ಬಾಗಲಕೋಟೆ: ದಾಖಲೆ ಬೆಲೆಗೆ ಮಾರಾಟವಾದ ಎತ್ತು!
ಬಾಗಲಕೋಟೆ, ಜೂ 09: ದಾಖಲೆಯ ಮೊತ್ತಕ್ಕೆ ರೈತನ ಮಿತ್ರ ಎತ್ತು ಮಾರಾಟವಾಗಿದೆ. ತೆರೆದ ಬಂಡಿ ಎತ್ತಿನ ಸ್ಪರ್ಧೆಯಲ್ಲಿ ಸದಾ ವಿಜೇತವಾಗುತ್ತಿದ್ದ ಎತ್ತು 11.50 ಲಕ್ಷ ರೂಪಾಯಿಗೆ ಮಾರಾಟವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಶಿವಲಿಂಗಪ್ಪ ಹಾಗೂ ಮಾಯಪ್ಪ ಸಹೋದರರು ಸಾಕಿದ್ದ ಎತ್ತು ಸ್ಪರ್ಧೆಯಲ್ಲಿ ಯಾವತ್ತೂ ಸೋಲು ಕಂಡಿಲ್ಲ. ಎತ್ತಿಗೆ ಸಹೋದರರು ಪ್ರೀತಿಯಿಂದ 'ಸೂರ್ಯ' ಎಂದು ನಾಮಕರಣ ಮಾಡಿದ್ದರು.
ಬಾಗಲಕೋಟೆ; ಪೊಲೀಸರಿಗೆ ಸಿಕ್ಕಿಬಿದ್ದ ನಕಲಿ ಎಸಿಬಿ ಅಧಿಕಾರಿಗಳು
ಕಿಲಾರಿ ತಳಿಯ ಈ ಎತ್ತು ದಾಖಲೆಯ ಮೊತ್ತಕ್ಕೆ ಈಗ ಮಾರಾಟವಾಗಿದೆ. ವಿಜಯಪುರ ಜಿಲ್ಲೆ ಹೊರ್ತಿ ಜಾತ್ರೆಯಲ್ಲಿ ಮೂರು ವರ್ಷದ 'ಸೂರ್ಯ'ನನ್ನು 45 ಸಾವಿರ ರೂಪಾಯಿಗೆ ಖರೀದಿಸಿ ತರಲಾಗಿತ್ತು. ಈಗ ಎತ್ತು ಖರೀದಿ ಮಾಡಿರುವ ಸದಾಶಿವ ಅವರ ಬಳಿ 9 ಲಕ್ಷದ ಮತ್ತೊಂದು ಎತ್ತು ಇದೆ.
ಸೂರ್ಯ ಹಾಗೂ ತಮ್ಮ ಬಳಿ ಇರುವ ಎತ್ತನ್ನು ಜೋಡಿಯಾಗಿ ಸ್ಪರ್ಧೆಗೆ ಬಿಡುವ ಹುಮ್ಮಸ್ಸಿನಲ್ಲಿದ್ದಾರೆ ಸದಾಶಿವ. ಹೀಗಾಗಿಯೇ ಸದಾಶಿವ ಸೂರ್ಯನನ್ನು 11.50 ಲಕ್ಷ ರೂ. ಕೊಟ್ಟು ಖರೀದಿ ಮಾಡಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ಗ್ರಾಮಸ್ಥರ ಮೆರವಣಿಗೆ; ಇದೀಗ 9 ವರ್ಷದ ಈ ಸೂರ್ಯನನ್ನು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಇಟ್ನಳ್ಳಿ ಗ್ರಾಮದ ಸದಾಶಿವ ಡಂಗೆ 11 ಲಕ್ಷ 50 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಸೂರ್ಯ ಕಳೆದ ಮೂರು ವರ್ಷಗಳಲ್ಲಿ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ತೆರೆದ ಬಂಡಿ ಜಗ್ಗುವ ಸ್ಪರ್ಧೆಯಲ್ಲಿ ಭಾಗಿಯಾಗಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಸುತ್ತಮುತ್ತಲಿನ ಯಾವುದೇ ಜಿಲ್ಲೆಯಲ್ಲೂ ಸ್ಪರ್ಧೆ ನಡೆದರೆ ಸೂರ್ಯನಿಗೆ ಅಲ್ಲಿ ಬಹುಮಾನ ಖಚಿತ. ಮೂರು ವರ್ಷಗಳಲ್ಲಿ ಅಂದಾಜು 8 ಲಕ್ಷ ರೂ. ಬೈಕ್, ಚಿನ್ನ, ಬೆಳ್ಳಿ, ನಗದು ಹಣ ಗೆದ್ದು ತಂದಿರುವ ಭಲೇ ಬಸವ ಇದಾಗಿದೆ. ಇದೀಗ ಕಿಲಾರಿ ಎತ್ತು ಸೂರ್ಯ 11.50 ಲಕ್ಷಕ್ಕೆ ಮಾರಾಟವಾದ ಹಿನ್ನೆಲೆಯಲ್ಲಿ ಚಿಮ್ಮಡ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಪ್ರೀತಿಯ ಸೂರ್ಯನನ್ನು ಗ್ರಾಮಸ್ಥರು ಬೀಳ್ಕೊಟ್ಟರು.
ಗ್ರಾಮದಲ್ಲಿ ಸಕಲ ವಾದ್ಯವೈಭವಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಗ್ರಾಮದ ಹಿರಿಯರು, ಯುವಕರು, ಸ್ವಾಮೀಜಿಯವರು ಭಾಗಿಯಾಗಿ ಸೂರ್ಯನಿಗೆ ಗೌರವ ಸಲ್ಲಿಸಿದರು.