ವಾಯುಪಡೆಯ ಸೇವೆಗೆ ಕರ್ನಾಟಕದ ಹೆಮ್ಮೆಯ ಮುಧೋಳ ಶ್ವಾನ
ಬಾಗಲಕೋಟೆ, ಫೆಬ್ರವರಿ 16: ಈಗಾಗಲೇ ಗಡಿಯಲ್ಲಿನ ಕಾವಲು ಚಟುವಟಿಕೆ, ಅಪರಾಧಿಗಳ ಪತ್ತೆ ಮುಂತಾದ ರಕ್ಷಣಾ ಕಾರ್ಯಗಳಿಗೆ ಸಂಬಂಧಿಸಿದಂತೆ ನೆರವಾಗುತ್ತಿರುವ ಕರ್ನಾಟಕದ ಹೆಮ್ಮೆಯ ಮುಧೋಳ ತಳಿಯ ಶ್ವಾನಗಳನ್ನು ಭಾರತೀಯ ವಾಯುಪಡೆ ಮತ್ತೊಂದು ಮಹತ್ವದ ಕಾರ್ಯಕ್ಕೆ ಬಳಸಿಕೊಳ್ಳುತ್ತಿದೆ.
ವಿಮಾನ ನಿಲ್ದಾಣಗಳ ರನ್ವೇಗಳಲ್ಲಿ ವಿಮಾನಗಳ ಚಲನೆಗೆ ಅಡ್ಡಿಪಡಿಸುವ ಮೂಲಕ ದೊಡ್ಡ ತಲೆನೋವಾಗಿರುವ ಪಕ್ಷಿಗಳು ಹಾಗೂ ಪ್ರಾಣಿಗಳನ್ನು ಅಲ್ಲಿಂದ ಓಡಿಸಲು ಮುಧೋಳ ತಳಿಯ ಶ್ವಾನಗಳನ್ನು ವಾಯುಪಡೆ ನಿಯೋಜಿಸಿದೆ.
ಭಾರತೀಯ ಸೇನೆ ಸೇರಲು ಸಜ್ಜಾದ ದೇಸಿ ತಳಿ ನಾಯಿ 'ಮುಧೋಳ ಹೌಂಡ್'
ಬಾಗಲಕೋಟೆಯ ತಿಮ್ಮಾಪುರದ ಶ್ವಾನ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಶನಿವಾರ ಮುಧೋಳ ತಳಿಯ ಒಟ್ಟು ನಾಲ್ಕು ಮರಿಗಳನ್ನು ವಾಯುಸೇನೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಒಂದು ತಿಂಗಳ ಎರಡು ಗಂಡು ಹಾಗೂ ಎರಡು ಹೆಣ್ಣು ನಾಯಿಮರಿಗಳನ್ನು ಉತ್ತರ ಪ್ರದೇಶದ ಆಗ್ರಾದ ವಾಯುಪಡೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಲು ಹಸ್ತಾಂತರಿಸಲಾಯಿತು. ಈ ಮರಿಗಳಿಗೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಒಂದು ವರ್ಷ ತರಬೇತಿ ನೀಡಲಾಗುತ್ತದೆ.
ಅಪರಾಧ ಪತ್ತೆಗೆ ಬಾಗಲಕೋಟೆ ಪೊಲೀಸರ ಜೊತೆ ಸೇರಿದ 'ಕ್ರಿಶ್'
ಐದು ಕೋಟಿ ರೂ ಅನುದಾನ
ಸ್ವಾತಂತ್ರ್ಯಪೂರ್ವದಿಂದಲೂ ಮುಧೋಳ ನಾಯಿಗಳು ಪ್ರಸಿದ್ಧಿಪಡೆದಿವೆ. ಈ ತಳಿಗಳು ನಶಿಸುತ್ತಿವೆ ಎಂದು ಕೆಲವು ರೈತರು ಹೇಳಿದ್ದರು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೂಲಕ ನಾನು ಬಜೆಟ್ನಲ್ಲಿ ಐದು ಕೋಟಿ ರೂ ಅನುದಾನ ಘೋಷಿಸಿ ತಿಮ್ಮಾಪುರದಲ್ಲಿ ಶ್ವಾನ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಆರಂಭಿಸಿದ್ದೇನೆ. ಇಡೇ ದೇಶ ಮೆಚ್ಚುವಂತೆ ಮುಧೋಳ ತಳಿಗಳನ್ನು ಅಭಿವೃದ್ಧಿಪಡಿಸಿದ್ದೇವೆ' ಎಂದು ಕಾರಜೋಳ ಹೇಳಿದರು.
ಬೆಲೆಕಟ್ಟಲಾಗದ ಸೇವೆ
'ಮುಧೋಳ ಶ್ವಾನಗಳು ತಮ್ಮ ಮಾಲೀಕರಿಗೆ ನಿಷ್ಠರಾಗಿರುವುದಕ್ಕೆ ಮತ್ತು ಅದ್ಭುತ ಚುರುಕಿನ ಬೇಟೆಗೆ ಹೆಸರಾಗಿವೆ. ಈ ತಳಿಯು ಶಕ್ತಿ, ತೀಕ್ಷಣತೆ ಮತ್ತು ಚುರುಕುತನಗಳಿಗೆ ಹೆಸರುವಾಸಿ. ಅವುಗಳು ನೀಡುತ್ತಿರುವ ಸೇವೆಗೆ ಬೆಲೆಕಟ್ಟಲಾಗದು' ಎಂದು ಸಿಆರ್ಐಸಿ ಮುಖ್ಯಸ್ಥ ಮಹೇಶ್ ಅಕಾಶಿ ತಿಳಿಸಿದರು.
ಏಳು ಮರಿಗಳಿಗೆ ಬೇಡಿಕೆ
ವಾಯುನೆಲೆಯಲ್ಲಿನ ಪ್ರಾಣಿ ಪಕ್ಷಿಗಳ ಹಾವಳಿಯನ್ನು ತಡೆಯಲು ಈ ನಾಯಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಏಳು ನಾಯಿಗಳಿಗೆ ಬೇಡಿಕೆ ಇರಿಸಲಾಗಿತ್ತು. ಒಪ್ಪಂದಕ್ಕೆ ಅನುಗುಣವಾಗಿ ಆರು ತಿಂಗಳ ಬಳಿಕ ಮತ್ತೆ ಮೂರು ನಾಯಿಗಳನ್ನು ನೀಡಲಾಗುವುದು.
Recommended Video
ಪ್ರಧಾನಿ ಮೋದಿ ಮೆಚ್ಚುಗೆ
ಮುಧೋಳ ಶ್ವಾನಗಳು ಭಾರತೀಯ ಸೇನೆ, ಸಿಆರ್ಪಿಎಫ್, ಸಿಐಎಸ್ಎಫ್, ಬಿಎಸ್ಎಫ್, ಎಸ್ಎಸ್ಬಿ, ಐಟಿಬಿಪಿ ಹಾಗೂ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಯಾವುದೇ ಹವಾಮಾನ ಪರಿಸ್ಥಿತಿಯಲ್ಲಿಯೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಶಕ್ತಿಯುಳ್ಳುವ ಈ ನಾಯಿಗಳಿಗೆ ಹೆಚ್ಚಿನ ಆರೈಕೆಯ ಅಗತ್ಯವೂ ಇರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ 'ಮನ್ ಕಿ ಬಾತ್'ನಲ್ಲಿ ಮುಧೋಳ ತಳಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.