ಪೇಜಾವರ ಶ್ರೀ ಹೇಳಿಕೆಗೆ ಕೂಡಲಸಂಗಮದಲ್ಲಿ ಮಾದೇಶ್ವರ ಸ್ವಾಮೀಜಿ ತಿರುಗೇಟು
ಬಾಗಲಕೋಟೆ, ಜುಲೈ 30: "ಲಿಂಗಾಯತರು ಎಂದಿಗೂ ಹಿಂದೂಗಳೇ. ಈ ವಿಚಾರವಾಗಿ ನಾನು ಎಂದಿಗೂ ಚರ್ಚೆಗೆ ಸಿದ್ಧ" ಎಂದು ಮೈಸೂರಿನಲ್ಲಿ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಪಂಥಾಹ್ವಾನ ನೀಡಿದ್ದು, ಇದಕ್ಕೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಬಸವ ಧರ್ಮಪೀಠದ ಮಾದೇಶ್ವರ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
"ರಾಜ್ಯದಲ್ಲಿ ವೀರಶೈವ- ಲಿಂಗಾಯತ ಧರ್ಮದ ಚರ್ಚೆ ಆಗುತ್ತಿದೆ. ಲಿಂಗಾಯತರು ವೀರಶೈವರು ಬೇರೆ ಬೇರೆ ಅಲ್ಲ. ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರು. ಲಿಂಗಾಯತ- ಹಿಂದೂ ಧರ್ಮ ಬೇರೆ ಅಲ್ಲ. ಎಲ್ಲರೂ ನಮ್ಮದು ಬೇರೆ ಧರ್ಮ ಅಂದರೆ ಹಿಂದೂಗಳು ಯಾರು?"ಎಂದು ಈಚೆಗೆ ಪೇಜಾವರ ಶ್ರೀಗಳು ಹೇಳಿದ್ದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೇಜಾವರ ಶ್ರೀಗಳ 81ನೇ ಚಾತುರ್ಮಾಸ್ಯ
ಪೇಜಾವರ ಶ್ರೀ ಹೇಳಿಕೆಗೆ ಪ್ರತಿಕ್ರಿಯಿಸಿ, "ಪೇಜಾವರ ಶ್ರೀಗಳಿಗೆ ಲಿಂಗಾಯತ ಧರ್ಮದ ಆಳ ಅರಿವು ಇಲ್ಲ. ನಲವತ್ತು ವರ್ಷದಿಂದ ಈ ಬಗ್ಗೆ ಹೋರಾಟ ನಡೆಯುತ್ತಿದೆ. ಲಿಂಗೈಕ್ಯ ಮಾತೆ ಮಹಾದೇವಿ ಅವರು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರು' ಎಂದು ಹೇಳಿದರು.
"ಪೇಜಾವರ ಶ್ರೀಗಳು ಎಲ್ಲಿಯಾದರೂ ವೇದಿಕೆ ಸಿದ್ಧಪಡಿಸಲಿ. ನಾವು ಚರ್ಚೆಗೆ ಸಿದ್ಧರಿದ್ದೇವೆ. ಮಾತೆ ಮಹಾದೇವಿ ಸೇರಿದಂತೆ ಅನೇಕ ಮಠಾಧೀಶರು ಲಿಂಗಾಯತ ಧರ್ಮದ ಬಗ್ಗೆ ಪುಸ್ತಕ ಬರೆದಿದ್ದಾರೆ. ಅವುಗಳನ್ನು ಶ್ರೀಗಳಿಗೆ ಕೊಡುತ್ತೇವೆ, ಅವರು ಅಧ್ಯಯನ ಮಾಡಲಿ" ಎಂದಿದ್ದಾರೆ.