ಬಾಗಲಕೋಟೆಯಲ್ಲಿ ಸತತ ಜಿಟಿಜಿಟಿ ಮಳೆ: ಅನ್ನದಾತನ ಕೈ ಹಿಡಿದ ಹೆಸರು
ಬಾಗಲಕೋಟೆ, ಜುಲೈ.22: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಷ್ಟರಲ್ಲಿಯೇ ಸತತ ಜಿಟಿ ಜಿಟಿ ಮಳೆ ಜಿಲ್ಲೆಯಾದ್ಯಂತ ಸುರಿಯುತ್ತಿರುವುದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬಿತ್ತಿದ ಹೆಸರು ಬೆಳೆಗೆ ಮಳೆಯಾಗದೇ, ಜಿಲ್ಲೆಯ ರೈತರು ಕಂಗಾಲಾಗಿದ್ದರು. ಆದರೆ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಹೆಸರು ಬೆಳೆಯ ಫಸಲು ರೈತರ ಕೈ ಹಿಡಿದಿದೆ. ಮುಂಗಾರು ಪೂರ್ವ ಹಾಗೂ ಮುಂಗಾರ ಆರಂಭದಲ್ಲಿ ಜಿಲ್ಲೆಯಲ್ಲಿ ರೈತರ ಜಮೀನಿಗೆ ಮಳೆಯ ಸಿಂಚನವಾಗಿದ್ದರಿಂದ ರೈತರು ಒಳ್ಳೆಯ ಬೆಳೆಯಾದ ಹೆಸರನ್ನು ಬೆಳೆದಿದ್ದರು.
ಭತ್ತಕ್ಕೆ 200 ರೂ. ಕನಿಷ್ಠ ಬೆಂಬಲ ಬೆಲೆ: ಕೇಂದ್ರ ಸಂಪುಟ ಅನುಮೋದನೆ
ಆದರೆ ಬಿತ್ತಿದ ನಂತರ ಸರಿಯಾಗಿ ಮಳೆಯಾಗಲಿಲ್ಲವೆಂಬಂತೆ ರೈತರು ಮುಗಿಲಿನತ್ತ ಚಿತ್ತ ನೆಟ್ಟಿದ್ದರು ಆದರೆ ಕಳೆದೊಂದು ವಾರದಿಂದ ಒಂದು ದಿನ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಹೀಗಾಗಿ ಜಿಲ್ಲೆಯ ರೈತರು ಸಂತಸವಾಗಿದ್ದಾರೆ.
ಬೀಜ ಖರೀದಿ ಜೋರು
ಇನ್ನೇನು ಚೊಲೋ ಮಳೆಯಾಗುತ್ತಿದೆ ಎಂದು ತೊಗರಿ, ಸೂರ್ಯಪಾನ, ಗೋವಿನ ಜೋಳ ಬೆಳೆಯಲು ರೈತರು ಬೀಜ ಖರೀದಿಯಲ್ಲಿದ್ದಾರೆ. ಅದರ ಜತೆಗೆ ಮಳೆಯಾಗಿದ್ದರಿಂದ ಭೂಮಿಯನ್ನು ಹದಗೊಳಿಸಿ ಸಿದ್ದಪಡಿಸಿದ್ದಾರೆ.
ಉತ್ತಮ ಮಳೆಯಾಗಬೇಕು ನಾಡಿನ ಜನ ಸಮೃದ್ದಿಯಿಂದ ಇರಲಿ ಎಂದು ಗೊಂಬೆಗಳ ಮದುವೆ, ಹೋಮಹವನ ಪೂಜೆ ಪುನಸ್ಕಾರ ಸಹ ಅಲ್ಲಲ್ಲಿ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.
ನಿಲೇಶ ಛಬ್ಬಿ ಅನಿಸಿಕೆ
"ಕಾಲಕಾಲಕ್ಕೆ ಹಾಗೂ ಆಯಾ ಮಳೆಯ ನಿರೀಕ್ಷೆ ಇಟ್ಟುಕೊಂಡು ಬೆಳೆ ಬೆಳೆಯಲು ಉಳುಮೆ ಮಾಡಿರುತ್ತೇವೆ. ಆದರೆ ಸಕಾಲಕ್ಕೆ ಮಳೆಯಾಗಲಿಲ್ಲವೆಂದರೆ ರೈತರು ತೊಂದರೆಗೀಡಾಗಿತ್ತಾರೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಮಕ್ಕಳ ಹಾಗೂ ಕುಟುಂಬದ ನಿರ್ವಹಣೆಗೆ ಉಳ್ಳವರ ಹಾಗೂ ಬ್ಯಾಂಕು, ಸೊಸೈಟಿಗಳಲ್ಲಿ ಸಾಲ ಮಾಡಬೇಕಾಗುತ್ತದೆ.
ಮಳೆಯಾದರೆ ರೈತರು ಬದುಕುತ್ತಾರೆ. ಇಲ್ಲವಾದರೆ ಜೀವನ ನಡೆಸುವುದು ಕಷ್ಟ ಆಗತೈತಿ. ಆದರೆ ಈ ಬಾರಿ ಮುಂಗಾರು ಹಾಗೂ ನಂತರ ಮಳೆ ಚೆನ್ನಾಗಿ ಆಗಿದೆ. ಬಿತ್ತಿದ ಬೆಳೆ ಕೈ ಸೇರಿದರೆ ಸ್ವಲ್ಪ ಜೀವಕ್ಕೆ ಚೊಲ ಆಗತೈತಿ" ಎಂದು ಮುಚಖಂಡಿ ಗ್ರಾಮದ ನಿಲೇಶ ಛಬ್ಬಿ ಒನ್ ಇಂಡಿಯಾಕ್ಕೆ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕರು ಏನ್ ಹೇಳ್ತಾರೆ?
"ಜಿಲ್ಲೆಯಲ್ಲಿ 185 .4 ಮೀಮೀ ರಷ್ಟು ವಾಡಿಕೆಯಂತೆ ಮಳೆ ಆಗಬೇಕಿತ್ತು. ಆದರೆ ಸದ್ಯ ಶೇ 99ರಷ್ಟು ಮಳೆಯಾಗಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಬಿತ್ತಿರುವ ಹೆಸರು ಬೆಳೆ ಉತ್ತಮ ಫಸಲು ನೀಡಲಿದೆ.
ಇನ್ನು ತೊಗರಿ, ಗೋವಿನಜೋಳ, ಸೂರ್ಯಪಾನ ಬೆಳೆಗೂ ಈ ಮಳೆ ಅನುಕೂಲವಾಗಲಿದೆ" ಎಂದು ಬಾಗಲಕೋಟೆ ಜಂಟಿ ಕೃಷಿ ನಿರ್ದೇಶಕ ರಮೇಶ ಕುಮಾರ ತಿಳಿಸಿದರು.
ತಾಲೂಕಾವಾರು ಮಳೆ: ವಾಡಿಕೆ ಮಳೆ ಮಿ.ಮೀ.
ಬಾದಾಮಿ-200.6-
213.1
ಬಾಗಲಕೋಟೆ-164-166
ಬೀಳಗಿ-188.2-169.3
ಹುನಗುಂದ-196.5-178.2
ಜಮಖಂಡಿ-178.2-178.7
ಮುಧೋಳ-
177.3-182.2