳನ್ನು ಎತ್ತಿಹಿಡಿಯುವ ಕೆಲಸಮಾಡಬೇಕು.
ಭಾರತೀಯ ರಾಜಕೀಯ ಇತಿಹಾಸದಲ್ಲೇ ಈ ರೀತಿಯ ಕುದುರೆ ವ್ಯಾಪಾರದ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಎಂದೂ ಕೂಡ ಕಂಡಿರಲಿಲ್ಲ, ಕೇಳಿರಲಿಲ್ಲ. ಇದು ನಾವು ನಮ್ಮನ್ನ, ಅದೆಷ್ಟೋ ಅಭಿಮಾನದಿಂದ, ಅಭಿಲಾಷೆಯಿಂದ ಆರಿಸಿಕಳಿಸಿದ ಮತದಾರರಿಗೆ ಮಾಡುತ್ತಿರುವ ಅವಮಾನವಾಗಿದೆ.
ಇಂದಿನ ಯುವ ಸಮೂಹ ತಾವಾಗಿಯೇ ಮೆಚ್ಚಿಕೊಂಡು ಜನತೆಯ ಸೇವೆಗೆ ಬರುವಂತಹ ವಾತಾವರಣ ನಿರ್ಮಾಣ ಮಾಡಬೇಕಿದೆ. ಜನರ ಆಶೀರ್ವಾದದಿಂದ ಆಯ್ಕೆಯಾದ ನಾವು ಜನಪರ ಕೆಲಸಗಳನ್ನು ಮಾಡುತ್ತಾ ಕ್ಷೇತ್ರವನ್ನು, ರಾಜ್ಯದ ಅಭಿವೃದ್ಧಿಯ ಪಥದಕಡೆಗೆ ಒಯ್ಯುವತ್ತ, ಗಮನಹರಿಸುವುದನ್ನ ಬಿಟ್ಟು ಸ್ವಂತ ಲಾಭಕ್ಕೆ, ಅಧಿಕಾರದ ಮೋಹಕ್ಕೆಬಿದ್ದು, ಅಮಾಯಕ ಜನತೆಗೆ ವಂಚಿಸುತ್ತಿರುವುದು ಯಾವ ನ್ಯಾಯ?.
ಗೆಲ್ಲುವಾಗ ಒಂದು, ಗೆದ್ದ ಮೇಲೊಂದು, ಎನ್ನುವ ದ್ವಿಮುಖ ಮುಖವಾಡ ಖಂಡನೀಯ. ನಾನೀಗ ಪಕ್ಷ ಬೇಧ ಮರೆತು ಎಲ್ಲಾ ಪ್ರಜಾಪ್ರತಿನಿಧಿಗಳಿಗೆ ಕೇಳುವುದಿಷ್ಟೇ. ಒಂದಿಷ್ಟು ಮನಸ್ಥಾಪ, ಭಿನ್ನಾಭಿಪ್ರಾಯದಿಂದ, ಪಕ್ಷದಿಂದ ಪಕ್ಷಕ್ಕೆ ಹಾರುವುದು, ರಾಜೀನಾಮೆ ನೀಡುವುದೊಂದೇ ಪರಿಹಾರವಲ್ಲ.
ಜನತೆಯ ಕಣ್ಣೀರು ವರೆಸಬೇಕಾದ ನಾಯಕರೇ, ಕಣ್ಣಿಗೆ ಮಣ್ಣೆರೆಚುವಂತೆ ವರ್ತಿಸುವುದು ಪ್ರಜಾತಂತ್ರ ವ್ಯವಸ್ಥೆಗೆ ತೋರುವ ಅಗೌರವವಾಗಿದೆ. ಕೈಮುಗಿದು ಮತ ಕೇಳುವ ನಾವು, ಜನತೆಯ ಒಪ್ಪಿಗೆ ಪಡೆಯದೇ, ಈ ರೀತಿ ವರ್ತಿಸುವುದು ಸಹ್ಯವಲ್ಲ.
ರಾಜಕೀಯದ ಮೌಲ್ಯ ಕುಸಿಯದಂತೆ ಜನತೆಯ ಪ್ರೀತಿಗೆ ಮೋಸಮಾಡದಂತೆ ಕಾರ್ಯನಿರ್ವಹಿಸುತ್ತಾ ಅಭಿವೃದ್ಧಿಯ ಕಡೆಗೆ ಗಮನಹರಿಸುವವರು ನಿಜವಾದ ನಾಯಕರು, ಪ್ರಜಾಪಾಲಕರು. ಇಂದಿನ ಅರಾಜಕತೆಗೆ ಧಿಕ್ಕಾರವಿರಲಿ.
ನಿಮ್ಮ,
ಆನಂದ
ಸಿದ್ದು
ನ್ಯಾಮಗೌಡ.
ಶಾಸಕರು
ಜಮಖಂಡಿ.