ಪಿಎಂ ಮೋದಿಗೆ ಭದ್ರತೆ ನೀಡುವ ಎಸ್ಪಿಜಿ ಪಡೆ ಸೇರಿದ ಮುಧೋಳ ಶ್ವಾನ
ಬಾಗಲಕೋಟೆ, ಆಗಸ್ಟ್ 17: ಭಾರತೀಯ ಸೇನೆ, ಐಟಿಬಿಪಿ, ಪೊಲೀಸ್ ಇಲಾಖೆ ಸೇರಿದಂತೆ ದೇಶದ ಭದ್ರತಾ ಪಡೆಯಲ್ಲಿದ್ದ ಮುಧೋಳ ಶ್ವಾನ ತಳಿಗೆ ಮತ್ತೊಂದು ಗರಿ ಸಿಕ್ಕಿದೆ. ಪ್ರಧಾನಿ ಮೋದಿಯಿಂದ ಪ್ರಶಂಸೆಗೆ ಒಳಗಾಗಿದ್ದ ಅದೇ ಶ್ವಾನ ಪ್ರಧಾನಿ ಭದ್ರತೆ ಒದಗಿಸುವ ವಿಶೇಷ ಭದ್ರತಾ ಪಡೆಗೆ ಸೇರ್ಪಡೆಯಾಗಿದೆ.
ಮುಧೋಳ ಶ್ವಾನ ಪಕ್ಕಾ ಭೇಟೆ ನಾಯಿ ಎಂದೇ ಹೆಸರಾಗಿರುವ ಶ್ವಾನ. ಬೇಟೆಯನ್ನು ಬೆನ್ನತ್ತಿದರೆ ಸಾಕು ಮಿಸ್ ಆಗುವ ಚಾನ್ಸ್ ಇಲ್ಲ. ಶರವೇಗದಲ್ಲಿ ಓಡುವ ಮುಧೋಳ ಹೌಂಡ್ ಶ್ವಾನ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸಣಕಲು ದೇಹದ, ಉದ್ದನೆಯ ಕಾಲುಳ್ಳ, ಕೋಲು ಮುಖದ ಶ್ವಾನ. ಈ ಹಿಂದೆ ಪ್ರಧಾನಿ ಮೋದಿ ಮುಧೋಳ ಶ್ವಾನವನ್ನು ಪ್ರಶಂಸಿಸಿದ್ದರು.
ಹಿಂದು-ಮುಸ್ಲಿಂ ಸ್ನೇಹಿತರಿಂದ ಎಲೆಕ್ಟ್ರಿಕ್ ಬೈಕ್ ಆವಿಷ್ಕಾರ: 3 ಗಂಟೆ ಚಾರ್ಜ್ಗೆ 120 ಕಿ.ಮೀ ಪ್ರಯಾಣ
ಈಗಾಗಲೇ ಈ ಶ್ವಾನ ಭಾರತೀಯ ಭೂ ಸೇನೆಯ ವಿವಿಧ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಾರತೀಯ ಭೂ ಸೇನೆಯ ಬಳಿಕ ವಾಯುಸೇನೆ, ಇಂಡೋ ಟಿಬೆಟಿಯನ್ ಬಾರ್ಡರ್ ಫೋರ್ಸ್, ರಾಜ್ಯ ಪೊಲೀಸ್ ಇಲಾಖೆ, ಸಶಸ್ತ್ರ ಸೀಮಾ ಪಡೆ, ಸಿಆರ್ ಪಿಎಫ್ ಸೇರಿ ವಿವಿಧ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಮುಧೋಳ ಶ್ವಾನ ಇದೀಗ ಮಹತ್ವದ ಜವಾಬ್ದಾರಿಗೆ ನಿಯೋಜನೆ ಗೊಳ್ಳಲು ಸಜ್ಜಾಗಿದೆ. ದೇಶದ ಪ್ರಧಾನಿಗೆ ಭದ್ರತೆ ಒದಗಿಸುತ್ತಿದ್ದ ಎಸ್ಪಿಜಿ ಕಮಾಂಡೊ ಪಡೆ ಜೊತೆ ಮುಧೋಳ ಶ್ವಾನ ಸಹ ಕಾರ್ಯ ನಿರ್ವಹಿಸಲಿದೆ.
