ಮಂಗನ ಸಾವು, ಅರ್ಥಪೂರ್ಣ ವಿದಾಯ ಹೇಳಿದ ಬಾಡಗಿ ಗ್ರಾಮಸ್ಥರು
ಬಾಗಲಕೋಟೆ, ಆಗಸ್ಟ್, 03: ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಿ ಪುನರ್ ವಸತಿ ಕೇಂದ್ರದಲ್ಲಿ ನಿರ್ಮಾಣ ಹಂತದ ಆಂಜನೇಯ ದೇವಸ್ಥಾನದ ಎದುರೇ ಮಂಗವೊಂದು ಜೀವಬಿಟ್ಟಿತ್ತು. ಗ್ರಾಮಸ್ಥರು ಇದು ಆಂಜನೇಯನ ಪವಾಡ ಎಂದು ಭಾವಿಸಿ, ಸಾವನ್ನಪ್ಪಿದ ಮಂಗನಿಗೆ ವಿಶೇಷ ಪೂಜೆ ಮಾಡಿ, ಮೂರ್ತಿ ಪ್ರತಿಷ್ಠಾಪನೆ ಜಾಗದಲ್ಲೇ ಅಂತ್ಯಸಂಸ್ಕಾರ ಮಾಡಿದರು.
ಬೀಳಗಿ ತಾಲೂಕಿನ ಬಾಡಗಿ ಪುನರ್ ವಸತಿ ಕೇಂದ್ರದಲ್ಲಿ ಆಂಜನೇಯನೇ ಬಂದಿದ್ದಾನೆಂದು ಸಾವನ್ನಪ್ಪಿದ ಮಂಗನಿಗೆ ಗ್ರಾಮಸ್ಥರು ಅರ್ಥಪೂರ್ಣ ವಿದಾಯ ಹೇಳಿದರು. ದೇವಸ್ಥಾನದ ಎದುರು ಸಾವನ್ನಪ್ಪಿದ ಮಂಗನಿಗೆ ಪೂಜೆ ನೆರವೇರಿಸಿ, ಆರತಿ ಬೆಳಗಿ, ಮೆರವಣಿಗೆಯನ್ನೂ ಮಾಡಿದರು. ನಂತರ ಆಂಜನೇಯನ ದೇವಸ್ಥಾನದಲ್ಲಿ ಗದ್ದುಗೆ ಮಾಡಿ ಮಂಗನ ಅಂತ್ಯಸಂಸ್ಕಾರ ನೇವರವೇರಿಸಿ ಭಕ್ತಿ ಮೆರೆದಿದ್ದಾರೆ.
ಮಂಗ ಅನಾರೋಗ್ಯದಿಂದಾಗಿ ಪಟ್ಟು ಜೀವಬಿಟ್ಟಿದೆ. ಅಚ್ಚರಿ ಎಂಬಂತೆ ಮಂಗ ಜೀವ ಬಿಟ್ಟ ಜಾಗದಲ್ಲಯೇ ಆಂಜನೇಯನ ದೇವಸ್ಥಾನ ನಿರ್ಮಾಣವಾಗುತ್ತಿದೆ. ನಿರ್ಮಾಣ ಹಂತದ ದೇವಸ್ಥಾನದ ಎದುರೇ ಮಂಗ ಜೀವಬಿಟ್ಟಿರುವುನ್ನು ಕಂಡು ಗ್ರಾಮಸ್ಥರು ಆಶ್ವರ್ಯ ಚಕಿತರಾಗಿದ್ದಾರೆ.
ಇದು ಆಂಜನೇಯನ ಪವಾಡವೇ ಎಂದು ನಂಬಿ, ಗ್ರಾಮಸ್ಥರೆಲ್ಲ ದೇಣಿಗೆ ಸಂಗ್ರಹಿಸಿ ಅನ್ನ ಸಂತರ್ಪಣೆ, ಭಜನೆ ಮಾಡಿದರೆ, ಮತ್ತೊಂಡೆದೆ ಮಹಿಳೆಯರು ಆರತಿ ಬೆಳಗಿ ಆಂಜನೇಯನ ಸ್ವರೂಪಿಯಾದ ಮೃತ ಮಂಗನಿಗೆ ಅರ್ಥಪೂರ್ಣ ವಿದಾಯ ಹೇಳಿದರು.
ಪಟಾಕಿ ಸಿಡಿಸಿ ಮಂಗನ ಪಾರ್ಥೀವ ಶರೀರವನ್ನು ಇಡೀ ಗ್ರಾಮದ ತುಂಬಾ ಮೆರವಣಿಗೆ ಮಾಡಿದ್ದಾರೆ. ಬಾಡಗಿ ಪುನರ್ವಸತಿ ಕೇಂದ್ರ ಈಗ ನಿರ್ಮಾಣವಾಗುತ್ತಿದೆ. ನಮ್ಮ ಊರಿಗೆ ರಕ್ಷಣೆ ನೀಡಲು ಸ್ವತಃ ಆಂಜನೇಯನೇ ಮಂಗನ ಸ್ವರೂಪದಲ್ಲಿ ಬಂದು ಇಲ್ಲಿ ಜೀವ ಬಿಟ್ಟಿದ್ದಾನೆ ಎಂಬುದು ಗ್ರಾಮದ ಜನರ ನಂಬಿಕೆ.
ಹನುಮಂತ ದೇವರ ಕೃಪೆ ನಮ್ಮ ಮೇಲಿದೆ. ನಿರ್ಮಾಣದ ಹಂತದಲ್ಲಿರುವ ದೇವಸ್ಥಾನದಲ್ಲಿ ಆಂಜನೇಯನ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲೇ ಮಂಗನ ಅಂತಿಮ ಕ್ರಿಯಾವಿಧಿವಿದಾನ ನೆರವೇರಿಸಿದ್ದೇವೆ. ಆರು ತಿಂಗಳ ನಂತರ ಮಂಗನ ಅಂತ್ಯಕ್ರಿಯೆ ಜಾಗಯಲ್ಲೇ, ಆಂಜನೇಯನ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದರು.