ಬಾಗಲಕೋಟೆ: ಕೇಳೋರಿಲ್ಲ ಮುತ್ತೂರು ನಡುಗಡ್ಡೆ ಗ್ರಾಮಸ್ಥರ ಗೋಳು!
ಬಾಗಲಕೋಟೆ, ಜುಲೈ.23: ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಕೃಷ್ಣೆ ತುಂಬಿ ಹರಿಯುತ್ತಿದ್ದಾಳೆ. ಇದರಿಂದ ಕೆಲವು ಗ್ರಾಮಗಳಲ್ಲಿ ಹಾಗೂ ಜಮೀನಿನಲ್ಲಿ ನೀರು ಹೊಕ್ಕು ಜನ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ ಕೃಷ್ಣಾ ಕೊಳ್ಳದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಅಲ್ಲಿನ ಎಲ್ಲ ನದಿಗಳು ತುಂಬಿ, ಇತ್ತ ರಾಜ್ಯದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಜಮಖಂಡಿ ತಾಲೂಕಿನಲ್ಲಿ ಬರುವ ಮುತ್ತೂರು ಗ್ರಾಮವೂ ಸಹ ಇದಕ್ಕೆ ಹೊರತಾಗಿಲ್ಲ.
ಹೊಸಕೋಟೆ:ಕೆ.ಸಿ ವ್ಯಾಲಿ ಯೋಜನೆಯಿಂದ ಸಾರ್ವಜನಿಕರಿಗೆ ಪ್ರತಿನಿತ್ಯ ನರಕಯಾತನೆ
ಗ್ರಾಮದ ಸರ್ವೆ ನಂ. 11 ರಿಂದ 18 ರವರೆಗಿನ ಸುಮಾರು 200 ಎಕರೆ ಜಮೀನಿನಲ್ಲಿ ಶೇ.80 ಕ್ಕೂ ಅಧಿಕ ಜಮೀನು ನೀರಿನಲ್ಲಿ ಕೃಷ್ಣಾರ್ಪಣವಾಗಿದೆ. ಉಳಿದ ಜಮೀನಿನಲ್ಲಿ ಭಯಭೀತಿಯಿಂದ ಜೀವನ ಸಾಗಿಸುತ್ತಿದ್ದಾರೆ.
ಮನೆಗಳು ಜಲಾವೃತ
ಮುತ್ತೂರು ಗ್ರಾಮದ ನಡುಗಡ್ಡೆಯಲ್ಲಿ 40 ಕ್ಕೂ ಅಧಿಕ ಕುಟುಂಬಗಳ ಜೊತೆಗೆ ಸುಮಾರು ಒಂದು ಸಾವಿಕ್ಕೂ ಅಧಿಕ ಜನುವಾರುಗಳು ವಾಸವಾಗಿವೆ. ಅದರಲ್ಲಿ ಸುಮಾರು 25 ಕ್ಕೂ ಅಧಿಕ ಕುಟುಂಬಗಳ ಮನೆಗಳು ಜಲಾವೃತವಾಗಿವೆ.
ಆದರೆ ಅಲ್ಲಿಯ ನಿವಾಸಿಗಳಿಗೆ ಸರ್ಕಾರ ಇದುವರೆಗೂ ಯಾವುದೇ ತರಹದ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಎಲ್ಲಾ ರೀತಿಯ ಮೂಲ ಸೌಕರ್ಯಗಳಿಂದ ವಂಚಿತರಾಗಿರುವುದು ಅಲ್ಲಿಯ ನಿವಾಸಿಗಳ ಆಕ್ರೋಶಕ್ಕೆ ಎಡೆ ಮಾಡಿ ಕೊಟ್ಟಿದೆ. ಪ್ರವಾಹದಿಂದ ಜನತೆ ಕಂಗೆಟ್ಟರೂ ಸಹ ಸರ್ಕಾರದಿಂದ ಯಾವುದೇ ತರಹದ ಮೂಲಭೂತ ಸೌಕರ್ಯ ಸಿಗುವುದಿಲ್ಲ.