ಪ್ರಧಾನಿಯಿಂದ ಪ್ರಶಂಸೆ ಪಡೆದಿದ್ದ
2020ರ ಆಗಸ್ಟ್ 30 ರಂದು ನಡೆದಿದ್ದ ಮನ್ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಧೋಳ ನಾಯಿಗಳ ಮಹತ್ವವನ್ನು ವನ್ನು ದೇಶದ ಜನತೆಗೆ ತಿಳಿಸಿದ್ದರು. ಆತ್ಮ ನಿರ್ಭರ ಭಾರತದ ಕುರಿತು ಮಾತನಾಡುವ ವೇಳೆ ಮುಧೋಳ ಶ್ವಾನಗಳನ್ನು ನೆನಪಿಸಿ, ಅವುಗಳ ವ್ಯಕ್ತಿತ್ವವನ್ನ ಬಣ್ಣಿಸಿದ್ದರು. ಆತ್ಮನಿರ್ಭರ ಭಾಗವಾಗಿ ಸ್ವಾವಲಂಬಿ ಭಾರತಕ್ಕಾಗಿ ಮನೆಯಲ್ಲಿ ಸಾಕುವುದಾದರೇ ಮುಧೋಳ ತಳಿಯ ನಾಯಿಗಳನ್ನ ಸಾಕಿ ಎಂದು ಸಂದೇಶ ಸಾರಿದ್ದರು. ಈ ಕಾರ್ಯಕ್ರಮದ ನಂತರ ದೇಶದಲ್ಲಿ ಮುಧೋಳ ನಾಯಿ ಪ್ರಸಿದ್ಧ ಪಡೆದಿತ್ತು.
ಎಸ್ಪಿಜಿ ಭದ್ರತಾ ಪಡೆಗೆ 2 ಮುಧೋಳ ನಾಯಿ
ದೇಶಿ ತಳಿಯ ಮುಧೋಳ ಶ್ವಾನಕ್ಕೆ ಮತ್ತೊಂದು ಗರಿಮೆ ಬಂದಿದೆ. ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳ ಎಸ್ಪಿ ಹಾಗೂ ಜಿಲ್ಲಾಡಳಿತಗಳ ಸಂಪರ್ಕದ ಮೂಲಕ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ತಿಮ್ಮಾಪೂರ ಬಳಿ ಇರುವ ಶ್ವಾನ ಸಂಶೋಧನಾ ಕೇಂದ್ರಕ್ಕೆ ಏಪ್ರಿಲ್ 25 ರಂದು ಎಸ್ಪಿಜಿ ಭದ್ರತಾ ಪಡೆಯ ವೆಟರ್ನರಿ ವೈದ್ಯಡಾ.ಬಿ.ಎಮ್. ಪಂಚಬುದ್ದೆ ಹಾಗೂ ಇಬ್ಬರು ಶ್ವಾನ ತರುಬೇತುದಾರರು ಭೇಟಿ ಕೊಟ್ಟಿದ್ದರು. ಆ ವೇಳೆ ಶ್ವಾನ ಸಂವರ್ಧನಾ ಕೇಂದ್ರದಲ್ಲಿ ಒಂದು ತಾಸು ಶ್ವಾನಗಳ ಪರೀಕ್ಷೆ ನಡೆಸಿದ್ದರು.
ಮುಧೋಳ ಭೇಟೆ ತಳಿಯ ನಾಯಿಯ ಆರೋಗ್ಯ, ಶ್ವಾನಗಳ ಲಕ್ಷಣ, ಓಟ, ಸಮಯಪ್ರಜ್ಞೆ, ಬುದ್ದಿವಂತಿಕೆ, ಚಾಕಚಕ್ಯತೆ ಬಗ್ಗೆ ಬಂದಿದ್ದ ಅಧಿಕಾರಿಗಳು ಹಾಗೂ ತರುಬೇತಿದಾರರು ತಿಳಿದುಕೊಂಡು ನಂತರ ಎರಡು ತಿಂಗಳಿನ ಎರಡು ಗಂಡು ಮುಧೋಳ ಶ್ವಾನಗಳನ್ನ ಕೊಂಡೊಯ್ದಿದ್ದಾರೆ. ಆ ಮೂಲಕ ಮುಧೋಳ ಶ್ವಾನ ಪ್ರಧಾನಿ ಎಸ್ಪಿಜಿ ಕಮಾಂಡೊ ಪಡೆಯ ಜೊತೆಗೆ ಕಾರ್ಯ ನಿರ್ವಹಿಸೋಕೆ ಸಜ್ಜಾಗಿದ್ದು ಎಸ್ಪಿಜಿ ಭದ್ರತಾ ಪಡೆಯಲ್ಲಿ ತರಬೇತಿ ನೀಡಿದ ಬಳಿಕ ಶ್ವಾನಗಳನ್ನ ಪ್ರಧಾನಿ ಭದ್ರತೆಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ.
