ಬಾದಾಮಿ ಜನತೆಗೆ ಕ್ಷೇತ್ರ ಬದಲಾವಣೆಯ ಮುನ್ಸೂಚನೆ ಕೊಟ್ಟ ಸಿದ್ದರಾಮಯ್ಯ?
ಬಾಗಲಕೋಟೆ, ಏಪ್ರಿಲ್ 7: ಕಳೆದ ಕೆಲವು ತಿಂಗಳಿನಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಎಲ್ಲಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿತ್ತು.
ಖುದ್ದು ಸಿದ್ದರಾಮಯ್ಯನವರೇ ಐದಾರು ಕ್ಷೇತ್ರದಿಂದ ಸ್ಪರ್ಧಿಸಲು ಒತ್ತಾಯ ಕೇಳಿ ಬರುತ್ತಿದೆ ಎಂದು ಹೇಳಿದ್ದರು. ಅದರಲ್ಲೂ, ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್, ನನ್ನ ಕ್ಷೇತ್ರದಿಂದಲೇ ಸ್ಪರ್ಧಿಸಲಿ, ಐವತ್ತು ಸಾವಿರ ಲೀಡ್ ನಿಂದ ಗೆಲ್ಲಿಸಿಕೊಂಡ ಬರುವ ಜವಾಬ್ದಾರಿ ನನ್ನದು ಎನ್ನುವ ಓಪನ್ ಆಫರ್ ಕೊಟ್ಟಿದ್ದರು.
ರಾಜ್ಯದ 'ಕೈ’ ನಾಯಕರಿಗೆ 'ದಳಪತಿ’ಗಳದ್ದೇ ಭಯ!
ಬಾದಾಮಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ದ ಜಿದ್ದಾಜಿದ್ದಿನ ಫೈಟಿನಿಂದ ಗೆದ್ದಿದ್ದ ಸಿದ್ದರಾಮಯ್ಯ, ಶಾಸಕರಾಗಿ ಹಲವು ಅಭಿವೃದ್ದಿ ಕೆಲಸವನ್ನು ಮಾಡಿದ್ದಾರೆ ಎನ್ನುವುದು ಆ ಕ್ಷೇತ್ರದ ಜನರ ಮಾತು.
ಗುರುವಾರ (ಏ 7) ಬಾದಾಮಿಯಲ್ಲಿ ವಿವಿಧ ಅಭಿವೃದ್ದಿ ಮತ್ತು ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ಚುನಾವಣೆಯಲ್ಲಿ ಇಲ್ಲಿಂದ ಸ್ಪರ್ಧಿಸುವುದಿಲ್ಲ ಎನ್ನುವ ಪರೋಕ್ಷ ಸಂದೇಶ ರವಾನಿಸಿದ್ರಾ ಎನ್ನುವ ಚರ್ಚೆ ಆರಂಭವಾಗಿದೆ.
ಬೊಮ್ಮಾಯಿ ರಾಜೀನಾಮೆ ನೀಡಲಿ ಎಂದ ಸಿದ್ದು, ರಾಜ್ಯದಲ್ಲಿ ಸಿಎಂ ಇರುವುದೇ ಡೌಟ್ ಎಂದ ಎಚ್ಡಿಕೆ
ಚಿಮ್ಮನಕಟ್ಟಿಯವರು ಸಿದ್ದರಾಮಯ್ಯನವರಿಗೆ ಬಿಟ್ಟು ಕೊಟ್ಟಿದ್ದರು
ಕಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರವನ್ನು ಒಲ್ಲದ ಮನಸ್ಸಿನಿಂದ ಚಿಮ್ಮನಕಟ್ಟಿಯವರು ಸಿದ್ದರಾಮಯ್ಯನವರಿಗೆ ಬಿಟ್ಟು ಕೊಟ್ಟಿದ್ದರು. ಅವರಿಗೆ ಆ ಸಮಯದಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಲಿಲ್ಲ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದ ತುಂಬಿದ ಸಭೆಯಲ್ಲೇ ಚಿಮ್ಮನಕಟ್ಟಿಯವರು ಸಿದ್ದರಾಮಯ್ಯನವರನ್ನು ಈ ಕ್ಷೇತ್ರದಲ್ಲಿ ಮುಂದೆ ನಿಲ್ಲಬೇಡಿ ಎಂದು ತಾಕೀತು ಮಾಡಿದ್ದರು. ಈ ಘಟನೆ ಸಿದ್ದರಾಮಯ್ಯನವರಿಗೆ ತೀವ್ರ ಮುಜುಗರವನ್ನು ತಂದೊಡ್ಡಿತ್ತು.
