ಬಾಗಲಕೋಟೆಯಲ್ಲಿ ರಂಜಾನ್ ಸಂಭ್ರಮ: ಆಚರಣೆ, ಸಿದ್ಧತೆ ಹೀಗಿದೆ ನೋಡಿ...
ಬಾಗಲಕೋಟೆ, ಜೂನ್.14 : ಮುಳುಗಡೆ ನಗರ ಬಾಗಲಕೋಟೆ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯ ಪವಿತ್ರ ಹಬ್ಬ ರಂಜಾನ್ ಮಾಸವನ್ನು ಸಡಗರ, ಸಂಭ್ರಮದಿಂದ ಆಚರಿಸುತ್ತಿದೆ.
ಜಿಲ್ಲೆಯಲ್ಲಿ ಮುಸ್ಲಿಮರು ಮೇ.17 ರಿಂದ ರೋಜಾ ಆರಂಭಿಸಿದ್ದು, ಇನ್ನೇನು ಎರಡು ದಿನಗಳಲ್ಲಿ ಮುಕ್ತಾಯವಾಗಲಿದೆ.
ಅಬ್ಬಾ, ವೆಜ್ - ನಾನ್ ವೆಜ್, ರಮ್ಜಾನ್ ಗೆ ಎಷ್ಟೆಲ್ಲ ವಿಶೇಷ ಖಾದ್ಯ!
ರೋಜಾ ಆರಂಭವಾದಾಗಿನಿಂದ ದೇವರ ಸ್ಮರಣೆ ಮಾಡುತ್ತಾ, ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಪ್ರಾರ್ಥನೆ ಮಾಡುವಾಗ ಹನಿ ನೀರು ಸಹ ಸೇವನೆ ಮಾಡದೇ ಉಪವಾಸವನ್ನು ಕಟ್ಟುನಿಟ್ಟಾಗಿ ಚಿಕ್ಕಮಕ್ಕಳಿಂದ ಹಿಡಿದು ಯುವಕರು, ವೃದ್ಧರು ಆಚರಿಸಿಕೊಂಡು ಬರುತ್ತಿದ್ದಾರೆ.
ಆಚರಣೆ ಹೇಗಿದೆ?
ಸೂರ್ಯೋದಯ ಮುನ್ನ ಲಘು ಆಹಾರ ಸೇವನೆ ಮಾಡಿ, ಉಪವಾಸ ಆರಂಭಗೊಳ್ಳುತ್ತದೆ. ಉಪವಾಸ ಪ್ರಾರಂಭವಾದ ನಂತರ ರೋಜಾ ಆಚರಣೆ ಮಾಡುವವರು ಏನಾದರೂ ಸೇವನೆ ಹಾಗೂ ನೀರು ಕುಡಿಯಬೇಕೆಂದರೂ ಅದು ಸೂರ್ಯಸ್ತದ ನಂತರವೇ. ಅಲ್ಲಾ ಹೋ ಅಕ್ಬರ್ ಎಂಬ ಪವಿತ್ರ ಸಾಲು ಧ್ವನಿ ಕೇಳಿ ಬರುತ್ತಿದ್ದಂತೆಯೇ ಆ ದಿನದ ಉಪವಾಸ ಮುಗಿಸುತ್ತಾರೆ.
ಇಫ್ತಿಯಾರ್ ಕೂಟ
ರಂಜಾನ್ ಮಾಸದಲ್ಲಿ ಮಾತ್ರ ಈ ಉಪವಾಸ ಮಾಡಲಾಗುತ್ತದೆ. ಉಪವಾಸ ಮುಗಿದ ಬಳಿಕ ಮನೆಯಲ್ಲಿ ಕುಟುಂಬದವರೆಲ್ಲ ಸೇರಿಕೊಂಡು ಇಫ್ತಿಯಾರ್ ಕೂಟ ಏರ್ಪಡಿಸುತ್ತಾರೆ.
