ಸಿದ್ದು ನ್ಯಾಮಗೌಡ ಅಂತಿಮ ದರ್ಶನ: ಕಂಬನಿ ಮಿಡಿದ ಜನ
ಬಾಗಲಕೋಟೆ , ಮೇ. 29: ಬ್ಯಾರೇಜ್ ಹಿರೋ ಎಂದು ಖ್ಯಾತಿಯಾಗಿದ್ದ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡರ ಅಂತ್ಯಕ್ರಿಯೆ ಲಕ್ಷಾಂತರ ಜನರ ಸಮ್ಮುಖದಲ್ಲಿ ಇಂದು ಲಿಂಗಾಯತ ಸಮಾಜದ ವಿಧಿ ವಿಧಾನಗಳ ಮೂಲಕ ಜಮಖಂಡಿ ಶುಗರ್ಸ್ ಆವರಣದಲ್ಲಿ ನಡೆಯಿತು.
ಸಿದ್ದು ನ್ಯಾಮಗೌಡ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ: ಸಿದ್ದರಾಮಯ್ಯ
ಸಕಲ ಸರ್ಕಾರಿ ಗೌರವದೊಂದಿಗೆ ಜಿಲ್ಲಾಡಳಿತ ಗೌರವ ಸಲ್ಲಿಸಿತು. ಜಿಲ್ಲಾಧಿಕಾರಿ ಕೆ.ಜೆ.ಶಾಂತಾರಾಮ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಸರ್ಕಾರದಿಂದ ಗೌರವ ಸಲ್ಲಿಸಿದರು.
ನಾನಾ ಭಾಗಗಳಿಂದ ಆಗಮಿಸಿದ ಜನ
ನಿನ್ನೆ ಬೆಳಗಿನ ಜಾವ ಕಾರು ಅಪಘಾತದಲ್ಲಿ ಶಾಸಕ ಸಿದ್ದು ನ್ಯಾಮಗೌಡರು ವಿಧಿವಶರಾಗಿದ್ದರು. ಶಾಸಕ ಸಿದ್ದು ನ್ಯಾಮಗೌಡರ ಪಾರ್ಥಿವ ಶರೀರವನ್ನು ನಿನ್ನೆಯಿಂದ ಸಾರ್ವಜನಿಕರ ಹಾಗೂ ಅನೇಕ ಗಣ್ಯರ ದರ್ಶನಕ್ಕಾಗಿ ಜಮಖಂಡಿ ತಾಲೂಕಿನ ಕ್ರೀಡಾಂಗಣದಲ್ಲಿ ಇರಿಸಲಾಗಿತ್ತು.
ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ನಾನಾ ಭಾಗದಿಂದ ಲಕ್ಷಾಂತರ ಜನ ಆಗಮಿಸಿ ಶಾಸಕ ನ್ಯಾಮಗೌಡರ ಅಂತಿಮ ದರ್ಶನ ಪಡೆದುಕೊಂಡರು.
ಅಂತಿಮ ಯಾತ್ರೆಯ ಮೆರವಣಿಗೆ
ಇಂದು ತಾಲೂಕಿನ ಕ್ರೀಡಾಂಗಣದಿಂದ ಸಿದ್ದು ನ್ಯಾಮಗೌಡರ ಪಾರ್ಥಿವ ಶರೀರದ ಅಂತಿಮ ಯಾತ್ರೆಯ ಮೆರವಣಿಗೆಗೆ ಜಮಖಂಡಿ ನಗರದ ಪ್ರಮುಖ ಬೀದಿಗಳಲ್ಲಿ ನಡೆದು ಹಿರೇಪಡಸಲಗಿ ಗ್ರಾಮದ ಜಮಖಂಡಿಯ ಶುಗರ್ಸ ಆವರಣದವರೆಗೆ ಜರುಗಿತು.
ಕಂಬನಿ ಮಿಡಿದ ಅಭಿಮಾನಿಗಳು
ಜಮಖಂಡಿ ಶಾಸಕ ರೈತರ ನಾಡಿಯಾಗಿದ್ದರು. ಜನ ಮೆಚ್ಚುಗೆ ಗಳಿಸಿದ ಸಾಧಾರಣ ರಾಜಕಾರಣಿ, ಸಮಾಜಮುಖಿ, ಜನಮುಖಿ ನಾಯಕನನ್ನು ಕಳೆದುಕೊಂಡು ಅನಾಥವಾಗಿದ್ದೇವೆ ಎಂದು ನೆರೆದ ಸಾಕಷ್ಟು ಜನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡ ನಂತರ ದುಃಖ ವ್ಯಕ್ತಪಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಿದ್ದು ನ್ಯಾಮಗೌಡರ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯ ಹಾಗೂ ಇನ್ನಿತರ ಭಾಗದಿಂದ ರಾಜಕೀಯ ನಾಯಕರು ಪಕ್ಷಬೇಧ ಮರೆತು ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಗಣ್ಯರು
ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಕುಡಚಿ ಶಾಸಕ ಪಿ.ರಾಜೀವ್, ಶಾಸಕ ವೀರಣ್ಣ ಚರಂತಿಮಠ, ಮುರುಗೇಶ ನಿರಾಣಿ, ಸಂಸದ ಪಿ.ಸಿ.ಗದ್ದಿಗೌಡರ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ, ಶಾಸಕ ಸತೀಶ ಜಾರಕಿಹೊಳಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, ಎಂ.ಬಿ.ಪಾಟೀಲ್, ಉಮಾಶ್ರೀ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಿದರು.