ಊರ ಜಾತ್ರೆಗಾಗಿ ತಮ್ಮ ಮನೆಗಳನ್ನೇ ನೆಲಸಮ ಮಾಡಿದ ಮಾಲೀಕರು!
ಬೆಂಗಳೂರು, ಫೆ. 28: ಮನೆ ಎದುರು ಸ್ವಲ್ಪಹೊತ್ತು ವಾಹನಗಳನ್ನು ನಿಲ್ಲಿಸಿದರೂ ಪೊಲೀಸರಿಗೆ ದೂರು ಕೊಡುವ ಕಾಲಮಾನವಿದು. ಇಂತಹ ಕಾಲದಲ್ಲಿ, ಅಲ್ಲೊಂದು ಗ್ರಾಮದಲ್ಲಿ ಆರಾಧ್ಯದೇವತೆ ಮಾಹಾಲಕ್ಮ್ಮೀದೇವಿಯ ಜಾತ್ರೆ ಸಂಭ್ರಮದಿಂದ ಆಗಲಿ ಎಂಬ ಉದ್ದೇಶದಿಂದ ವಾಸವಿದ್ದ ಮನೆಗಳನ್ನು ಮನೆ ಮಾಲೀಕರೇ ಕೆಡವಿ ನೆಲಸಮ ಮಾಡಿ, ಪಲ್ಲಕ್ಕಿ ಸಾಗಲು ದಾರಿ ಮಾಡಿಕೊಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಮಧರಖಂಡಿ ಗ್ರಾಮದ ಊರ ದೇವತೆ ಮಹಾಲಕ್ಷ್ಮೀ ದೇವಿಯ ಜಾತ್ರೆ ಪ್ರತಿವರ್ಷ ನಡೆಯುತ್ತದೆ. ಮಹಾಲಕ್ಷ್ಮೀ ದೇವಿಯ ಜಾತ್ರೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ದೇವಿಯ ಪಲ್ಲಕ್ಕಿ ಸಾಗಲು ಕಿರಿದಾದ ದಾರಿಯಿತ್ತು.
ಕಿರಿದಾದ ದಾರಿಯನ್ನು ರಸ್ತೆ ಅಗಲೀಕರಣ ಮಾಡುವ ಮೂಲಕ ರಾಜಮಾರ್ಗ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಹಲವು ವರ್ಷಗಳಿಂದ ಪ್ರಯತ್ನ ನಡೆಸಿದ್ದರು. ಈ ವರ್ಷ ಸ್ವಯಂ ಪ್ರೇರಿತರಾಗಿ ಪಲ್ಲಕ್ಕಿ ಸಾಗುವ ಮಾರ್ಗದಲ್ಲಿದ್ದ 20ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮನೆಗಳನ್ನು ತೆರವುಗೊಳಿಸಿ ದೊಡ್ಡತನ ಮೆರೆದಿದ್ದಾರೆ. ಮನೆಗಳನ್ನು ನೆಲಸಮ ಮಾಡಿರುವ ಕುಟುಂಬಗಳು ಕೂಡ ಜಾತ್ರೆ ಸಂಭ್ರಮದಲ್ಲಿದ್ದಾರೆ.
ಸ್ವಯಂ ಪ್ರೇರಿತರಾಗಿ 20ಕ್ಕೂ ಹೆಚ್ಚು ಮನೆ ತೆರವು
ಸುಮಾರು 6 ಸಾವಿರ ಜನಸಂಖ್ಯೆ ಹೊಂದಿರುವ ಜಮಖಂಡಿ ತಾಲ್ಲೂಕಿನ ಮಧರಖಂಡಿ ಗ್ರಾಮಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಹಿಂದಿನ ಜಮಖಂಡಿಯ ಪಟವರ್ಧನ ಮಹಾರಾಜರ ಕಾಲದಿಂದಲೂ ನೂರಾರು ವರ್ಷಗಳ ಪ್ರಾಚೀನ ವರ್ಷಗಳ ಇತಿಹಾಸ ಮಹಾಲಕ್ಷ್ಮೀ ದೇವಿಯ ಜಾತ್ರೆಗಿದೆ. ಹಿಂದಿನಿಂದಲೂ ಸುತ್ತಲಿನ ಗ್ರಾಮಗಳ ಭಕ್ತರೂ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸುತ್ತಾರೆ.
