ಬ್ರಾಹ್ಮಣರ ಬಗ್ಗೆ ಹೇಳಿಕೆ : ಸ್ಪಷ್ಟನೆ ಕೊಟ್ಟ ಶಾಸಕ ಆನಂದ್ ನ್ಯಾಮಗೌಡ
ಬಾಗಲಕೋಟೆ, ನವೆಂಬರ್ 14 : ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ ಅವರು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಮಾರಂಭವೊಂದರಲ್ಲಿ ಶಾಸಕರು ನೀಡಿದ್ದ ಹೇಳಿಕೆ ಬ್ರಾಹ್ಮಣ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.
ಬುಧವಾರ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವತಿಯಿಂದ ಆನಂದ್ ನ್ಯಾಮಗೌಡ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಭಾಷಣ ಮಾಡುವಾಗ ಶಾಸಕರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ಬ್ರಾಹ್ಮಣರ ಆಕ್ರೋಶಕ್ಕೆ ಕಾರಣವಾದ ಆನಂದ್ ನ್ಯಾಮಗೌಡ ಹೇಳಿಕೆ
ಸಮಾರಂಭದಲ್ಲಿ ಮಾತನಾಡಿದ್ದ ಆನಂದ್ ನ್ಯಾಮಗೌಡ ಅವರು, '1990ರಲ್ಲಿ ನಮ್ಮ ತಂದೆ ಸಿದ್ದು ನ್ಯಾಮಗೌಡ ಅವರು ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ದೇಶಕ್ಕೆ ಚಿರಪರಿಚಿತರಾಗಿದ್ದರು. ಸದ್ಯ, ನಾನೂ ಬ್ರಾಹ್ಮಣ ವ್ಯಕ್ತಿಯನ್ನು ಸೋಲಿಸಿದ್ದೇನೆ' ಎಂದು ಹೇಳಿದ್ದರು.
ಜಮಖಂಡಿ ಕ್ಷೇತ್ರದ ಶಾಸಕ ಆನಂದ್ ನ್ಯಾಮಗೌಡ ಪರಿಚಯ
ಶಾಸಕರ ಹೇಳಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಬ್ರಾಹ್ಮಣ ಸಮುದಾಯದವರು ಶಾಸಕರ ಹೇಳಿಕೆಯನ್ನು ಖಂಡಿಸಿದ್ದರು. ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಶ್ರೀಕಾಂತ್ ಕುಲಕರ್ಣಿ ಅವರು ಸಹ ಹೇಳಿಕೆಯನ್ನು ಖಂಡಿಸಿ ಆನಂದ್ ನ್ಯಾಮಗೌಡ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು... ಶಾಸಕರ ಸ್ಪಷ್ಟನೆ ಇಲ್ಲಿದೆ....
ಬಾಗಲಕೋಟೆಗೊಂದು ಸಚಿವ ಸ್ಥಾನ ಕೊಡಿ : ಕಾಂಗ್ರೆಸ್ ನಾಯಕರ ಬೇಡಿಕೆ
ಶಾಸಕರ ಸ್ಪಷ್ಟನೆ
ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಆನಂದ್ ನ್ಯಾಮಗೌಡ ಅವರು, 'ಕಾರ್ಯಕ್ರಮದಲ್ಲಿ ನನಗಿಂತ ಮೊದಲು ಒಬ್ಬರು ಭಾಷಣ ಮಾಡಿದ್ದರು. ಅವರು ನನ್ನ ತಂದೆ ಗೆಲುವಿನ ಬಗ್ಗೆ ಮಾತನಾಡಿದರು. ಅವರ ಮಾತನ್ನು ನಾನು ಸ್ಪಷ್ಟಪಡಿಸಿದ್ದೇನೆ ಅಷ್ಟೇ' ಎಂದು ಹೇಳಿದರು.
ನನ್ನ ಉದ್ದೇಶವಾಗಿರಲಿಲ್ಲ
'ಬ್ರಾಹ್ಮಣ ಸಮುದಾಯವನ್ನು ಸೋಲಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಚುನಾವಣೆಯಲ್ಲಿ ಗೆಲ್ಲುವುದು, ನಮ್ಮ ತಂದೆಯ ಕೆಲಸವನ್ನು ಮುಂದುವರೆಸುವುದು ನನಗೆ ಮುಖ್ಯವಾಗಿತ್ತು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ' ಎಂದು ಶಾಸಕ ಆನಂದ್ ನ್ಯಾಮಗೌಡ ಹೇಳಿದರು.
ಕ್ಷಮೆ ಕೇಳುತ್ತೇನೆ
ಶಾಸಕ ಆನಂದ್ ನ್ಯಾಮಗೌಡ ಅವರು, 'ನನ್ನ ಹೇಳಿಕೆಯಿಂದ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ಮಾತಿನಿಂದ ಸಮುದಾಯಕ್ಕೆ ನೋವಾಗಿದ್ದರೆ, ನಾನು ಕ್ಷಮೆ ಯಾಚಿಸುತ್ತೇನೆ' ಎಂದು ತಿಳಿಸಿದ್ದಾರೆ.
ಹೇಳಿಕೆ ಖಂಡಿಸಿದ್ದರು
ಶಾಸಕ ಆನಂದ್ ನ್ಯಾಮಗೌಡ ಅವರ ಹೇಳಿಕೆಯನ್ನು ಬಿಜೆಪಿ ನಾಯಕ ಶ್ರೀಕಾಂತ್ ಕುಲಕರ್ಣಿ ಅವರು ಖಂಡಿಸಿದ್ದರು. 'ಈ ಸೊಕ್ಕು, ದರ್ಪ ಬಹಳ ದಿನ ಉಳಿಯುವುದಿಲ್ಲ. ಆನಂದ್ ನ್ಯಾಮಗೌಡ ಅವರು ಮೊದಲ ಬಾರಿಗೆ ಶಾಸಕರಾಗಿದ್ದಾರೆ ಎಂಬುದನ್ನು ಮರೆಯಬಾರದು. ಸಜ್ಜನಿಕೆ ಇದ್ದರೆ ಮೊದಲು ಅವರು ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು' ಎಂದು ಒತ್ತಾಯಿಸಿದ್ದರು.