ಮಗನ ಹುಟ್ಟುಹಬ್ಬಕ್ಕೆ ಶಾಲೆಗೆ ಬಣ್ಣ ಬಳಿಸಿದ ಅಪ್ಪ; ಶಿಕ್ಷಣ ಸಚಿವರ ಶ್ಲಾಘನೆ
ಬಾಗಲಕೋಟೆ, ಆಗಸ್ಟ್ 22: ಮಕ್ಕಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂಬುದು ಬಹುಪಾಲು ಪೋಷಕರ ಬಯಕೆ. ಆದರೆ ಮೊಹಮ್ಮದ್ ಹುಸೇನ್ ಎಂಬುವರು ತಮ್ಮ ಮಗನ ಹುಟ್ಟು ಹಬ್ಬದ ಪ್ರಯುಕ್ತ ತಮ್ಮ ಸ್ವಂತ ಖರ್ಚಿನಲ್ಲಿ ಸರಕಾರಿ ಪ್ರೌಢಶಾಲೆಗೆ ಸುಣ್ಣ ಬಣ್ಣ ಹಚ್ಚಿಸಿದ್ದಾರೆ. ಈ ಮೂಲಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
Recommended Video
ಬಾಗಲಕೋಟೆ ಇಲಕಲ್ಲ ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಡಿ ದರ್ಜೆಯ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಮೊಹಮ್ಮದ್ ಅವರು ತಮ್ಮ ಮಗನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ನಿಟ್ಟಿನಲ್ಲಿ ಅವರು ಕೆಲಸ ಮಾಡುವ ಶಾಲೆಯ ಕಟ್ಟಡಕ್ಕೆ 30 ಸಾವಿರ ರೂಪಾಯಿ ಖರ್ಚು ಮಾಡಿ ಸುಣ್ಣ ಬಣ್ಣ ಹಚ್ಚಿಸಿದ್ದಾರೆ. ಇವರ ಕಾರ್ಯವನ್ನು ಮೆಚ್ಚಿರುವ ಶಿಕ್ಷಣ ಸಚಿವರು ಅಭಿನಂದನಾ ಪತ್ರ ಕಳುಹಿಸಿದ್ದಾರೆ.
ಗಿಡಗಳಿಗೂ ಹುಟ್ಟುಹಬ್ಬ,ಶಾಲೆ ಮಕ್ಕಳ ಪರಿಸರಪ್ರೇಮ
ತಮ್ಮ ಸ್ವಂತ ಖರ್ಚಿನಲ್ಲಿ ಮಗನ ಜನ್ಮದಿನದ ಸಲುವಾಗಿ ಶಾಲೆಗೆ ಸುಣ್ಣ-ಬಣ್ಣ ಹಚ್ಚಿಸಿದ್ದಾರೆ. ಅವರ ಸಾಮಾಜಿಕ ಕಾಳಜಿ ಅನುಕರಣೀಯ. ಅವರ ಆರ್ಥಿಕ ಸ್ಥಿತಿಗತಿಯನ್ನು ಬದಿಗಿಟ್ಟು ಇಂತಹ ಉದಾತ್ತ ಕೆಲಸವನ್ನು ಮಾಡಿರುವ ಇಂಥವರ ಸಂಖ್ಯೆ ವೃದ್ಧಿಸಲಿ ಎಂದು ಪತ್ರದಲ್ಲಿ ಬರೆದಿದ್ದಾರೆ.
ಶಿಕ್ಷಣ ಸಚಿವರ ಮೆಚ್ಚುಗೆಗೆ ಪಾತ್ರದಾದ ಮೊಹಮ್ಮದ್ ಹುಸೇನ್ ಅವರು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗೆ ಜಿ.ಪಂ ಸಿಇಓ ಟಿ.ಭೂಬಾಲನ ಶುಕ್ರವಾರ ಭೇಟಿ ನೀಡಿ ಅವರಿಗೆ ಪ್ರಶಂಸನಾ ಪತ್ರ ನೀಡುವ ಮೂಲಕ ಅವರ ಕುಟುಂಬದವರನ್ನು ಗೌರವಿಸಿದರು. ಅವರ ಮಗನ ಹುಟ್ಟು ಹಬ್ಬದ ಉಡುಗೊರೆಯಾಗಿ ಶಾಲಾ ಬ್ಯಾಗ್ ಮತ್ತು ಸಮವಸ್ತ್ರಗಳನ್ನು ನೀಡಿದರು.