ಚಾಮುಂಡೇಶ್ವರಿಯಿಂದ ಪಲಾಯನ ಮಾಡಿದವರು ಕರ್ನಾಟಕ ಗೆಲ್ತಾರಾ: ಅಮಿತ್ ಶಾ
ಬಾಗಲಕೋಟೆ, ಏಪ್ರಿಲ್ 28: ಸೋಲುವ ಭಯದಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಬಾದಾಮಿಗೆ ಪಲಾಯನ ಮಾಡಿರುವ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸುತ್ತಾರೆಯೇ? ಎಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆಯ ಹುನಗುಂದದಲ್ಲಿ ಬಿಜೆಪಿ ಅಭ್ಯರ್ಥಿಪರ ಪ್ರಚಾರ ನಡೆಸಿ ಮಾತನಾಡಿದ ಅಮಿತ್ ಶಾ, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುತ್ತಾರೆ ಎಂಬ ಭರವಸೆಯಲ್ಲಿ ರಾಹುಲ್ ಗಾಂಧಿ ಇದ್ದಾರೆ, ಆದರೆ ಅವರೇ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡರಲ್ಲೂ ಸೋಲಲಿದ್ದಾರೆ. ಬಾದಾಮಿಯಲ್ಲಿ ರಾಮುಲು ಅವರದ್ದೇ ವಿಜಯ ಎಂದರು.
ರೆಡ್ಡಿ ಸಹೋದರರಿಂದ ದೂರವಿರಲು ಬಳ್ಳಾರಿ ಪ್ರವಾಸ ರದ್ದುಗೊಳಿಸಿದರೆ ಶಾ?
ಮೋದಿ ಅವರು ಕರ್ನಾಟಕಕ್ಕೆ ನೀಡಿದ ಅನುದಾನಗಳ ದೊಡ್ಡ ಪಟ್ಟಿ ಓದಿ ಹೇಳಿದ ಅಮಿತ್ ಶಾ, ಇಲ್ಲಿಯೂ ಬಿಜೆಪಿ ಸರ್ಕಾರ ತಂದು ನರೇಂದ್ರ ಮೋದಿ ಅವರ ಕೈ ಬಲಪಡಿಸಿ ಅವರಿಗೆ ಕರ್ನಾಟಕದ ಸೇವೆ ಮಾಡುವ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಮೇ 15ಕ್ಕೆ ಸರ್ಕಾರ ಬದಲಾಗುವುದು ಶತಸಿದ್ಧ
ಸಿದ್ದರಾಮಯ್ಯ ವಿರುದ್ಧ ಭಿರುಸಿನ ವಾಗ್ದಾಳಿ ನಡೆಸಿದ ಅಮಿತ್ ಶಾ, 'ಸಿದ್ದರಾಮಯ್ಯ ಅವರೇ ನಿಮ್ಮ ದಿನಗಳನ್ನು ಎಣಿಸಿಕೊಳ್ಳಿ, ಮೇ 15ಕ್ಕೆ ಫಲಿತಾಂಶ ಬರುತ್ತದೆ, ಅಂದಿಗೆ ಸಿದ್ದರಾಮಯ್ಯ ಸರ್ಕಾರ ಮುಗಿದು, ಬಿಜೆಪಿ ಸರ್ಕಾರ ಬರುವುದು ಶತಸಿದ್ಧ' ಎಂದು ಹೂಂಕರಿಸಿದರು.
ಜೈಲಿಗಟ್ಟದೆ ಬಿಡೆವು
ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ನ 24 ಕಾರ್ಯಕರ್ತರ ಕಗ್ಗೊಲೆಗಳಾಗಿವೆ. ನಮ್ಮ ಸರ್ಕಾರ ಬಂದರೆ ಕೊಲೆಗಾರರನ್ನು ಸಿದ್ದರಾಮಯ್ಯ ಅವರು ಪಾತಾಳದಲ್ಲಿ ಅಡಗಿಸಿಇಟ್ಟಿದ್ದರೂ ಹೊರಗೆ ಎಳೆದು ಜೈಲು ಸೇರಿಸುತ್ತೇವೆ ಇದು ನಮ್ಮ ಪ್ರಮಾಣ ಎಂದು ಅಮಿತ್ ಶಾ ಅಬ್ಬರಿಸಿದರು.
ನಂ1 ರಾಜ್ಯ ಮಾಡುತ್ತಾರೆ ಬಿಎಸ್ವೈ
2008ರಲ್ಲಿ ಯಡಿಯೂರಪ್ಪ ಅವರಿಗೆ ಅಧಿಕಾರ ದೊರೆತಿತ್ತು ಆದರೆ ಆಗ ಕಾಂಗ್ರೆಸ್ ಮಾಡಿದ ಷಡ್ಯಂತ್ರದಿಂದಾಗಿ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡರು. ಈ ಬಾರಿ ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡಿ ಅವರು ರಾಜ್ಯವನ್ನು ನಂ1 ಸ್ಥಾನಕ್ಕೇರಿಸುತ್ತಾರೆ ಎಂದರು.
ಬಿಜೆಪಿಪರ ನೀವೆ ಪ್ರಚಾರ ಮಾಡಿ
ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪ್ರತಿಯೊಬ್ಬರು ನಿಮ್ಮ ಮೊಬೈಲ್ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿರುವ 50 ಮಂದಿಗೆ ಕರೆ ಮಾಡಿ ಬಿಜೆಪಿಗೆ ಮತ ಹಾಕಲು ಹೇಳಿ. ಬಿಜೆಪಿ ಪರವಾಗಿ ನೀವೇ ಪ್ರಚಾರ ಮಾಡಿ ಬಿಜೆಪಿಗೆ ಆಶೀರ್ವಾದ ಮಾಡಿ ಎಂದು ಅಮಿತ್ ಶಾ ಮನವಿ ಮಾಡಿದರು.
ಕಾರ್ಯಕರ್ತರು ಹೈರಾಣ
ಬಾಗಲಕೋಟೆಯಲ್ಲಿನ ಬಿಸಿಲಿನ ಝಳಕ್ಕೆ ಅಮಿತ್ ಶಾ ಕಾರ್ಯಕರ್ರಮಕ್ಕೆ ಬಂದಿದ್ದ ಕಾರ್ಯಕರ್ತರು ಹೈರಾಣಾದರು. ಬಿಸಿನಿಂದಾಗಿ ಚುರ್ಚಿಗಳನ್ನೇ ಕೊಡೆಗಳನ್ನಾಗಿ ಮಾಡಿಕೊಂಡು ಬಿಸಿನಿಂದ ತಪ್ಪಿಸಿಕೊಳ್ಳಲು ಕಾರ್ಯಕರ್ತರು ಪರದಾಡಿದರು. ಅಮಿತ್ ಶಾ ಕೂಡ ಕಾರ್ಯಕರ್ತರ ಬಾಧೆ ನೋಡಲಾರದೆ ಬೇಗ ಭಾಷಣ ಮುಗಿಸಿ ಬಿಸಿಲಿನಲ್ಲೂ ಕಾರ್ಯಕ್ರಮಕ್ಕೆ ಬಂದದ್ದಕ್ಕೆ ಧನ್ಯವಾದ ಅರ್ಪಿಸಿದರು.