ಮಹಾಲಕ್ಷ್ಮೀ ದೇವಿಯ ಪಲ್ಲಕ್ಕಿ ಸಾಗುವ ಮಾರ್ಗದ ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂಬ ಬೇಡಿಕೆ ಹಿಂದಿನಿಂದಲೂ ನಡೆದಿತ್ತು. ಹಲವು ವರ್ಷಗಳಿಂದ ರಸ್ತೆ ಅಗಲೀಕರಣದ ಬಗ್ಗೆ ಗ್ರಾಮಸ್ಥರು ಪ್ರತಿವರ್ಷ ಸಭೆ ಮಾಡುತ್ತಿದ್ದರಂತೆ. ಆದರೆ ಅದು ಕಾರ್ಯರೂಪಕ್ಕೆ ಮಾತ್ರ ಬಂದಿರಲಿಲ್ಲ. ಈ ವರ್ಷದ ಜಾತ್ರೆಗಾಗಿ ನೂರಾರು ವರ್ಷಗಳ ವಾಸಮಾಡಿದ್ದ ಮನೆಗಳನ್ನು ತಾವೇ ಸ್ವತಃ ಕೆಡವಿ ಗ್ರಾಮಸ್ಥರು ಹಾಗೂ ಊರಿನ ಹಿರಿಯರ ಮಾತಿಗೆ ಮನ್ನಣೆ ಕೊಟ್ಟಿದ್ದಾರೆ. ಸ್ವಯಂ ಪ್ರೇರಿತರಾಗಿ ಪಲ್ಲಕ್ಕಿ ಸಾಗುವ ಮಾರ್ಗದಲ್ಲಿನ ಮನೆಗಳನ್ನು ಹಾಗೂ ಖಾಲಿ ಜಾಗವನ್ನು ತೆರವುಗೊಳಿಸಿ ಭಕ್ತರ ಮೆಚ್ಚುಗೆಗೆ 20ಕ್ಕೂ ಹೆಚ್ಚು ಕುಟುಂಬಗಳು ಪಾತ್ರವಾಗಿವೆ.
ಬಾಡಿಗೆ, ತೋಟದ ಮನೆಗೆ ವಾಸ್ತವ್ಯ ಬದಲಿಸಿದ ಗ್ರಾಮಸ್ಥರು
ಇನ್ನು ಮಹಾಲಕ್ಷ್ಮೀ ದೇವಿಯ ಪಲ್ಲಕ್ಕಿ ಸಾಗಲು ಮನೆಗಳನ್ನು ನೆಲಸಮ ಮಾಡಿರುವ ಕೆಲವು ಕುಟುಂಬಗಳು ಬಾಡಿಗೆ ಮನೆಗಳನ್ನು ಹಿಡಿದಿವೆ. ಮತ್ತಷ್ಟು ಕುಟುಂಬಗಳು ತಮ್ಮ ತೋಟದ ಮನೆಗಳಿಗೆ ವಾಸ್ತವ್ಯವನ್ನು ಬದಲಿಸಿಕೊಂಡಿದ್ದಾರೆ. ಸುಮಾರು ಹತ್ತಕ್ಕು ಹೆಚ್ಚು ಕುಟುಂಬಗಳಿಗೆ ಗ್ರಾಮದ ವತಿಯಿಂದ ನಿವೇಶನ ಕೊಡಲು ನಿರ್ಧರಿಸಲಾಗಿದೆ. ಉಳಿದ ಹತ್ತು ಕುಟುಂಬಗಳು ನಿವೇಶನ ಹಾಗು ಸರ್ಕಾರದ ಸಹಾಯವನ್ನು ನಿರಾಕರಿಸಿದ್ದಾರೆಂದು ಮಹಾಲಕ್ಷ್ಮೀ ದೇವಿಯ ಅರ್ಚಕರಾದ ಭಾಸ್ಕರ್ ಬಡಿಗೇರ ಅವರು 'ಒನ್ ಇಂಡಿಯಾ'ಕ್ಕೆ ಮಾಹಿತಿ ಕೊಟ್ಟಿದ್ದಾರೆ.