ರಾತ್ರಿಯಾದರೂ ವಿದ್ಯುತ್ ನೀಡಿ
"ಈ ನಡುಗಡ್ಡೆಯಲ್ಲಿ ತೀವ್ರವಾದ ಮೇವಿನ ಸಂಕಷ್ಟ ಎದುರಾಗಿದ್ದು, ಮೇವಿಗಾಗಿ ಪರದಾಡುತ್ತಿದ್ದೇವೆ. ಜನ ಜೀವನಕ್ಕೆ ಅಗತ್ಯವಾಗಿ ಬೇಕಾದ ವಿದ್ಯುತ್ ಅನ್ನು ಸರಿಯಾದ ಪ್ರಮಾಣದಲ್ಲಿ ನೀಡುತ್ತಿಲ್ಲ. ಕೊನೆ ಪಕ್ಷ ಹಗಲು ಸಂಪೂರ್ಣವಾಗಿ ವಿದ್ಯುತ್ ಬಂದ್ ಮಾಡಿ, ರಾತ್ರಿಯಾದರೂ ವಿದ್ಯುತ್ ನೀಡಬೇಕು" ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಾವಿಕ, ರೈತರ ಸಂಕಟ
ಪ್ರವಾಹ ಪರಿಸ್ಥಿತಿಯಲ್ಲಿ ಸಂತ್ರಸ್ತರನ್ನು ದಡ ಸಾಗಿಸಲು ಹೆಚ್ಚಿನ ಇಂಧನದ ಅವಶ್ಯಕತೆ ಇರುತ್ತದೆ. ಆದರೆ ಇದಕ್ಕೂ ಇಲ್ಲಿ ಕೊರತೆ ಇದೆ. ಹೆಚ್ಚಿನ ಇಂಧನಕ್ಕೆ ಬೇಡಿಕೆಯನ್ನು ಅಧಿಕಾರಿಗಳ ಮುಂದಿಟ್ಟರೆ ತಕ್ಷಣ ಸ್ಪಂದಿಸುವುದಿಲ್ಲ ಎಂಬುದು ನಾವಿಕರ ನೋವು.
ಇಲ್ಲಿಯ ಮುಖ್ಯ ಕಸುಬಾದ ಹೈನುಗಾರಿಕೆಗೆ ಅತೀವ ತೊಂದರೆಯುಂಟಾಗಿದ್ದು, ದಿನನಿತ್ಯ ಈಜಿ ಆಚೆಯ ದಡಕ್ಕೆ ಹಾಲನ್ನು ಸೇರಿಸಬೇಕಾಗಿದೆ. "ಅಧಿಕಾರಿಗಳಿಗೆ ಹೇಳಿದರೆ ಅವರು ಆ ಪ್ರದೇಶವನ್ನು ಬಿಟ್ಟು ಹೊರ ಬರಲು ಹೇಳುತ್ತಾರೆ. ಆದರೆ ಅಲ್ಲಿ ಯಾವುದೇ ವ್ಯವಸ್ಥೆಯಿರುವದಿಲ್ಲ. ಮತ್ತೆ ನಮಗೆ ಪರದಾಡುವ ಸ್ಥಿತಿಯೇ ಬರುತ್ತದೆ" ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ರೈತರು.
ಶಾಲೆ ತೊರೆದ ವಿದ್ಯಾರ್ಥಿಗಳು
ನಡುಗಡ್ಡೆಯಿಂದ ಗ್ರಾಮದ ಸುರಕ್ಷಿತ ಸ್ಥಳಕ್ಕೆ ತಲುಪಲು 3 ಕಿಮೀ. ಜಲ ಸೇತುವೆಯಾಗಿದೆ. ಇದನ್ನು ಕ್ರಮಿಸಲು, ನಮ್ಮ ಸಾಮಾನು ಸರಂಜಾಮು ಸಾಗಿಸಲು ಒಂದು ನಾವೆಯಿದೆ. ಆದರೆ ಅದಕ್ಕೆ ಇಂಧನ ಸೌಲಭ್ಯವಿಲ್ಲ. ಸುತ್ತಲೂ ನೀರಿದ್ದರೂ ಸಹ ಬೊಗಸೆ ಕುಡಿಯುವ ನೀರಿಗಾಗಿ ಪಕ್ಕದ ತುಬಚಿ ಗ್ರಾಮಕ್ಕೆ ಈಜಿ ನೀರು ತರುವ ಸ್ಥಿತಿ ಉಂಟಾಗಿದೆ.
ಈ ನಡುಗಡ್ಡೆಯಲ್ಲಿ ಸುಮಾರು 50ಕ್ಕೂ ಅಧಿಕ ಮಕ್ಕಳು ಪಕ್ಕದ ತುಬಚಿ ಗ್ರಾಮಕ್ಕೆ ಶಾಲೆಗೆ ಹೋಗುತ್ತಿದ್ದು, ಪ್ರವಾಹದಿಂದ ಶಾಲೆಯನ್ನೇ ತೊರೆದಿದ್ದಾರೆ ಇದರಿಂದ ಅವರ ಬದುಕು ಡೋಲಾಯಮಾನವಾಗಿದೆ ಎಂದು ಅಲ್ಲಿನ ಗ್ರಾಮಸ್ಥರಾದ ಭೀಮಣ್ಣಾ ಹಿಪ್ಪರಗಿ, ಧರೆಪ್ಪಾ ನಾಟೀಕಾರ ಮತ್ತಿತರರು ತಿಳಿಸಿದ್ದಾರೆ.
ಪ್ರಸ್ತುತ ಹಿಪ್ಪರಗಿ ಜಲಾಶಯದಿಂದ 2.05 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅದೇ ನೀರನ್ನು ಹೊರಹಾಕಲಾಗಿದೆ. ಇದರಿಂದ ನೀರಿನ ಪ್ರಮಾಣ ಏರುತ್ತಲೇ ಹೊರಟಿದೆ ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.