ವೀರಶೈವರನ್ನು ಬಿಡಲು ಲಿಂಗಾಯತರಿಗೆ ಮಾತೆ ಮಹಾದೇವಿ ಆಗ್ರಹ
ಬಾಗಲಕೋಟೆ, ಜನವರಿ 13: ವೀರಶೈವ ಮಹಾಸಭಾವನ್ನು ಬಹಿಷ್ಕರಿಸಿ ಹೊರಬರಲು ಲಿಂಗಾಯತರಿಗೆ ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಮಹಾದೇವಿ ಕರೆ ನೀಡಿದ್ದಾರೆ.
ಶನಿವಾರ ಮಾತನಾಡಿದ ಅವರು, ಲಿಂಗಾಯತ ಎನ್ನುವ ಜೇನುತುಪ್ಪದ ಬಾಟಲಿಗೆ ವೀರಶೈವ ಎನ್ನುವ ಅವಡಲೆಣ್ಣೆಯ ಚೀಟಿ ಹಚ್ಚಿ ನಮ್ಮ ಸಮಾಜ ನಮ್ಮ ಸಂಸ್ಕೃತಿಯನ್ನ ಕೆಡಿಸಿದ್ದಾರೆ ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಜಗದ್ಗುರು ಮಾತೆ ಮಹಾದೇವಿ ಹೇಳಿದರು.
ವೀರಶೈವ-ಲಿಂಗಾಯತ ಬಣಗಳು ಕೊನೆಗೂ ಇಬ್ಭಾಗ!
ಮಹಾಸಭಾದಲ್ಲಿ ಸದಸ್ಯರಾಗಿರುವ ಬಸವಾಭಿಮಾನಿಗಳು ರಾಜೀನಾಮೆ ಕೊಟ್ಟು ಹೊರಬಂದು ಪ್ರತಿಭಟಿಸಬೇಕು. ವೀರಶೈವ ಮಹಾಸಭಾಕ್ಕೆ ಪರ್ಯಾಯವಾಗಿ, ವಿಶ್ವ ಲಿಂಗಾಯತ ಪರಿಷತ್ತಿನ ಸ್ಥಾಪನೆಯಾಗುತ್ತಿದ್ದು ಅದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ.ಲಿಂಗಾಯತ ಸಮಾಜ ಎನ್ನುವ ಶುದ್ಧ ನೀರಿನಲ್ಲಿ ಸೇರಿಕೊಂಡಿರುವ ವೀರಶೈವ ಎನ್ನುವ ಕಸ ಸ್ವಚ್ಛಗೊಳಿಸಿ ಶುದ್ಧೀಕರಣ ಮಾಡಬೇಕಿದೆ ಎಂದರು.
ಸರ್ಕಾರ ರಚಿಸಿರುವ ಸಮಿತಿ ಕೇಳಿರುವ ಆರು ತಿಂಗಳ ಸಮಯಾವಧಿ ಹಾಸ್ಯಾಸ್ಪದವಾಗಿದೆ. ಒಂದೇ ತಿಂಗಳಲ್ಲಿ ವರದಿ ಸಲ್ಲಿಬೇಕು. ಯಡಿಯೂರಪ್ಪ ಆಗಲಿ ,ಬಿಜೆಪಿಯಾಗಲಿ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಧರ್ಮ ಹೋರಾಟಕ್ಕೆ ಖಂಡಿತಾ ಹಿನ್ನಡೆಯಾಗುತ್ತದೆ. ಹೀಗಾಗಿ ವಿಚಾರವಾದಿಗಳು ಸಿದ್ದರಾಮಯ್ಯ ನವರು ಮನಸ್ಸು ಮಾಡಿ ಸಮಿತಿಗೆ ಆಗ್ರಹಿಸಿ ಒಂದು ತಿಂಗಳಲ್ಲಿ ವರದಿಕೊಡಲು ಒತ್ತಡ ಹೇರಬೇಕು.
ಲಿಂಗೈಕ್ಯ ಹಾನಗಲ್ ಕುಮಾರೇಶ್ವರ ಸ್ವಾಮಿಗಳ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರು, ದುರುದ್ದೇಶದ ಉದ್ದೇಶದಿಂದ ವೀರಶೈವ ಮಹಾಸಭಾ ಸ್ಥಾಪನೆಯಾಗಿದೆ. ಕಳೆದ1904 ರಲ್ಲಿ ಲಿಂಗೈಕ್ಯ ಹಾನಗಲ್ ಕುಮಾರೇಶ್ವರ ಶ್ರೀಗಳು ನಮ್ಮ ಸಮಾಜದ ಸಾಂಸ್ಕೃತಿಕ ಸ್ಥಿತಿಯನ್ನು ಕೆಡಿಸುವ ಉದ್ದೇಶದಿಂದ ವೀರಶೈವ ಮಹಾಸಭೆಯನ್ನು ಮಾಡಿದರು.ಇದು ಬಹಳ ಜನರಿಗೆ ತಿಳಿದಿಲ್ಲ ಎಂದರು.