ಶಿವಾಜಿ ಸೇನೆಯಲ್ಲೂ ಇತ್ತು ಮುಧೋಳ ಶ್ವಾನ
ಭದ್ರತಾ ದೃಷ್ಟಿಯಿಂದ ಈ ವಿಚಾರವನ್ನ ಇಷ್ಟು ದಿನ ಗೌಪ್ಯವಾಗಿರಸಲಾಗಿದ್ದು ಇದೀಗ ಬೆಳಕಿಗೆ ಬಂದಿದೆ. ಇದಕ್ಕೂ ಮುನ್ನ ಮುಧೋಳ ಶ್ವಾನ ರಾಜಮಹಾರಾಜರ ಕಾಲದಲ್ಲೇ ಪ್ರಖ್ಯಾತಿ ಪಡೆದಿತ್ತು. ಮುಧೋಳ ಮಹಾರಾಜ ಮಾಲೋಜಿರಾವ್ ಮುಧೋಳ ಶ್ವಾನವನ್ನು ಹೆಚ್ಚು ಪ್ರಚುರಪಡಿಸಿದ್ದರು. ನಂತರ ಶಿವಾಜಿ ತಮ್ಮ ಸೇನೆಯಲ್ಲಿ ಮುಧೋಳ ಶ್ವಾನ ಬಳಸಿಕೊಂಡಿದ್ದ. ಹಲಗಲಿ ಬೇಡರ ಜೊತೆ ಸ್ವಾತಂತ್ರ್ಯ ಹೋರಾಟದಲ್ಲೂ ಮುಧೋಳ ಶ್ವಾನ ಭಾಗಿಯಾಗಿತ್ತು ಎಂದು ಇತಿಹಾಸದಲ್ಲಿ ಮಾಹಿತಿಯಿದೆ.
ಭಾರತೀಯ ಸೇನೆಯಲ್ಲಿರುವ ಏಕೈಕ ದೇಶಿ ತಳಿ
ಸದ್ಯ ಮುಧೋಳ ಶ್ವಾನ ಭಾರತೀಯ ಸೇನೆ, ಸೀಮಾ ಸುರಕ್ಷಾ ಬಲ ದಳ, ಸೆಂಟ್ರಲ್ ಇಂಡಸ್ಟ್ರಿ ಸೆಕ್ಯುರಿಟಿ ಪೋರ್ಸ್, ಸಿಆರ್ಪಿಎಫ್ನಲ್ಲಿ ಮುಧೋಳ ಶ್ವಾನ ಸೇವೆ ಸಲ್ಲಿಸುತ್ತಿದೆ. ವಿಶ್ವದಲ್ಲಿ 332 ಶ್ವಾನ ತಳಿಗಳಿವೆ. ಇದರಲ್ಲಿ ಭಾರತದಲ್ಲಿ ಪ್ರಚಲಿತದಲ್ಲಿರುವ ತಳಿಗಳ ಸಂಖ್ಯೆ 20 ಮಾತ್ರ. ಅದರಲ್ಲೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಏಕೈಕ ದೇಶಿ ತಳಿಯ ಶ್ವಾನ ಅಂದರೆ ಅದು ಮುಧೋಳ ಹೌಂಡ್ ಮಾತ್ರ . ಹೀಗಾಗಿ ಮುಧೋಳ ಶ್ವಾನ ಸಾಕಾಣಿಕೆ ಮಾಡುತ್ತಿರುವ ಜನತೆ ಈ ವಿಚಾರದಿಂದ ಸಂತಸ ವ್ಯಕ್ತಪಡಿಸಿದ್ದಲ್ಲದೇ, ಅದು ನಮ್ಮ ಹೆಮ್ಮೆ, ಕರ್ನಾಟಕದ ಹೆಮ್ಮೆ ಎಂದು ಬಣ್ಣಿಸಿದ್ದಾರೆ.
ದೇಶದ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಮುಧೋಳ ಶ್ವಾನ ದಿನದಿಂದ ದಿನಕ್ಕೆ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಭೂ ಸೇನೆ, ವಾಯುಸೇನೆ, ಸೇರಿದಂತೆ ದೇಶದ ವಿವಿಧ ಭದ್ರತಾ ಪಡೆಗಳಲ್ಲಿ ಕಾರ್ಯನಿರ್ವಹಿಸಿದ್ದ ಮುಧೋಳ ಶ್ವಾನ ಇದೀಗ ಪ್ರಧಾನಿ ಭದ್ರತಾ ಪಡೆ ಎಸ್ಪಿಜಿ ಜೊತೆಗೂಡಿದ್ದು ಇಡೀ ಬಾಗಲಕೋಟೆ ಜಿಲ್ಲೆಯ ಕೀರ್ತಿ ಹೆಚ್ಚಿಸಿದೆ.