ಜಮಖಂಡಿ ಕಾಂಗ್ರೆಸ್ ಬಂಡಾಯಕ್ಕೆ ಚಿಕಿತ್ಸೆ ನೀಡಿದ ಸಿದ್ದರಾಮಯ್ಯ
Recommended Video
ಬಾಗಲಕೋಟೆ, ಅಕ್ಟೋಬರ್ 16: ಜಮಖಂಡಿ ವಿಧಾನಸಭೆ ಉಪಚುನಾವಣೆಗೆ ಸಿದ್ಧತೆ ನಡೆಸಿದ ಬೆನ್ನಲ್ಲೇ ಉದ್ಭವಿಸಿದ್ಧ ಬಂಡಾಯದ ಬಿಸಿ ಅಷ್ಟೇ ಬೇಗನೆ ಆರಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನದ ಹೊಗೆಯನ್ನು ಎರಡೂ ಪಕ್ಷಗಳ ನಾಯಕರು ತಣ್ಣಗಾಗಿಸಿದ್ದಾರೆ.
ಕಾಂಗ್ರೆಸ್ನಲ್ಲಿ ಬಂಡಾಯದ ಕಾವು ಸ್ವಲ್ಪ ಜೋರಾಗಿತ್ತು. ಈ ಹಿಂದೆ ಶಾಸಕರಾಗಿದ್ದ ದಿ. ಸಿದ್ದು ನ್ಯಾಮಗೌಡ ಅವರ ಮಗ ಆನಂದ್ ನ್ಯಾಮಗೌಡ ಅವರಿಗೆ ಟಿಕೆಟ್ ನೀಡಿದ್ದು ಮತ್ತೊಬ್ಬ ಆಕಾಂಕ್ಷಿ ಸುಶೀಲ್ ಕುಮಾರ್ ಬೆಳಗಲಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಜಮಖಂಡಿಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಸಿದ್ದರಾಮಯ್ಯ ತಂತ್ರ
ಸೋಮವಾರ ಒಂದು ಸುತ್ತಿನ ಮಾತುಕತೆ ನಡೆಸಿದ್ದರೂ ಬಂಡಾಯ ಶಮನವಾಗಿರಲಿಲ್ಲ. ಮಂಗಳವಾರ ಮತ್ತೊಂದು ಸುತ್ತಿನ ಸಭೆ ಬಳಿಕ ಸಿದ್ದರಾಮಯ್ಯ ಅವರ ಮಾತಿಗೆ ಸುಶೀಲ್ ಕುಮಾರ್ ತಲೆಬಾಗಿದ್ದಾರೆ. ಈಗ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಮನಸ್ತಾಪಗಳನ್ನು ಮರೆತು ಒಟ್ಟಾಗಿ ಸಾಗುವ ದಿಸೆಯಲ್ಲಿ ತಯಾರಿ ಆರಂಭವಾಗಿದೆ.
ಹೈಕಮಾಂಡ್ ಸೂಚನೆ ಪಾಲಿಸುತ್ತೇನೆ
ಮಂಗಳವಾರ ಸಿದ್ದರಾಮಯ್ಯ ಅವರ ಜತೆ ಮಾತುಕತೆ ನಡೆಸಿದ ಬಳಿಕ ಸುಶೀಲ್ ಕುಮಾರ್ ಅವರ ಅಸಮಾಧಾನ ತಣ್ಣಗಾಯಿತು. ಹೈಕಮಾಂಡ್ ಸೂಚನೆಯನ್ನು ಪಾಲಿಸುತ್ತೇನೆ. ಕಾಂಗ್ರೆಸ್ನಲ್ಲಿಯೇ ಉಳಿದುಕೊಳ್ಳುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೇನೆ ಎಂದು ತಿಳಿಸಿದರು.
ಉಪಚುನಾವಣೆ: ಜಮಖಂಡಿ ಟಿಕೆಟ್ ಘೋಷಣೆ, ಬಿಜೆಪಿಗೆ ಬಂಡಾಯದ ತಲೆನೋವು
ಸ್ಥಾನಮಾನದ ಭರವಸೆ
ಸುಶೀಲ್ ಕುಮಾರ್ ಅವರು ಕಾಂಗ್ರೆಸ್ನಿಂದ ಟಿಕೆಟ್ ದೊರಕದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಉದ್ದೇಶಿಸಿದ್ದರು ಎನ್ನಲಾಗಿದೆ. ಆದರೆ, ಸ್ವತಃ ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿದ್ದರಿಂದ ಅವರ ಮಾತಿಗೆ ಇಲ್ಲವೆನ್ನಲಾಗದೆ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಅವರುಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಸಹ ಸಿದ್ದರಾಮಯ್ಯ ನೀಡಿದ್ದಾರೆ.