ಕ್ಷೇತ್ರ ಬದಲಾವಣೆಯ ಮುನ್ಸೂಚನೆ ಕೊಟ್ಟ ಸಿದ್ದರಾಮಯ್ಯ?
ಬಾದಾಮಿಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ಬಾದಾಮಿ ಕ್ಷೇತ್ರದ ಜನತೆ ತುಂಬಾ ಒಳ್ಳೆಯವರು, ಆದರೆ ನನಗೆ ಈ ಕ್ಷೇತ್ರ ಬಹಳ ದೂರ. ಇದೊಂದು ವಿಚಾರ ಬಿಟ್ಟರೆ, ಮಿಕ್ಕೆಲ್ಲಾ ವಿಚಾರಗಳಲ್ಲಿ ತಕರಾರು ಇಲ್ಲ. ಬರೀ ನಾನು ಈ ಕ್ಷೇತ್ರದ ಶಾಸಕನಾಗಿದ್ದರೆ ವಾರಕ್ಕೊಮ್ಮೆ ಇಲ್ಲಿಗೆ ಬರಬಹುದಾಗಿತ್ತು. ಆದರೆ, ನನಗೆ ಇತರ ಜವಾಬ್ದಾರಿಗಳೂ ಇರುವುದರಿಂದ ವಾರಕ್ಕೊಮ್ಮೆ ಬರಲಾಗುತ್ತಿಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.
ಅಧಿವೇಶನ ಈ ಬಾರಿ ಮೂವತ್ತು ದಿನಕ್ಕೂ ಹೆಚ್ಚುದಿನ ನಡೆಯಿತು
"ನಾನು ವಿರೋಧ ಪಕ್ಷದ ನಾಯಕನಾಗಿರುವುದರಿಂದ ಇತರ ಜವಾಬ್ದಾರಿಗಳೂ ಇರುತ್ತವೆ. ಅಧಿವೇಶನ ಈ ಬಾರಿ ಮೂವತ್ತು ದಿನಕ್ಕೂ ಹೆಚ್ಚುದಿನ ನಡೆಯಿತು. ಇದಕ್ಕೂ ಮುನ್ನ ಮೇಕೆದಾಟು ಪಾದಯಾತ್ರೆ ನಡೆಯಿತು. ಇದರಿಂದಾಗಿ ಕ್ಷೇತ್ರಕ್ಕೆ ಬರುವುದಾದರೂ ಹೇಗೆ? ನಾವು ಎದುರಿಸುವ ಸಮಸ್ಯೆಗಳನ್ನೆಲ್ಲಾ ಜನರ ಮುಂದೆ ಹೇಳಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ನಡೆಯುತ್ತಿದ್ದರೂ, ನನಗೆ ಆತ್ಮತೃಪ್ತಿ ಆಗಬೇಕಲ್ಲವೇ"ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರಿನಿಂದ ಕ್ಷೇತ್ರ ದೂರ ಎನ್ನುವ ಮಾತನ್ನು ಸಿದ್ದರಾಮಯ್ಯ ಆಡಿದ್ದಾರೆ
"ಕ್ಷೇತ್ರ ದೂರ ಎನ್ನುವ ವಿಚಾರವನ್ನು ಆಲೋಚಿಸುತ್ತಿದ್ದೇನೆ, ಅದು ಬಿಟ್ಟರೆ ಈ ಕ್ಷೇತ್ರದ ಜನತೆ ನನಗೆ ಸಾಕಷ್ಟು ಪ್ರೀತಿ ವಿಶ್ವಾಸವನ್ನು ತೋರಿಸಿದ್ದಾರೆ"ಎಂದು ಬಾದಾಮಿ ಜನತೆಯ ಮುಂದೆ ಮಾತನಾಡಿದ್ದಾರೆ. ಬೆಂಗಳೂರಿನಿಂದ ಕ್ಷೇತ್ರ ದೂರ ಎನ್ನುವ ಮಾತನ್ನು ಸಿದ್ದರಾಮಯ್ಯ ಆಗಾಗ ಆಡುವುದುಂಟು. ಹಾಗಾಗಿ, ಅವರು ಬಾದಾಮಿಯಿಂದ ಸ್ಪರ್ಧಿಸುವುದಿಲ್ಲ ಎನ್ನುವ ಮಾತು ಆವಾಗಾವಾಗ ಮುನ್ನಲೆಗೆ ಬರುತ್ತಲೇ ಇದೆ.