ರೈತರ ಆದಾಯ ದ್ವಿಗುಣಗೊಳಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ: ಅಮಿತ್ ಶಾ
ಬಾಗಲಕೋಟೆ, ಜನವರಿ 17: ಮೋದಿ ಪ್ರಧಾನಿಯಾಗಲು ಕರ್ನಾಟಕದ ಕೊಡುಗೆ ಅಪಾರವಾಗಿದೆ.
ರೈತರ ಆದಾಯ ದ್ವಿಗುಣಗೊಳಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಆದಾಯ ದ್ವಿಗುಣಗೊಳಿಸುತ್ತೀವಿ ಎಂದಾಗ ಕಾಂಗ್ರೆಸ್ ನಾಯಕರು ನಗುತ್ತಿದ್ದರು. ಈಗಾಗಲೇ ನಾವು ರೈತರ ಆದಾಯ ದ್ವಿಗುಣಗೊಳಿಸುವ ಕೆಲಸ ಮಾಡ್ತಿದ್ದೇವೆ. ಆದರೆ ಕಾಂಗ್ರೆಸ್ ರೈತರನ್ನು ಮುಂದಿಟ್ಟುಕೊಂಡು ಟೀಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ಆರಂಭಿಸಿದರು.
ಬಾಗಲಕೋಟೆಗೆ ಅಮಿತ್ ಶಾ ಭೇಟಿ, ಹಲವು ಯೋಜನೆಗಳಿಗೆ ಚಾಲನೆ
ರೈತರ ಕಲ್ಯಾಣಕ್ಕಾಗಿ ನರೇಂದ್ರ ಮೋದಿ ಸರ್ಕಾರ ಶ್ರಮ ಪಡುತ್ತಿದೆ. ಇದಕ್ಕಾಗಿ ರೈತರಿಗೆ ಲಾಭವಾಗಲೆಂದೇ 3 ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತು. ಕಾಯ್ದೆಯಿಂದ ರೈತರು ತಮ್ಮ ಬೆಳೆಗಳನ್ನು ದೇಶ ಅಥವಾ ವಿಶ್ವದ ಯಾವುದೇ ಮೂಲೆಯಲ್ಲಿ ಬೇಕಾದರೂ ಮಾರಾಟ ಮಾಡಬಹುದು.
ರೈತರ ಪರವಾಗಿ ಮಾತನಾಡಲು ಶುರು ಮಾಡಿರುವ ಕಾಂಗ್ರೆಸ್ ನಾಯಕರಿಗೊಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ನೀವೇಕೆ ರೈತರಿಗೆ ವರ್ಷಕ್ಕೆ ರೂ. 6,000 ಗಳನ್ನು ನೀಡಲಿಲ್ಲ...? ನೀವು ಅಧಿಕಾರದಲ್ಲಿದ್ದಾಗ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ ಅಥವಾ ಎಥೆನಾಲ್ ನೀತಿಯನ್ನೇ ತಿದ್ದುಪಡಿ ಮಾಡಲಿಲ್ಲ? ಏಕೆಂದರೆ ನಿಮ್ಮ ಉದ್ದೇಶ ಸರಿಯಾಗಿಲ್ಲ ಎಂದು ಕಿಡಿಕಾರಿದರು.
ಬಾಗಲಕೋಟೆಯ ಭೂಮಿ ಸುಜಲಾಂ ಸುಫಲಾಂ ಭೂಮಿಯಾಗಿದೆ ಎಂದು ಹೇಳಿದ ಅಮಿತ್ ಶಾ ಕೃಷ್ಣಾ-ಘಟಪ್ರಭಾ ನದಿಗಳು ಇಲ್ಲಿ 12 ತಿಂಗಳು ತುಂಬಿ ಹರಿಯುತ್ತದೆ ಎಂದು ಜನರಿಗೆ ಮಕರ ಸಂಕ್ರಾಂತಿಯ ಶುಭ ಕೋರಿದರು. ಬಳಿಕ ಮುರುಗೇಶ್ ನಿರಾಣಿಯವರನ್ನ ಉತ್ಸವ ಮೂರ್ತಿ ಎಂದು ಹೊಗಳಿದರು.