ಫೆ.13 ರಂದು ಪಂಚಮಸಾಲಿ ನೂತನ ಜಗದ್ಗುರುಗಳ ಪೀಠಾರೋಹಣ
ಬೆಂಗಳೂರು/ಬಾಗಲಕೋಟೆ, ಫೆಬ್ರವರಿ 10: ''ಕರ್ನಾಟಕದ ಪಂಚಮಸಾಲಿ ಸಮುದಾಯದ ಸಂಘಟನೆಯ ನೊಗಕ್ಕೆ ಹೆಗಲಾಗಲು ಜಮಖಂಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಫೆಬ್ರವರಿ 13 ರಂದು ಉದಯವಾಗಲಿದೆ. ಪಂಚಮಸಾಲಿಗಳ ಮೂಲ ಪೀಠದ ಪೀಠಾಧ್ಯಕ್ಷರಾದ ನಾವು ಹಾಗೂ ನಾಡಿನ ಶ್ರೇಷ್ಠ ಸಂತ-ಮಹಾಂತರ ದಿವ್ಯ ಸಾನಿಧ್ಯದಲ್ಲಿ ಐತಿಹಾಸಿಕ ಮೈಲುಗಲ್ಲು ಸ್ಥಾಪಿತವಾಗಲಿದೆ,'' ಎಂದು ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ಯೋಗ ಸಿಂಹಾಸನಾಧೀಶ್ವರ ಜಗದ್ಗುರುಗಳಾದ ವಚನಾನಂದ ಮಹಾಸ್ವಾಮೀಜಿಗಳು ಹೇಳಿದರು.
ಇಂದು ಬೆಂಗಳೂರಿನ ಶ್ವಾಸ ಕೇಂದ್ರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಪಂಚಮಸಾಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ.
ಸುಪ್ರೀಂ ಅಂಗಳಕ್ಕೆ 'ಪ್ರತ್ಯೇಕ ಲಿಂಗಾಯತ ಧರ್ಮ' ಹೋರಾಟ
ಈ ಸಮುದಾಯವನ್ನು ಸಂಘಟಿಸಬೇಕು ಹಾಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಮುದಾಯಕ್ಕೆ ಸಿಗಬೇಕಾದ ನ್ಯಾಯವನ್ನು ಒದಗಿಸಬೇಕು ಎನ್ನುವ ಏಕೈಕ ಉದ್ದೇಶದಿಂದ ಹರಿಹರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠವನ್ನು 2008 ಫೆಬ್ರವರಿ 18 ರಂದು ಸ್ಥಾಪಿಸಲಾಯಿತು. ಅಂದು ನಾಡಿನ ಪ್ರಮುಖ ಮಠಾಧೀಶರುಗಳು ಒಗ್ಗೂಡಿ ಈ ಸಮುದಾಯಕ್ಕೆ ಪೀಠದ ಅವಶ್ಯಕತೆಯನ್ನು ಸಾರಿ ಹೇಳಿದ್ದರು.
ಜಮಖಂಡಿಯಲ್ಲಿ ಇನ್ನೊಂದು ಪೀಠ ಉದಯ
ಸುಮಾರು ಒಂದೂವರೆ ದಶಕಗಳ ನಂತರ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಪ್ರಸಿದ್ದಿಯಾಗಿರುವ ಬಾಗಲಕೋಟೆಯ ಜಮಖಂಡಿಯಲ್ಲಿ ಇನ್ನೊಂದು ಪೀಠದ ಉದಯವಾಗುತ್ತಿದೆ. ಅನ್ನ, ಅಕ್ಷರ, ಆರೋಗ್ಯದಂತಹ ತ್ರಿವಿಧ ದಾಸೋಹದ ಕಲ್ಪನೆಯಿಂಧ ಕೃಷ್ಣೆಯ ತಟದಲ್ಲಿ ನೂರಾರು ಮಠಾಧೀಶರುಗಳ ನೇತೃತ್ವದಲ್ಲಿ, ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಚಾರಿಟೇಬಲ್ ಟ್ರಸ್ಟ್ನ ಅಡಿಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಸ್ಥಾಪನೆಯಾಗಿದೆ. ಫೆಬ್ರವರಿ 13 ರಂದು ನೂತನ ಜಗದ್ಗುರು ಪೀಠಾರೋಹಣ ಧರ್ಮಸಭೆ ಕಾರ್ಯಕ್ರಮ ನಡೆಯಲಿದ್ದು ವಿರಾಟ್ ರೈತ ಸಮಾವೇಶವನ್ನೂ ಆಯೋಜಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು
ಸಮಾಜದ ಸಂಘಟನೆಯ ನೊಗಕ್ಕೆ ಮತ್ತೊಂದು ಹೆಗಲು
ವೀರಶೈವ ಲಿಂಗಾಯತ ಸಮುದಾಯದ ಪಂಚಮಸಾಲಿ ಹಾಗೂ ಎಲ್ಲಾ ಒಳಪಂಗಡಗಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ 2ಎ ಮೀಸಲಾತಿ ಹಾಗೂ ಕೇಂದ್ರದ ಓ.ಬಿ.ಸಿ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವುದು. ಸಮುದಾಯದ ಮೂಲ ಉದ್ಯೋಗವಾದ ಕೃಷಿಯಲ್ಲಿ ಆದಾಯ ಕೇಂದ್ರಿತ ಕೃಷಿ ವ್ಯವಸ್ಥೆಗೆ ರೈತರನ್ನು ಸಿದ್ದಗೊಳಿಸುವ ನಿಟ್ಟಿನಲ್ಲಿ ಶ್ರೀಪೀಠವು ಪ್ರಧಾನ್ಯತೆ ನೀಡಲಿದೆ ಎಂದು ಹೇಳಿದರು.