ಪುರುಷರೆಲ್ಲಾ ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆ ಮುಗಿಸಿ, ರಾತ್ರಿ ಉಪವಾಸ ಮುಗಿಸಿಕೊಂಡು ಬರುತ್ತಾರೆ. ಮಹಿಳೆಯರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ ರಾತ್ರಿ ರೋಜಾ ಮುಗಿಸುತ್ತಾರೆ."ರೋಜಾ ಎಂದರೆ ಕೇವಲ ಉಪವಾಸ ಆಚರಣೆ ಮಾತ್ರವಲ್ಲ, ಸತ್ಯ ಹೇಳುವುದು. ವ್ಯವಹಾರದಲ್ಲಿ ಯಾವುದೇ ಜನರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು, ದೇವರನ್ನು ನೆನಪಿಸಿಕೊಂಡು ಪ್ರಾರ್ಥನೆ ಸಲ್ಲಿಸುವುದು. ದೇವರ ಮುಂದೆ ಎಲ್ಲರೂ ಒಂದೇ. ಎಲ್ಲರೂ ಸಮಾನ ಎನ್ನುವುದು ನಾವು ಆಚರಣೆಯಲ್ಲಿ ತಿಳಿದುಕೊಳ್ಳುವಂತಹ ಆಧ್ಯಾತ್ಮಿಕ ಸಂಗತಿಯಾಗಿದೆ" ಎನ್ನುತ್ತಾರೆ ಬಾಗಲಕೋಟೆಯ ಶಾಲಗಾರ ಅವರು.
ಸಂತಸದಿಂದಲೇ ಆಚರಣೆ
ರಂಜಾನ್ ಮಾಸ ದೇಹ ಮತ್ತು ಮನಸ್ಸಿನಲ್ಲಿ ತುಂಬಿದ ಮಾಲಿನ್ಯವನ್ನು ತಿಂಗಳುಗಳ ಕಾಲ ಉಪವಾಸ ಮಾಡಿ ಶುದ್ಧೀಕರಿಸುವ ಧಾರ್ಮಿಕ ಕ್ರಿಯೆಯಾಗಿದೆ. ಪುರುಷರು ಮತ್ತು ಮಹಿಳೆಯರೆಲ್ಲರೂ ಎಷ್ಟೇ ಕಷ್ಟವೆನಿಸಿದರೂ ಸಂತಸದಿಂದಲೇ ಆಚರಿಸುತ್ತಾರೆ.
ವರ್ಷದಲ್ಲಿ ಒಂದು ತಿಂಗಳುಗಳ ಕಾಲ ಉಪವಾಸ ಆಚರಣೆ ಮಾಡಿದರೆ ಮನಸ್ಸಿಗೆ ನೆಮ್ಮದಿ ಹಾಗೂ ಸಂತಸವಾಗಲಿದೆ. ಶಾಂತಿ ಮಂತ್ರದ ಪಠಣದ ಮೂಲಕ ಪ್ರಾರ್ಥನೆ ಮಾಡುವ ಕ್ಷಣವೇ ರೋಜಾ ಆಚರಣೆಯಾಗಿದೆ.
ವಿಶೇಷ ಖಾದ್ಯಗಳು
ರಂಜಾನ್ ತಿಂಗಳಲ್ಲಿ ಚಂದ್ರ ಕಂಡ ತಕ್ಷಣವೇ ಅಂದರೆ ಮಾರನೇ ದಿನ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಇಲ್ಲಿ ಪರಸ್ಪರ ಒಬ್ಬರಿಗೊಬ್ಬರು ಅಪ್ಪಿಕೊಂಡು ಹಬ್ಬದ ಸಂಭ್ರಮದಲ್ಲಿ ಭಾಗವಹಿಸುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸಂಪ್ರದಾಯವಾಗಿದೆ.
ನಂತರ ಮನೆಯಲ್ಲಿ ಸುರಕುಂಮಾ ಸೇವನೆ ಮಾಡುತ್ತಾರೆ. ಮಾಂಸಾಹಾರ, ಸಸ್ಯಹಾರದ ವಿಶೇಷ ಖಾದ್ಯ, ಹಣ್ಣು ಹಂಪಲು ಸಿದ್ಧಪಡಿಸಿ ಗೆಳೆಯರಿಗೆ, ಆಪ್ತರನ್ನು ಮನೆಗೆ ಕರೆದು ಅತಿಥ್ಯ ನೀಡುವ ಮೂಲಕ ಮುಸ್ಲಿಂ ಸಮುದಾಯದವರು ಹಬ್ಬದ ಸಂಭ್ರಮದಲ್ಲಿ ಭಾಗವಹಿಸುತ್ತಾರೆ.