ಕುಡಿತಕ್ಕೆ ದುಡ್ಡು ಕೊಟ್ಟಿಲ್ಲವೆಂದು ಹೆಂಡತಿಗೆ ಅಪಘಾತ ಮಾಡಿ ಕೊಂದ
ಬಾಗಲಕೋಟೆ, ಮೇ 05: ಕುಡಿಯಲು ದುಡ್ಡು ಕೊಡಲಿಲ್ಲ ಎಂದು ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಅಪಘಾತ ಮಾಡಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಈತನ ಕುಡಿತದ ಚಟಕ್ಕೆ ಹೆಂಡತಿ ಬಲಿಯಾಗಿದ್ದಾಳೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಶಾರದಾ ಚವ್ಹಾಣ ಎನ್ನಲಾಗಿದೆ. ಕೊರೊನಾ ಸೋಂಕಿನ ಕಾರಣ ಲಾಕ್ ಡೌನ್ ಹೇರಿದ್ದರಿಂದ ಅಂದಿನಿಂದ ಮದ್ಯ ಮಾರಾಟ ಬಂದ್ ಆಗಿತ್ತು. ಮದ್ಯ ಸಿಗದಿದ್ದಕ್ಕೆ ಈತ ಮನೆಗೆ ಬಂದು ಹೆಂಡತಿಯೊಂದಿಗೆ ಪ್ರತಿ ದಿನ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ.
ನಿನ್ನೆಯಿಂದ ಮದ್ಯ ಮಾರಾಟ ಆರಂಭಗೊಂಡಿದ್ದು, ಶಾರದಾ ಇಳಕಲ್ ನಗರದ ಗಲ್ಲಿಯೊಂದರಲ್ಲಿ ಬಾಂಡೆ ತಿಕ್ಕುವ ಕೆಲಸಕ್ಕೆ ಹೋಗಿ ಮರಳಿ ಬರುವಾಗ ಕುಡಿಯಲು ಈತ ಹಣ ಕೇಳಿದ್ದಾನೆ. ಹಣ ಕೊಡದಿದ್ದಕ್ಕೆ ಸಿಟ್ಟಾದ ಈತ ಸ್ಕೂಟರ್ ಡಿಕ್ಕಿ ಹೊಡೆಸಿಕೊಂಡು ಹೋಗಿದ್ದಾನೆ. ಈ ಸಂದರ್ಭ ಶಾರದಾಗೆ ತಲೆ, ಭುಜಕ್ಕೆ ಗಂಭೀರ ಗಾಯಗಳಾಗಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಇಂದು ಸಾವನ್ನಪ್ಪಿದ್ದಾರೆ. ಇವರ ಮಗ ರಾಮು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು, ಬೈಕನ್ನು ಜಪ್ತಿ ಮಾಡಿದ್ದಾರೆ. ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.