ಮಹಾಲಕ್ಷ್ನೀದೇವಿಯ ಜಾತ್ರೆಯ ಪಲ್ಲಕ್ಕಿ ಉತ್ಸವಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಗ್ರಾಮದ ಹಿರಿಯರ, ಭಕ್ತರ ಇಚ್ಚೆಯಂತೆ 20ಕ್ಕೂ ಮನೆಗಳನ್ನು ನೆಲಸಮ ಮಾಡಿ ಭಕ್ತರು ತಮ್ಮ ಹೃದಯವಂತಿಕೆ ಮೆರೆದಿದ್ದಾರೆಂದು ಭಾಸ್ಕರ್ ಬಡಿಗೇರಿ ತಿಳಿಸಿದ್ದಾರೆ.
ದೈವಬಲದಿಂದ ಮತ್ತೆ ಮನೆಗಳ ನಿರ್ಮಾಣದ ನಂಬಿಕೆ
ದೈವಬಲದಿಂದ ಮತ್ತೆ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುವ ನಂಬಿಕೆಯನ್ನು ಮನೆ ತೆರವು ಮಾಡಿರುವ ಕುಟುಂಬಗಳು ಹೊಂದಿವೆ. ದೇವಿಯ ಅನುಗ್ರಹದಿಂದ ಮತ್ತೆ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುವ ಇಚ್ಛೆಯನ್ನು ಇಟ್ಟುಕೊಂಡಿದ್ದೇವೆ ಎಂದು ಮನೆ ಬಿಟ್ಟುಕೊಟ್ಟಿರುವ ಶಂಕರ್ ಖಿಳೆಗಾಂವಿ ಮಾಹಿತಿ ಕೊಟ್ಟಿದ್ದಾರೆ.
ದೇವಿಯ ಅನುಗ್ರಹದಿಂದ ನಮೆಗಲ್ಲರಿಗೂ ಒಳ್ಳೆಯದಾಗುತ್ತದೆ. ಇಪ್ಪತ್ತು ಮನೆಗಳು ಹಾಗೂ ಖಾಲಿ ಜಾಗೆಯನ್ನು ತೆರವು ಮಾಡಿ ಕೊಟ್ಟಿದ್ದೇವೆ. ನಮ್ಮೂರಿನ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಖಿಳೆಗಾಂವಿ ಹೇಳಿದ್ದಾರೆ.
ಯುಗಾದಿ ನಂತರ ದವನದ ಹುಣ್ಣಿಮೆ ಬಳಿಕ ನಡೆಯಲಿದೆ ಜಾತ್ರೆ
ಮಹಾಲಕ್ಷ್ಮೀ ಜಾತ್ರೆಗಾಗಿ ಇಡೀ ಗ್ರಾಮ ಸಂಭ್ರಮದ ಸಿದ್ಧತೆ ನಡೆಸಿದೆ. ಯುಗಾದಿಯ ನಂತರ ದವನದ ಹುಣ್ಣಿಮೆ ಆದ ಬಳಿಕ ಬರುವ ಮಂಗಳವಾರ ಜಾತ್ರೆ ನಡೆಯುತ್ತದೆ. ಎರಡು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲ ದಿನ ಪಲ್ಲಕ್ಕಿ ಉತ್ಸವ ಇರುತ್ತದೆ.
ಅದೆನೆ ಇರಲಿ ಕೊಟ್ಟಿದ್ದಕ್ಕಿಂತ ಹೆಚ್ಚು ಬೇಡುವ ಈ ಕಾಲದಲ್ಲಿ ಊರಿನವರ ಸಂಭ್ರಮಕ್ಕಾಗಿ, ಖುಷಿಗಾಗಿ ವಾಸವಿದ್ದ ಮನೆಗಳನ್ನೇ ತ್ಯಾಗ ಮಾಡಿರುವುದು ಸಣ್ಣ ನಿರ್ಧಾರವಲ್ಲ. ಮನೆಗಳನ್ನು ತೆರವು ಮಾಡಿರುವ ಕುಟುಂಬಗಳಲ್ಲಿ ಬಡವ-ಶ್ರೀಮಂತ ಹೀಗೆ ಎರಡೂ ವರ್ಗದವರಿದ್ದಾರೆ. ಮಹಾಲಕ್ಷ್ಮೀದೇವಿ ಅವರೆಲ್ಲರಿಗೂ ಒಳ್ಳೆಯದನ್ನ ಮಾಡಲಿ ಎಂದು ಭಕ್ತರು ಬೇಡಿಕೊಳ್ಳುತ್ತಿದ್ದಾರೆ.