ನನ್ನ ರಕ್ತದ ಕಣಕಣದಲ್ಲೂ ಕನ್ನಡ ಇದೆ: ಸಚಿವ ನಾರಾಯಣಗೌಡ
ಬಾಗಲಕೋಟೆ, ಫೆಬ್ರವರಿ 28: ನನ್ನ ರಕ್ತದ ಕಣಕಣದಲ್ಲೂ ಕನ್ನಡ ಇದೆ. ನಾನೊಬ್ಬ ಅಪ್ಪಟ ಕನ್ನಡಿಗ. ನಾನೊಬ್ಬ ಬಡ ಕುಟುಂಬದಲ್ಲಿ ಜನ್ಮ ಪಡೆದು, ಹೊಟ್ಟೆ ಬಟ್ಟೆಗಾಗಿ ಮಹಾರಾಷ್ಟ್ರಕ್ಕೆ ಹೋದವನು. ಮಹಾರಾಷ್ಟ್ರ ನನಗೆ ಅನ್ನ ಕೊಟ್ಟಿದೆ, ಬೆಳೆದಿದ್ದೀವಿ. ನಾನೊಬ್ಬನೆ ಅಲ್ಲ, ಮುಂಬೈಯಲ್ಲಿ 27 ಲಕ್ಷ ಜನ ಕನ್ನಡಿಗರಿದ್ದೇವೆ ಎಂದು ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ ಸ್ಪಷ್ಟನೆ ನೀಡಿದರು.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವವನನ್ನು ಸಚಿವ ಡಾ. ಕೆ ಸಿ ನಾರಾಯಣಗೌಡ ಉದ್ಘಾಟಿಸಿ, ಬಳಿಕ ಸಚಿವರು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಮಹಾರಾಷ್ಟ್ರಕ್ಕೆ ಜೈ ಅಂದ ಕರ್ನಾಟಕದ ಮಂತ್ರಿ: ಭಾರೀ ವಿರೋಧ
ತೋಟಗಾರಿಕೆ ಬಿಎಸ್ಸಿಯಲ್ಲಿ ಸುಷ್ಮಾ ಕೆ.ಎಂ. 15 ಚಿನ್ನದ ಪದಕ ಪಡೆದಿದ್ದಾರೆ. ವಿವಿಧ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಚಿವರು ಪದಕ ಪ್ರದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಸಚಿವರು ಮಾತನಾಡಿದರು.
ವಿವಾದಾತ್ಮಕ "ಜೈ ಮಹಾರಾಷ್ಟ್ರ' ಎಂದು ಹೇಳಿದ್ದರ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಮಹಾರಾಷ್ಟ್ರದಲ್ಲಿ ಬೆಳಿಗ್ಗೆ ಸಾಯಂಕಾಲ ಕನ್ನಡದಲ್ಲೇ ಕಾರ್ಯಕ್ರಮ ಮಾಡುತ್ತೇವೆ. ಕನ್ನಡವನ್ನೇ ನಾವು ಹೊಗಳುತ್ತೇವೆ. ಮೊನ್ನೆ ಅದು 17 ರಾಜ್ಯಗಳ ಡೆಲಿಗೇಟ್ಸ್ ಬಂದಿದ್ದರು. ನಾನೂ ಅಲ್ಲಿ ಎಲ್ಲ ರಾಜ್ಯಗಳನ್ನು ಹೊಗಳಿ ಮಾತನಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ನಾನು ಕೇವಲ ಮಹಾರಾಷ್ಟ್ರ ಅಷ್ಟೇ ಹೊಗಳಿಲ್ಲ. ಯಾರೋ ಕಿಡಿಗೇಡಿಗಳು ಕೇವಲ ಆ ವಿಡಿಯೋ ತುಣುಕನ್ನಷ್ಟೇ ಕಟ್ ಮಾಡಿ ತೋರಿಸಿದ್ದಾರೆ. ನನ್ನ ರಕ್ತದಲ್ಲಿ ಕನ್ನಡ ಅನ್ನೋದು ಇದೆ. ನಾನೊಬ್ಬ ಕನ್ನಡಿಗ. ಕರುನಾಡೇ ನನ್ನ ಕರ್ಮಭೂಮಿ ಎಂದು ಸಚಿವರು ಹೇಳಿದ್ದಾರೆ.
ಇನ್ನು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ನೇಮಕ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಈಗಷ್ಟೇ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಜೊತೆ ಮಾತನಾಡಿ ಶೀಘ್ರ ನೇಮಕ ಮಾಡಲಾಗುವುದು ಎಂದು ಸಚಿವರು ಹೇಳಿದರು.