ಬಾಗಲಕೋಟೆ: ರಸ್ತೆ ಅಗಲೀಕರಣಕ್ಕಾಗಿ ಮರಗಳ ಹನನ
ಬಾಗಲಕೋಟೆ, ಜೂ 13: ಇಡೀ ವಿಶ್ವವೇ ಪರಿಸರ ದಿನ ಆಚರಿಸಿ ಇನ್ನೂ ಒಂದು ವಾರ ಕಳೆದಿಲ್ಲ. ಕಾಡು ಉಳಿಸಿ ನಾಡು ಬೆಳಸಿ ಅನ್ನೋ ಘೋಷವಾಕ್ಯದಂತೆ ಎಲ್ಲೆಡೆ ಸಸಿ ನೆಡುವ ಕಾರ್ಯ ನಡೆದಿದೆ. ಆದರೆ ಆ ಊರಲ್ಲಿ ಮಾತ್ರ ಇದ್ಯಾವುದು ಲೆಕ್ಕಕ್ಕೆ ಇಲ್ಲದಂತಾಗಿದೆ. ಪರಿಸರ ದಿನಾಚರಣೆ ನಡೆದು ಒಂದು ವಾರದೊಳಗೆ ಬೃಹತ್ ಮರಗಳು ನೆಲಕ್ಕುರುಳಿವೆ. ರಸ್ತೆ ಅಗಲೀಕರಣಕ್ಕಾಗಿ ದೊಡ್ಡ ದೊಡ್ಡ ಮರಗಳನ್ನ ಕತ್ತರಿಸಲಾಗಿದೆ.
ಜೂನ್ 5 ರಂದು ಎಲ್ಲೆಡೆ ಪರಿಸರ ದಿನಾಚರಣೆ ಸಂಭ್ರಮ ಮಾಡಲಾಗಿತ್ತು. ಪರಿಸರ ಉಳಿಸಿ, ಬೆಳೆಸುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳ ಭರಾಟೆ ನಡೆದಿದ್ದವು. ಆದ್ರೆ ಆಚರಣೆ ನಡೆದು ಒಂದು ವಾರದೊಳಗೆ ಬನಹಟ್ಟಿ-ಜಮಖಂಡಿ ಮುಖ್ಯರಸ್ತೆಯಲ್ಲಿ ಮಾತ್ರ ಬೃಹತ್ ಮರಗಳ ಮಾರಣಹೋಮ ನಡೆದಿದೆ.
ರಸ್ತೆ ಅಗಲೀಕರಣದ ನೆಪದಲ್ಲಿ ಬನಹಟ್ಟಿಯ ಜಮಖಂಡಿ- ಕಾಗವಾಡ ರಾಜ್ಯ ಹೆದ್ದಾರಿ ಎರಡು ಬದಿಯಲ್ಲಿ ಇದ್ದ 76 ಬೃಹತ್ ಮರಗಳನ್ನು ಕತ್ತರಿಸಿ ಹಾಕಲಾಗುತ್ತಿದೆ. ಕಳೆದ ಒಂದು ವಾರದಲ್ಲಿ ಮರಗಳನ್ನು ನಾಶ ಪಡಿಸುವ ಕೆಲಸ ನಡೆದಿದ್ದು, ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಮರಗಳಿಲ್ಲದೇ ಬಣಬಣ ಎನ್ನುತ್ತಿದೆ ಜಾಗ
ಬನಹಟ್ಟಿ-ಜಮ ಖಂಡಿಯ ಮುಖ್ಯರಸ್ತೆಯಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದಲೂ ರಸ್ತೆಗೆ ನೆರಳಿನ ಹಂದರ ಹೊದಿಸಿ, ಸಂಚಾರಿಗಳನ್ನು ಕೈಬೀಸಿ ಸ್ವಾಗತಿಸುತ್ತಿದ್ದ ಬೃಹತ್ ಮರಗಳನ್ನು ಕಡಿದು ಹಾಕಲಾಗಿದೆ. ಇದರಿಂದ ಇಡೀ ರಸ್ತೆ ಬೋಳು ಬೋಳಾಗಿ ಕಾಣಿಸ್ತಿದೆ. ಬೆಳೆದು ನಿಂತಿದ್ದ ಬೃಹತ್ ಮರಗಳಿಗೆ ಕೊಡಲಿ ಪೆಟ್ಟು ನೀಡುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ.