ಪಂಚಮಸಾಲಿ ಸಮುದಾಯ ರಾಜ್ಯದ ವಿವಿಧ ಭಾಗಗಳಲ್ಲಿ ಹಂಚಿಕೊಂಡಿದೆ. ಈ ಸಮುದಾಯದ ಸಂಘಟನೆಗೆ ಕೇವಲ ಒಂದು ಪೀಠದ ವ್ಯಾಪ್ತಿ ಸಾಕಾಗುವುದಿಲ್ಲ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ ಸಮುದಾಯದ ಸಂಘಟನೆಗೆ ಈ ಜಮಖಂಡಿ ಪೀಠ ಸ್ಥಾಪನೆಯಾಗಿದೆ. ನಮ್ಮ ಸಂಘಟನೆಯ ನೊಗಕ್ಕೆ ಮತ್ತೊಂದು ಜೋಡೆತ್ತು ಸಿಕ್ಕಂತಾಗಿದೆ ಎಂದು ಹೇಳಿದರು.
ಚರ್ಚೆ: ವೀರಶೈವ ಒಂದು ವ್ರತ-ಲಿಂಗಾಯತ ಸ್ವತಂತ್ರ ಧರ್ಮನಾಡಿನ ಶ್ರೇಷ್ಠ ಸಂತ-ಮಹಾಂತರ ದಿವ್ಯ ಸಾನಿಧ್ಯ
ನಾಡಿನ ಶ್ರೇಷ್ಠ ಸಂತ-ಮಹಾಂತರ ದಿವ್ಯ ಸಾನಿಧ್ಯ, ಸರ್ವ ಸಮಾಜದ ಭಾಂಧವರ ಉಪಸ್ಥಿತಿ ಹಾಗೂ ನಾಡಿನ ಪ್ರಮುಖ ನಾಯಕರುಗಳು ಭಾಗಿಯಾಗಲಿದ್ದಾರೆ.
ಫೆಬ್ರವರಿ 13 ರಂದು ಜಮಖಂಡಿಯ ಅಲಗೂರಿನಲ್ಲಿ ನಡೆಯಲಿರುವ ನೂತನ ಜಗದ್ಗುರು ಪೀಠಾರೋಹಣ ಧರ್ಮಸಭೆ ಕಾರ್ಯಕ್ರಮ ಹಾಗೂ ವಿರಾಟ್ ರೈತ ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ನಾಡಿನ ಶ್ರೇಷ್ಠ ಸಂತ - ಮಹಾಂತರ ದಿವ್ಯ ಸಾನಿಧ್ಯವಿರಲಿದೆ. ಅಲ್ಲದೆ, ಪ್ರಮುಖ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ.
ಇನ್ನೊಂದು ಪೀಠದ ಅಗತ್ಯತೆ
ಇನ್ನೊಂದು ಪೀಠದ ಅಗತ್ಯತೆ ಬಹಳಷ್ಟಿತ್ತು. ನಮ್ಮ ಮೂಲ ಪೀಠದ ಜೊತೆಯಲ್ಲಿ ಹೆಜ್ಜೆ ಹಾಕುವಂತಹ ನೂತನ ಶಕ್ತಿ ಬೇಕಾಗಿತ್ತು ಈ ನಿಟ್ಟಿನಲ್ಲಿ ಇನ್ನೊಂದು ಪೀಠ ಸ್ಥಾಪನೆಯಾಗಿದೆ. ಆದರೆ, ಈಗಾಗಲೇ ಘೋಷಿಸಿರುವಂತೆ ಹರಿಹರ ಪೀಠ ಪಂಚಮಸಾಲಿಗಳ ಪಾಲಿಗೆ ಧರ್ಮಕ್ಷೇತ್ರವಾಗಿರಲಿದೆ. ನಾಡಿನ ಉದ್ದಗಲಕ್ಕೂ ಇನ್ನು ಕೆಲವು ಪೀಠಗಳು ಉದಯವಾಗಲಿ. ನಮ್ಮ ಪೀಠದ ಮೂಲತತ್ವಗಳನ್ನು ಪ್ರಚುರಪಡಿಸುವ ಎಲ್ಲಾ ಪೀಠಗಳಿಗೂ ನಮ್ಮ ಬೆಂಬಲ ಇರಲಿದೆ ಎಂದು ವಚನಾನಂದ ಮಹಾಸ್ವಾಮೀಜಿಗಳು ಹೇಳಿದರು.
ಪಂಚಮಸಾಲಿ 2ಎ ಮೀಸಲಾತಿ: ಬೆಳಗಾವಿಯಲ್ಲಿ ಸಿಎಂ ಹೇಳಿದ್ದೇನು?