ಬಾಗಲಕೋಟೆ : 4ನೇ ಗೆಲುವಿನ ಉತ್ಸಾಹದೊಂದಿಗೆ ಗದ್ದಿಗೌಡರ್ ನಾಮಪತ್ರ
ಬಾಗಲಕೋಟೆ, ಏಪ್ರಿಲ್ 04 : ಬಾಗಲಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ ಲೋಕಸಭಾ ಚುನಾವಣೆಗೆ ಇಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಏಪ್ರಿಲ್ 23ರಂದು ಬಾಗಲಕೋಟೆ ಕ್ಷೇತ್ರದ ಚುನಾವಣೆ ನಡೆಯಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪರ್ವತಗೌಡ ಚಂದನಗೌಡ ಗದ್ದಿಗೌಡರ್ (ಪಿ.ಸಿ.ಗದ್ದಿಗೌಡರ್) ಅವರು ಗುರುವಾರ ನಾಮಪತ್ರವನ್ನು ಸಲ್ಲಿಸಿದರು. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮುಂತಾದ ನಾಯಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ ಪರಿಚಯ
ಏಪ್ರಿಲ್ 1ರಂದು ಪಿ.ಸಿ.ಗದ್ದಿಗೌಡರ್ ಅವರು ನಾಮಪತ್ರವನ್ನು ಸಲ್ಲಿಸಿದ್ದರು. ಗುರುವಾರ ಬಿಜೆಪಿ ನಾಯಕರ ಜೊತೆ ಬೃಹತ್ ಮೆರವಣಿಗೆ ನಡೆಸಿ ಮತ್ತೊಮ್ಮೆ ನಾಮಪತ್ರವನ್ನು ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿತ್ತು.
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿರುವ ಪಿ.ಸಿ.ಗದ್ದಿಗೌಡರ್ ಅವರು 4ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ನಿಂದ ವೀಣಾ ಕಾಶಪ್ಪನವರ್ ಅವರು ಗದ್ದಿಗೌಡರ್ ಎದುರಾಳಿಯಾಗಿದ್ದಾರೆ.
'ಕಳೆದ ಮೂರು ಬಾರಿ ಜನರು ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಸಂಸದನಾಗಿ ಜನರ ಭಾವನೆಗೆ ಸ್ಪಂದಿಸಿ, ಸೌಹಾರ್ದ ಭಾವನೆಯಿಂದ ಅಭಿವೃದ್ಧಿ ಕೆಲಸ ನಿರ್ವಹಣೆ ಮಾಡಿದ್ದೇನೆ' ಎಂದು ಪಿ.ಸಿ.ಗದ್ದಿಗೌಡರ್ ಹೇಳಿದರು.
2014ರ ಚುನಾವಣೆಯಲ್ಲಿ ಪಿ.ಸಿ.ಗದ್ದಿಗೌಡರ್ ಅವರು 5,71,548 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ನ ಅಜಯ್ ಕುಮಾರ್ ಅವರು 4,54,988 ಮಗಳನ್ನು ಪಡೆದಿದ್ದರು.