ಲೋಕೋಪಯೋಗಿ ಇಲಾಖೆ ಮನವಿ ಮೇರೆಗೆ
ಇನ್ನು ಬನಹಟ್ಟಿಯ ವೈಭವ ಥಿಯೇಟರ್ನಿಂದ ಆಸಂಗಿ ಕ್ರಾಸ್ವರೆಗೂ ಇರುವ 1.26 ಕಿ.ಮೀ. ರಸ್ತೆ ಅಗಲೀಕರಣ ನಡೆದಿದ್ದು, ಲೋಕೋಪಯೋಗಿ ಇಲಾಖೆ ಮನವಿ ಮೇರೆಗೆ ಅರಣ್ಯ ಇಲಾಖೆ ಅಲ್ಲಿದ್ದ ಮರಗಳನ್ನು ತೆರವುಗೊಳಿಸಲು ಮುಂದಾಗಿ ಇದಕ್ಕೆ ಗುತ್ತಿಗೆಯನ್ನು ನೀಡಿದೆ. ಗುತ್ತಿಗೆದಾರರು ಅದನ್ನು ಈ ಪರಿಸರ ದಿನಾಚರಣೆ ಸಂದರ್ಭದಲ್ಲೆ ಕತ್ತರಿಸಿ ಹಾಕುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮರಗಳಿಲ್ಲದೇ ಆ ಜಾಗವೆಲ್ಲ ಬಣಬಣ
ಕಳೆದ ಒಂದು ವಾರದ ಹಿಂದಷ್ಟೆ ಈ ರಸ್ತೆಯಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಬೃಹತ್ ಮರಗಳು ನೋಡ ನೋಡುತ್ತಿದ್ದಂತೆ ನೆಲಕ್ಕುರುಳಿದ್ದು, ಮರಗಳಿಲ್ಲದೇ ಆ ಜಾಗವೆಲ್ಲ ಬಣಬಣ ಎನ್ನುತ್ತಿದೆ. 60 ರಿಂದ 70 ವರ್ಷಗಳ ಮರಗಳು ಇದ್ದು, ಮುಖ್ಯವಾಗಿ ಆಲ, ಅರಳಿ, ಬೇವು, ಹುಣಸಿ, ಮರಗಳು ಇದೀಗ ಕಣ್ಮರೆ ಆಗಿವೆ. ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
60-70 ವರ್ಷದಷ್ಟು ಹಳೆಯದಾದ ಮರ
ಒಟ್ಟಿನಲ್ಲಿ, ಪರಿಸರ ಉಳಿಸುವ ನಿಟ್ಟಿನಲ್ಲಿ ಎಲ್ಲೆಡೆ ಪರಿಸರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಇಂತಹ ಸಂದರ್ಭದಲ್ಲೇ 60-70 ವರ್ಷದಷ್ಟು ಹಳೆಯದಾದ ಮರಗಳನ್ನ, ರಸ್ತೆ ಅಗಲೀಕರಣ ನೆಪದಲ್ಲಿ ಕಡಿದು ಹಾಕುತ್ತಿರೋದು ಎಷ್ಟು ಸರಿ ಅನ್ನೋದು ಸ್ಥಳೀಯರ ಪ್ರಶ್ನೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಮರಗಳ ಉಳಿಸುವ ಕೆಲಸ ಮಾಡಬೇಕಿದೆ.
Recommended Video