ಆನಂದ್ ಸಿಂಗ್ ಗೆ ಸೇರಿದ ಬಾದಾಮಿಯ ರೆಸಾರ್ಟ್ ಮೇಲೆ ಐಟಿ ದಾಳಿ
ಬಾಗಲಕೋಟೆ, ಮೇ 8: ಚುನಾವಣೆಗೂ ಮುನ್ನ ಬಾದಾಮಿಯಲ್ಲಿ ಕಾಂಗ್ರೆಸಿಗೆ ಐಟಿ ಇಲಾಖೆ ದೊಡ್ಡ ಆಘಾತವನ್ನೇ ನೀಡಿದೆ.
ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಅವರಿಗೆ ಸೇರಿದ, ಬಾದಾಮಿ ಹೊರವಲಯದಲ್ಲಿರುವ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
117 ಕೋಟಿ ಆಸ್ತಿ ಘೋಷಿಸಿದ ವಿಜಯನಗರ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್
ಸೋಮವಾರ ಮಧ್ಯರಾತ್ರಿ ಐಟಿ ಇಲಾಖೆ ಅಧಿಕಾರಿಗಳು ರೆಸಾರ್ಟ್ ಮೇಲೆ ದಾಳಿ ನಡೆಸಿದರು ಎಂದು ತಿಳಿದು ಬಂದಿದೆ. ಈ ವೇಳೆ ರೆಸಾರ್ಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಇದ್ದರು ಎಂದು ತಿಳಿದು ಬಂದಿದೆ.
ಐಟಿ ಇಲಾಖೆ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಳಿ ಸಮಯದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಸಿಎಂ ಇಬ್ರಾಹಿಂ ರೆಸಾರ್ಟ್ ನಲ್ಲಿದ್ದರು. ನಂತರ ರಾತ್ರಿ ಎರಡು ಗಂಟೆ ಸುಮಾರಿಗೆ ರೆಸಾರ್ಟ್ ನಿಂದ ಸಿಎಂ ಇಬ್ರಾಹಿಂ ಹೊರ ನಡೆದರು ಎಂದು ಗೊತ್ತಾಗಿದೆ.
ಸಿಆರ್ ಪಿಎಫ್ ಹಾಗೂ ಬಾದಾಮಿ ಸಿವಿಲ್ ಪೊಲೀಸ್ ರಿಂದ ರೆಸಾರ್ಟ್ ಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸುಮಾರು 8 ರಿಂದ 10 ಜನರ ತಂಡ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.