ಜಮಖಂಡಿಯಲ್ಲಿ ಗೆಲುವು ನನ್ನದೇ: ಸಿದ್ದು ನ್ಯಾಮಗೌಡ ಪುತ್ರ ವಿಶ್ವಾಸ
ಬಿಜೆಪಿ ಬಂಡಾಯ ಶಮನ
ಶ್ರೀಕಾಂತ್ ಕುಲಕರ್ಣಿ ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಬಿಜೆಪಿ ಮುಖಂಡ ಬಸವರಾಜ ಸಿಂಧೂರ ಕೂಡ ಬಂಡಾಯದ ಬಾವುಟ ಹಾರಿಸಿದ್ದರು. ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವುದಿಲ್ಲ ಎಂದು ಕೆಲವು ಮುಖಂಡರು ಹೇಳಿದ್ದರು.
ಬಹಿರಂಗ ಸಭೆಯಲ್ಲಿ ಭಾಗವಹಿಸಲು ಜಮಖಂಡಿಗೆ ಭೇಟಿ ನೀಡಿದ ಯಡಿಯೂರಪ್ಪ, ಬಸವರಾಜ ಸಿಂಧೂರ ಅವರ ಮನೆಗೆ ತೆರಳಿದರು. ಐದೇ ನಿಮಿಷದಲ್ಲಿ ಸಿಂಧೂರ ಅವರ ಅಸಮಾಧಾನ ತಣ್ಣಗಾಯಿತು. ಯಡಿಯೂರಪ್ಪ ಅವರು ನನ್ನ ತಂದೆ ಸಮಾನ. ಅವರು ಹೇಳಿದಂತೆ ಕೇಳುತ್ತೇನೆ. ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ. ಈ ಚುನಾವಣೆಯಲ್ಲಿ ಕುಲಕರ್ಣಿ ಅವರ ಗೆಲುವು ಖಚಿತ ಎಂದು ಬಸವರಾಜ ಸಿಂಧೂರ ತಿಳಿಸಿದರು.
ಪ್ರಚಾರದಲ್ಲಿ ಕಣ್ಣೀರು, ಮಳೆ
ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಮೆರವಣಿಗೆ ನಡೆಯಿತು. ಸಿದ್ದರಾಮಯ್ಯ, ಡಾ.ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಮಾಜಿ ಸಚಿವ ಎಂ.ಬಿ ಪಾಟೀಲ್, ಎಸ್.ಆರ್. ಪಾಟೀಲ್ ಮುಂತಾದವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ನ್ಯಾಮಗೌಡ ಅವರ ಕುಟುಂಬ ಸಿದ್ದು ನ್ಯಾಮಗೌಡ ಅವರನ್ನು ನೆನೆದು ಕಣ್ಣೀರಿಟ್ಟಿತು.
ಮಧ್ಯಾಹ್ನದ ವೇಳೆ ಯಡಿಯೂರಪ್ಪ ಅವರು ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಅವರ ಪರ ಬಹಿರಂಗ ಭಾಷಣ ನಡೆಸಿದರು. ಆದರೆ, ಕೆಲ ಹೊತ್ತಿನಲ್ಲೇ ಮಳೆ ಸುರಿಯಲಾರಂಭಿಸಿತು. ಬಿಜೆಪಿ ಬೆಂಬಲಿಗರು ಕುರ್ಚಿಗಳನ್ನು ತಲೆಯ ಮೇಲೆ ಹಿಡಿದುಕೊಂಡು ಮಳೆಯಿಂದ ರಕ್ಷಣೆ ಪಡೆದರು. ಮಳೆ ತೀವ್ರವಾದ ಕಾರಣ ಅಲ್ಲಿಂದ ದಿಕ್ಕಾಪಾಲಾಗಿ ಓಡಿದರು. ಹೀಗಾಗಿ ಯಡಿಯೂರಪ್ಪ ಕೂಡ ತರಾತುರಿಯಲ್ಲಿ ಭಾಷಣ ಮುಗಿಸಿ ಕಾರ್ ಹತ್ತಿದರು.